ಹಿರಿಯೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ದಿನೇ ದಿನೇ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ನಗರದ ನೆಹರೂ ಮೈದಾನದ ರೋಟರಿ ಸಭಾ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಹಿರಿಯೂರು ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಾಗಾರದ ಸಭೆಯಲ್ಲಿ ಅವರು ಮಾತನಾಡಿದರು.ಭಾರತೀಯ ಜನತಾ ಪಾರ್ಟಿಯ ನಾಯಕರು ಹಾಗೂ ಕಾರ್ಯಕರ್ತರು ತಾಲೂಕಿನ ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ ನೂರು ಜನರನ್ನು ಪಕ್ಷದ ಸದಸ್ಯರನ್ನು ಮಾಡುವ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು. ಬೂತ್ ಹಂತದಲ್ಲಿ ಪಕ್ಷ ಬಲಿಷ್ಠವಾಗಬೇಕು ಎಂದರು.
ಈಗಾಗಲೇ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ವಿನಾಶದ ಹಾದಿಯಲ್ಲಿದೆ. ಜನರ ವಿಶ್ವಾಸವನ್ನು ಗಳಿಸುವುದರಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ಮೂರು ವರ್ಷಗಳವರೆಗೆ ಅವರು ಅಧಿಕಾರ ನಡೆಸುವುದೇ ಅನುಮಾನ ಎಂಬಂತಾಗಿದೆ. ಹಗರಣಗಳ ಸುಳಿಯಲ್ಲಿ ಸಿಲುಕಿ ಸರ್ಕಾರ ಒದ್ದಾಡುತ್ತಿದ್ದು ,ಅಭಿವೃದ್ಧಿಯತ್ತ ದೃಷ್ಟಿ ಹರಿಸುವ ವ್ಯವಧಾನವೇ ಅವರಲ್ಲಿ ಕಾಣುತ್ತಿಲ್ಲ ಎಂದು ಹೇಳಿದರು.ಬರುವಂತಹ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜನರ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡು ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶತಃಸಿದ್ಧ ಎಂಬಂತಾಗಿದೆ. 180ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಬಲಿಷ್ಠವಾದ ಸರ್ಕಾರವನ್ನು ನೀಡಲು ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಪಡೆ ಸಿದ್ಧವಿದೆ ಎಂದು ತಿಳಿಸಿದರು.
ರಾಜ್ಯದ ಯಾವ ಭಾಗಕ್ಕೆ ಹೋದರೂ ಭ್ರಷ್ಟಾಚಾರದ ಪ್ರಸ್ತಾಪಗಳೇ ಕಿವಿ ತಟ್ಟುತ್ತಿವೆ. ಯಾವುದೇ ಇಲಾಖೆಯಲ್ಲೇ ಆಗಲಿ ಸಾರ್ವಜನಿಕರು ಅಧಿಕಾರಿಗಳ ಲಂಚಗುಳಿತನಕ್ಕೆ ಬೇಸತ್ತು ಹೋಗಿದ್ದು, ಈ ಸರ್ಕಾರ ಆದಷ್ಟು ಶೀಘ್ರವಾಗಿ ತೊಲಗಲಿ ಎಂದು ಜನ ಛೀಮಾರಿ ಹಾಕುತ್ತಿದ್ದಾರೆ. ಹಾಗಾಗಿ ನಮ್ಮ ಪಕ್ಷದ ಕಾರ್ಯಕರ್ತರು ಇಂತಹ ಹೊತ್ತಲ್ಲಿ ಮೈ ಮರೆಯದೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.ಇನ್ನೂ ಸಮಯವಿದೆ ಎಂಬ ತಾತ್ಸಾರ ಯಾರಲ್ಲೂ ಬೇಡ. ಪಕ್ಷದ ನಿರ್ಧಾರದಂತೆ ಪ್ರತಿ ಬೂತ್ನಲ್ಲೂ ನೂರು ಜನ ಸದಸ್ಯರನ್ನು ತಯಾರು ಮಾಡುವ ಕಾರ್ಯದಲ್ಲಿ ನಾಳೆಯಿಂದಲೇ ತೊಡಗಿ. ಎಷ್ಟು ಶ್ರಮ ಹಾಕುತ್ತಿವೋ ಅಷ್ಟು ಯಶಸ್ಸು ಇರುತ್ತದೆ. ಆದ್ದರಿಂದ ಕಾರ್ಯಕರ್ತರು, ಮುಖಂಡರು ಪಕ್ಷ ಗಟ್ಟಿಗೊಳಿಸಲು ತೊಡಗಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಂಡಲ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಎನ್.ಆರ್.ಲಕ್ಷ್ಮಿಕಾಂತ್, ಎಂ.ಎಸ್.ರಾಘವೇಂದ್ರ, ಜಿಲ್ಲಾ ಸದಸ್ಯತ ಸಮಿತಿ ಸದಸ್ಯ ಜೆ.ಬಿ.ರಾಜು, ಚಂದ್ರಹಾಸ್, ಮಂಜುಳಮ್ಮ, ಅಭಿನಂದನ್, ಎ.ರಾಘವೇಂದ್ರ, ವೇದಮೂರ್ತಿ, ನಂದಿಹಳ್ಳಿ ನಾಗೇಂದ್ರಪ್ಪ, ಪ್ರಜ್ವಲ್, ಪಾರ್ಥ, ಪ್ರಕಾಶ್, ಅಸ್ಗರ್ ಅಹ್ಮದ್, ದಾಸಪ್ಪ, ಆಲಮರದಟ್ಟಿ ಶಿವಣ್ಣ, ಬಸವರಾಜ ನಾಯಕ್ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ಆಟಗಾರರಿಗೆ ಶುಭ ಹಾರೈಸಿದ ಅಶೋಕ್
ನೆಹರೂ ಮೈದಾನದ ಸದಸ್ಯತ್ವ ಕಾರ್ಯಾಗಾರಕ್ಕೆ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರವರು ನೆಹರೂ ಮೈದಾನದಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಖೋ ಖೋ ತರಬೇತಿ ಪಂದ್ಯಾವಳಿಗಳ ಆಟಗಾರರನ್ನು ಮಾತನಾಡಿಸಿ ಶುಭ ಹಾರೈಸಿದರು.