ಮಾದರಿ ಕ್ಷೇತ್ರವನ್ನಾಗಿಸುವುದೇ ಗುರಿ: ಸಚಿವೆ ಹೆಬ್ಬಾಳಕರ

KannadaprabhaNewsNetwork | Published : Nov 27, 2024 1:00 AM

ಸಾರಾಂಶ

ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಮಾದರಿಯಲ್ಲಿ ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂದು ಕನಸು ಕಂಡಿರುವೆ. ಇದಕ್ಕೆ ಕ್ಷೇತ್ರದ ಜನರ ಸಹಕಾರ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಮಾದರಿಯಲ್ಲಿ ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂದು ಕನಸು ಕಂಡಿರುವೆ. ಇದಕ್ಕೆ ಕ್ಷೇತ್ರದ ಜನರ ಸಹಕಾರ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಹಿಂಡಲಗಾ ಗ್ರಾಮದ ರಕ್ಷಕ ಕಾಲೋನಿಯ ಚರಂಡಿ ನಿರ್ಮಾಣದ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರೂ ಯಾವುದೇ ಸಣ್ಣಪುಟ್ಟ ಕೆಲಸಗಳಿದ್ದರೂ ಕೂಡ ಜನರು ನನ್ನ ಬಳಿ ಹೇಳಿಕೊಳ್ಳುತ್ತಾರೆ. ರಸ್ತೆ ಇರಲಿ, ಚರಂಡಿ ಕೆಲಸವೇ ಇರಲಿ, ಒಬ್ಬ ಗ್ರಾಮ ಪಂಚಾಯತಿ ಸದಸ್ಯ ಮಾಡಬಹುದಾದ ಕೆಲಸಗಳನ್ನು ಕೂಡ ವಿಶ್ವಾಸದಿಂದ ನನ್ನ ಬಳಿ ಹೇಳಿಕೊಳ್ಳುತ್ತಾರೆ. ನಾನು ಕೂಡ ಅಷ್ಟೇ ಪ್ರೀತಿಯಿಂದ ಹೇಳಿದ ಕೆಲಸಗಳನ್ನು ಮಾಡಿ ಕೊಡುತ್ತಿದ್ದೇನೆ ಎಂದರು.

ನನ್ನ ಬಳಿ ಹೇಳಿಕೊಂಡರೆ ಪರಿಹಾರ ಸಿಗುತ್ತದೆ ಎನ್ನುವ ಕಾರಣದಿಂದ ಜನರು ತಮ್ಮ ಸಮಸ್ಯೆಗಳನ್ನು ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಾರೆ. ನನ್ನ ಮೇಲಿನ ಪ್ರೀತಿ, ವಿಶ್ವಾಸಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದ ಸಚಿವರು, ನಾನು ಯಾವುದೇ ಪಕ್ಷ ಭೇದವಿಲ್ಲದೆ, ಎಲ್ಲ ಕೆಲಸಗಳನ್ನು ಮಾಡಿಕೊಡುತ್ತಿದ್ದೇನೆ ಎಂದು ಭರವಸೆ ನೀಡಿದರು.ಕಳೆದ 5-6 ವರ್ಷಗಳಿಂದ ಕೈಗೊಂಡ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಲುಕು ಹಾಕಿದ ಸಚಿವರು, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಹಿಂಡಲಗಾ ಗ್ರಾಮದ ಸಾಯಿನಂದನ್ ರೆಸಿಡೆನ್ಸಿ ಹಾಗೂ ಶ್ರೀರಾಮ್ ಕಾಲೋನಿಯ ಚರಂಡಿ ನಿರ್ಮಾಣದ ಕಾಮಗಾರಿ, ತುರಮರಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿ,. ತುರಮರಿ, ಉಚಗಾಂವ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು.ಈ ವೇಳೆ ಮಿನಾಕ್ಷಿ ಹಿತ್ತಲಮನಿ, ವಿಠ್ಠಲ ದೇಸಾಯಿ, ಪ್ರವೀಣ್ ಪಾಟೀಲ್, ರಾಹುಲ್ ಉರನಕರ್, ರೇಣುಕಾ ಬಾತ್ಕಂಡೆ, ಡಿ.ಬಿ.ಪಾಟೀಲ ಸೇರಿದಂತೆ ರಕ್ಷಕ್ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.

Share this article