ಅಂಗವಿಕಲತೆ ದೂರ ಮಾಡುವ ಮಹತ್ತರ ಕಾರ್ಯ: ಬಿಇಒ

KannadaprabhaNewsNetwork |  
Published : Jan 10, 2025, 12:47 AM IST
8ಕೆಪಿಎಲ್1:ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ  ಗವಿಸಿದ್ದೇಶ್ವರ ಜಾತ್ರೆಯ ಜಾಗೃತಿಯ ಪೂರ್ವಭಾವಿ ಸಭೆ ಜರುಗಿತು.  | Kannada Prabha

ಸಾರಾಂಶ

ಗವಿಸಿದ್ದೇಶ್ವರ ಜಾತ್ರೆಯ ಧ್ಯೇಯವಾಗಿರುವ ಸಕಲಚೇತನ, ವಿಕಲಚೇತನರ ನಡೆ ಸಕಲ ಚೇತನದ ಕಡೆ ಎಂಬುದು ಅಂಗವಿಕಲತೆಯನ್ನು ದೂರ ಮಾಡುವ ಮಹತ್ವದ ಕಾರ್ಯವಾಗಿದೆ.

ಜಾತ್ರಾ ಜಾಗೃತಿ ಜಾಥಾದ ಪೂರ್ವಭಾವಿ ಸಭೆಯಲ್ಲಿ ಶಂಕ್ರಯ್ಯ ಟಿ.ಎಸ್.

ಕನ್ನಡಪ್ರಭ ವಾರ್ತೆ ಕೊಪ್ಪಳ

ಗವಿಸಿದ್ದೇಶ್ವರ ಜಾತ್ರೆಯ ಧ್ಯೇಯವಾಗಿರುವ ಸಕಲಚೇತನ, ವಿಕಲಚೇತನರ ನಡೆ ಸಕಲ ಚೇತನದ ಕಡೆ ಎಂಬುದು ಅಂಗವಿಕಲತೆಯನ್ನು ದೂರ ಮಾಡುವ ಮಹತ್ವದ ಕಾರ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಟಿ.ಎಸ್. ಹೇಳಿದರು.

ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ ಗವಿಸಿದ್ದೇಶ್ವರ ಜಾತ್ರೆಯ ಜಾಗೃತಿ ಜಾಥಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಅಂಗವಿಕಲತೆಯನ್ನು ದೂರ ಮಾಡುವ ಮಹತ್ವದ ಕಾರ್ಯ ಇದಾಗಿದೆ. ಈ ಜಾಗೃತಿ ಜಾಥಾದಲ್ಲಿ ಭಾಗವಹಿಸುವುದರ ಮೂಲಕ ಹೆಚ್ಚಿನ ಅರಿವನ್ನು ಮೂಡಿಸಬೇಕಾಗಿದೆ ಎಂದರು.ಶ್ರೀ ಗವಿಮಠದ ಜಾತ್ರಾಮಹೋತ್ಸವವೆಂದರೆ ಧಾರ್ಮಿಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಗೃತಿ. ಈ ವರ್ಷವೂ ಸಹ ವಿನೂತನವಾದ ಜಾಗೃತಿ ಮೂಡಿಸಲು ಶ್ರೀಮಠವು ಹೊಸ ಸಂಕಲ್ಪದೊಂದಿಗೆ ಸಿದ್ಧವಾಗಿದೆ. ಈ ಒಂದು ಸತ್ಕಾರ್ಯಕ್ಕೆ ಭಕ್ತರು, ಜಿಲ್ಲಾಡಳಿತ, ಜಿಲ್ಲೆಯ ವಿವಿಧ ಇಲಾಖೆಗಳು, ಸಂಘ-ಶಾಲಾ ಸಂಸ್ಥೆಗಳ ಸಹಕಾರ ಮರೆಯುವಂತಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಸೋಮರಡ್ಡಿ ಅಳವಂಡಿ, ಶ್ರೀಮಠದ ಜಾಗೃತಿ ಜಾಥಾ ಈ ವರ್ಷವೂ ಸಹ ಸಾರ್ವತ್ರಿಕ ಸಹಕಾರ, ಪ್ರೋತ್ಸಾಹದೊಂದಿಗೆ ಸಾಮಾಜಿಕ ಧ್ಯೇಯ ವಿಷಯವಾಗಿ ‘ಸಕಲಚೇತನ’ ಎಂಬ ಶೀರ್ಷಿಕೆಯ ಅಡಿಯಲ್ಲಿ ವಿಕಲಚೇತನರ ನಡೆ ಸಕಲಚೇತನದ ಕಡೆ ಎಂಬ ಘೋಷ ವಾಕ್ಯದೊಂದಿಗೆ ಉಚಿತವಾಗಿ ಕೃತಕ ಕೈಕಾಲು, ಅಂಗಾಂಗಗಳ ಜೋಡಣೆ ಹಾಗೂ ಶ್ರವಣ ಸಾಧನ ವಿತರಣೆ ಜರುಗುತ್ತಿದೆ ಎಂದು ಹೇಳಿದರು.

ಡಿವೈಎಸ್ಪಿ ಮುತ್ತಣ್ಣ ಸರವಗೋಳ ಮಾತನಾಡಿ, ಜ. ೧೧ರ ಬೆಳಗ್ಗೆ ೮.೩೦ಕ್ಕೆ ಜಾಥಾವು ಕೊಪ್ಪಳದ ಬಾಲಕಿಯರ ಸರ್ಕಾರಿ ಕಾಲೇಜಿನ ಮೈದಾನ(ತಾಲೂಕು ಕ್ರೀಡಾಂಗಣ) ದಿಂದ ಚಾಲನೆಗೊಂಡು ಆರಂಭವಾಗಿ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬದ ಮೂಲಕ ಶ್ರೀಗವಿಮಠದ ಜಾತ್ರಾ ಮಹಾದಾಸೋಹಕ್ಕೆ ತಲುಪಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಪ್ರಮುಖರಾದ ರಾಘವೇಂದ್ರ ಪಾನಗಂಟಿ, ಕೆ.ಜಿ. ಕುಲಕರ್ಣಿ, ಮಲ್ಲಿಕಾರ್ಜುನ ಚೌಕಿಮಠ, ಪ್ರಹ್ಲಾದ ಅಗಳಿ ಇತರರಿದ್ದರು. ರಾಜೇಶ ಯಾವಗಲ್ ನಿರೂಪಿಸಿ, ಮಲ್ಲಿಕಾರ್ಜುನ ಹ್ಯಾಟಿ ಸ್ವಾಗತಿಸಿದರು.

ಜಾಥಾಕ್ಕೆ ಸಾಥ್:

ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶ್ರೀ ಗವಿಮಠ, ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಕೊಪ್ಪಳ, ಶ್ರೀ ಮಹಾವೀರ ಲಿಂಬ್ ಸೆಂಟರ್, ಹುಬ್ಬಳ್ಳಿ ಮತ್ತು ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ಸ್ಥಳಿಯ ಮಹಿಳಾ ಸಂಘಗಳು ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಜಾಥಾ ಜರುಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!