ಬೀರೂರು: ಕರಿಗಲ್ ಬೀದಿಯಲ್ಲಿರುವ ಗ್ರಾಮದೇವತೆ ಶ್ರೀಅಂತರಘಟ್ಟಮ್ಮ ದೇವಿಯ ರಥೋತ್ಸವ ಮಾಘ ಮಾಸದ ಹುಣ್ಣಿಮೆಯ ಮೊದಲ ಮಂಗಳವಾರ ಶ್ರದ್ಧಾಭಕ್ತಿ, ಸಡಗರ ಹಾಗೂ ವೈಭವದಿಂದ ಜರುಗಿತು. ಜ.25ರಂದು ಭಾನುವಾರದಿಂದಲೇ ಅಮ್ಮನವರಿಗೆ ನಿತ್ಯವೂ ಶ್ರೀಮದ್ಭಗವತ್ ಪೂಜಾ ಕೈಂಕರ್ಯಗಳು ನಡೆದವು. ಸಂಜೆ ದ್ವಜಾರೋಹಣೆ, ತವರು ಮನೆಯಲ್ಲಿ ಕಂಕಣಧಾರಣೆ ಸೇವೆ ಸಲ್ಲಿಸಿ ಜ.26 ಸೋಮವಾರ ಗಣಂಗಳ ಸೇವೆ, ರಾತ್ರಿ ದುಗ್ಗಳ ಸೇವೆ, ಬ್ರಹ್ಮರಥೋರೋಹಣ ನಡೆಸಲಾಗಿತ್ತು.
ಹಿಂದೆಯೇ ಶೃಂಗಾರದೊಂದಿಗೆ ಸಾಗುತ್ತಿದ್ದ 68ಕ್ಕೂ ಹೆಚ್ಚಿನ ಜೋಡೆತ್ತುಗಳ ಪಾನಕದ ಬಂಡಿಗಳ ಮೆರವಣಿಗೆ ಅಮ್ಮನವರ ರಥ ಓರೆಯಾಗಿ ಸ್ಥಗಿತಗೊಂಡ ನಂತರ ಪಾನಕದ ಬಂಡಿಗಳ ಓಟ ಸಾಗಿ ಮಹಾನವಮಿ ಬಯಲಿನಲ್ಲಿ ನೆರೆದಿದ್ದ ಭಕ್ತವೃಂದಕ್ಕೆ ಪಾನಕವನ್ನು ವಿತರಿಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯ ಜನಸಾಗರ ರಥದ ಮೇಲೆ ಬಾಳೆಯ ಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.
ಬಳಿಕ ರಥವನ್ನು ಹಳೆಪೇಟೆಯಿಂದಾ ಶಿವಾಜಿನಗರದ ಆಲದಮರದವರೆಗೂ ಸಾಗಿಸಿ ವಾಪಸು ದೇವಾಲಯಕ್ಕೆ ಕರೆತರಲಾಯಿತು.ಪಾನಕದ ಬಂಡಿಯ ಓಟದಲ್ಲಿ ಸುಮಾರು 68 ಗಾಡಿಗಳು ಪಾಲ್ಗೊಂಡಿದ್ದವು. ರಸ್ತೆಯ ಬದಿಯಲ್ಲಿ ನಿಂತು ನೋಡಬೇಕಾದ ಜನ ಸೂಕ್ತ ಬಂದೊಬಸ್ತು ಇದ್ದರು. ರಸ್ತೆಗೆ ಬಂದು ಅವರನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡಬೇಕಾಯಿತು.
ಬುಧವಾರ ಅಮ್ಮನವರಿಗೆ ಓಕುಳಿ ಉತ್ಸವ, ಮುಖಾರ್ಚನೆ, ಸಂಜೆ ಪುಷ್ಪಮಂಟಪದಲ್ಲಿ ಶ್ರೀ ಅಮ್ಮನವರನ್ನು ಊರಿನ ರಾಜಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಉತ್ಸವ ನಡೆಸಲಾಯಿತು. ದೇವಸ್ಥಾನದ ಗುಡಿಕಟ್ಟಿನ ಗೌಡರು, ಪಟ್ಟಣದ ಹಿರಿಯ ಮುಖಂಡರು, ಗ್ರಾಮದೇವತೆ ಒಕ್ಕಲಿನ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಪರಾಕಾಷ್ಠೆ ಮೆರೆದರು.
ಮೊದಲು ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ. ತೇರಿಗೆ ಡಿಕ್ಕಿಯೊಡೆದೊಡನೆ ಎತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಅರ್ಧ ಗಂಟೆ ಬಳಿಕ ಎತ್ತನ್ನು ಸಂತೈಸಿ ಮತ್ತೆ ಪಾನಕದ ಬಂಡಿ ಹೊರಟಿತು.
ತೇರಿಗೆ ಎತ್ತಿನಗಾಡಿಯೂ ಡಿಕ್ಕಿಯೊಡೆದು ಎತ್ತುಗಳಿಗೂ ಸಂಕಷ್ಟವಾಗಿತ್ತು. ಬ್ಯಾರಿಕೇಡ್ ಇದ್ದರೂ ದಾಟಿ ಮುಂದೆ ಬಂದು ಜನ ಎತ್ತುಗಳನ್ನು ಬೆದರಿಸುತ್ತಾರೆ. ಜನರ ಕೂಗಾಟ ಕಂಡು ಗಾಬರಿಯಾಗಿ ಮನಸ್ಸೋ ಇಚ್ಛೆ ರಾಸುಗಳು ಓಡಿ ಈ ಘಟನೆ ಸಂಭವಿಸಿದೆ.