ಕಾರ್ಮಿಕ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅಲ್ಲಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಸನ್ಮಾನ ಗೌರವ ನಡೆದಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಕೃಷಿ ಕೂಲಿ ಕಾರ್ಮಿಕರಿಗೆ ಎಲ್ಲೂ ಸನ್ಮಾನ ಕಾರ್ಯಕ್ರಮ ನಡೆದಿಲ್ಲ. ಕಾರ್ಮಿಕರ ದಿನಾಚರಣೆಯಂದು ಕೃಷಿ ಕಾಮಿಕರನ್ನೂ ಗೌರವಿಸಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೃಷಿ ಕಾರ್ಮಿಕರ ಬೆವರಿನ ಋಣ ನಮ್ಮ ಮೇಲಿದೆ ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಉತ್ತಮ ಬೆಳೆ ಬರಲು, ಹೊಟ್ಟೆ ತುಂಬಾ ಊಟ ಮಾಡಲು ಕೂಡ ಕೃಷಿ ಕಾರ್ಮಿಕರ ಶ್ರಮವಿದೆ. ಅವರ ಶ್ರಮವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಒಕ್ಕಲಿಗರ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ಯಲುವಹಳ್ಳಿ.ಎನ್.ರಮೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಯಲುವಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಯಲುವಹಳ್ಳಿ.ಎನ್.ರಮೇಶ್ ರವರ ತೋಟದಲ್ಲಿ ಭಾನುವಾರ 30 ಕ್ಕೂ ಹೆಚ್ಚು ಕೃಷಿ ಕೂಲಿ ಕಾರ್ಮಿಕರಿಗೆ ಸನ್ಮಾನಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ತೋಟದಲ್ಲಿ ಕಾರ್ಮಿಕರಿಗೆ ಸನ್ಮಾನ
ಕಾರ್ಮಿಕ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅಲ್ಲಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಸನ್ಮಾನ ಗೌರವ ನಡೆದಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಕೃಷಿ ಕೂಲಿ ಕಾರ್ಮಿಕರಿಗೆ ಎಲ್ಲೂ ಸನ್ಮಾನ ಕಾರ್ಯಕ್ರಮ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ನಾವೇ ಏಕೆ ನಮ್ಮ ಹೊಲ, ತೋಟ ಮತ್ತು ಮನೆಯಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕರಿಗೆ ವಿನೊತನವಾಗಿ ಸನ್ಮಾನ ಗೌರವ ಕಾರ್ಯಕ್ರಮ ಮಾಡಬಾರದು ಎಂದು ಯೋಚಿಸಿ ಅವರಿಗೆ ಸನ್ಮಾನ ಮಾಡಿದ್ದೇನೆಂದರು.
ಕೃಷಿ ಕಾರ್ಮಿಕರು ದೇಶ ಕಾಯುವ ಯೋಧರು, ಪೌರ ಕಾರ್ಮಿಕರು, ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುವ, ರಾಜಕೀಯ ಕ್ಷೇತ್ರ ದಲ್ಲಿರುವವರಿಗಿಂತಲೂ ದೊಡ್ಡ ಕಾರ್ಮಿಕರು, ಅವರ ಬೆವರು ಸುರಿಸಿ ದುಡಿದ ಅನ್ನವನ್ನು ನಾವು ತಿನ್ನುತ್ತಿದ್ದೇವೆ. ಆದರಿಂದ ಇಂದು ನಮ್ಮ ಹೊಲ, ತೋಟಗಳಲ್ಲಿ ಬೆಳೆ ಬೆಳೆಯುವಂತಹ ಕಾರ್ಮಿಕರಿಗೆ ಗೌರವ ಕೊಡುವ ಸಲುವಾಗಿ ಕುಟುಂಬ ಸಮೇತ ದವಸ ಧಾನ್ಯ, ಹಾರಹಾಕಿ,ಶಾಲು ಹೊದಿಸಿ, ಸಿಹಿ ನೀಡಿ, ಗೌರವಿಸಿದ್ದೇನೆ ಎಂದರು.
ಕೃಷಿ ಕಾರ್ಮಿಕರನ್ನೂ ಸನ್ಮಾನಿಸಿ
ಕನಿಷ್ಠ ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಗೌರವ ಸನ್ಮಾನ ಮಾಡಲು ತೀರ್ಮಾನಿಸಿ ಅವರು ದುಡಿಯುತ್ತಿರುವ ತೋಟದಲ್ಲೆ ಅವರಿಗೆ ಸನ್ಮಾನಿಸಿ ಗೌರವಿಸಲಾಗಿದೆ. ಪ್ರತಿ ವರ್ಷ ನಡೆಯುವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ಕಾರ್ಮಿಕರಿಗೂ ಸನ್ಮಾನ ಗೌರವ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ 30 ಕ್ಕೂ ಹೆಚ್ಚು ಕೃಷಿ ಕಾರ್ಮಿಕರಿಗೆ, ದ್ರಾಕ್ಷಿ ತೋಟದಲ್ಲಿ ಒಂದು ಕಡೆ ಸೇರಿಸಿ, ತಮ್ಮ ಕುಟುಂಬ ಸದಸ್ಯರೂಡನೆ ಸೇರಿ, ಗೌರವ ಸನ್ಮಾನ ಮಾಡಿ ಸಿಹಿ ಹಂಚಿ ಮಹಿಳಾ ಕಾರ್ಮಿಕರಿಗೆ ಸೀರೆ ಅರಿಶಿಣ, ಕುಂಕುಮ ಬಳೆ ನೀಡಿದರು. ಪುರುಷ ಕಾರ್ಮಿಕರಿಗೆ ಶಾಲು, ಹಾರ, ಸಿಹಿ ಹಂಚಿ, ಎಲ್ಲರಿಗೂ ದವಸ ಮತ್ತು ನಗದು ನೀಡಿದರು.
ಈ ಕಾರ್ಯಕ್ಕೆ ಕಾರ್ಮಿಕರು ಸ್ಪಂದಿಸಿ, ರಮೇಶ್ ಅಣ್ಣಾ ನಮ್ಮೊಡನೆ ಕುಟುಂಬ ಸದಸ್ಯರಂತೆ ಇರ್ತಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದೇವೆ ನಮ್ಮನ್ನು ಅವರ ಕುಟುಂಬದವರೆ ಎಂದು ಭಾವಿಸಿ ನಮ್ಮ ಕಷ್ಟಗಳಿಗೆ ಯಾವತ್ತು ಇಲ್ಲ ಎಂದಿಲ್ಲ. ದೇವರು ರಮೇಶ್ ಅಣ್ಣಾ ಕುಟುಂಬಕ್ಕೆ ಆಯಸ್ಸು, ಆರೋಗ್ಯ, ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದರು. ಈ ವೇಳೆ ಯಲುವಹಳ್ಳಿ.ಎನ್.ರಮೇಶ್ ಕುಟುಂಬದ ಎಲ್ಲ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.