ಇಸ್ರೇಲ್ ಮಾದರಿಗಿಂತ ಕೃಷಿ ವಿದ್ಯಾರ್ಥಿಗಳ ಮಾರ್ಗದರ್ಶನ ಸಾಕು

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಕೃಷಿಯಲ್ಲಿ ತನ್ನದೇ ಆದಂತಹ ಪರಿಹಾರಗಳನ್ನು ಕಂಡುಕೊಂಡು ಇಸ್ರೇಲ್ ನ ರೈತರು ಬೆಳೆ ಬೆಳೆಯುತ್ತಿದ್ದಾರೆ. ಆದರೆ ನಮ್ಮ ಭಾಗದಲ್ಲಿ ಜಿಕೆವಿಕೆಯ ಪ್ರತಿಭಾವಂತ ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಿದರೆ ಸಾಕು, ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಶಾಸಕ ಶರತ್ ಬಚ್ಚೇಗೌಡ ಅಭಿಮತ । ಜಿಕೆವಿಕೆಯಿಂದ ಇಟ್ಟಸಂದ್ರ ಗ್ರಾಮದಲ್ಲಿ ‘ಕೃಷಿಸಿರಿ’ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊಸಕೋಟೆ

ಕೃಷಿಯಲ್ಲಿ ತನ್ನದೇ ಆದಂತಹ ಪರಿಹಾರಗಳನ್ನು ಕಂಡುಕೊಂಡು ಇಸ್ರೇಲ್ ನ ರೈತರು ಬೆಳೆ ಬೆಳೆಯುತ್ತಿದ್ದಾರೆ. ಆದರೆ ನಮ್ಮ ಭಾಗದಲ್ಲಿ ಜಿಕೆವಿಕೆಯಂತಹ ಪ್ರತಿಭಾವಂತ ಮಕ್ಕಳು ಮಾರ್ಗದರ್ಶನ ನೀಡಿದರೆ ಸಾಕು, ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮದಲ್ಲಿ ಜಿಕೆವಿಕೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ “ಕೃಷಿಸಿರಿ” ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಹಾಗೂ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪರಸ್ಪರ ಕೃಷಿಯ ಬಗ್ಗೆ ಅರಿವು ಪಡೆದುಕೊಳ್ಳುವುದರ ದೃಷ್ಟಿಯಿಂದ ಜಿಕೆವಿಕೆ ವಿದ್ಯಾರ್ಥಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಸರಳವಾಗಿ ಪೌಷ್ಟಿಕಾಂಶಯುಕ್ತ ಹಣ್ಣು, ತರಕಾರಿ ಬೆಳೆಯುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳುವಳಿಕೆ ಕೊಟ್ಟಿರುವುದು ಶ್ಲಾಘನೀಯ. ದೇಶದ ಬೆನ್ನುಲುಬು ರೈತರಾಗಿದ್ದು, ಅತಿವೃಷ್ಟಿ, ಅನಾವೃಷ್ಟಿಯನ್ನು ದಿಟ್ಟವಾಗಿ ಎದುರಿಸಿ ದೇಶಕ್ಕೆ ಅನ್ನ ನೀಡುತ್ತಿದ್ದಾನೆ, ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನವು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿದೆ. ಇದು ರೈತರಿಗೆ ಆಹಾರ ಭದ್ರತೆ ಮತ್ತು ಆದಾಯವನ್ನು ಸುಧಾರಿಸಿದೆ. ರೈತರಿಗೆ ಲಾಭದಾಯಕ ಕೃಷಿಯಾಗಬೇಕಾದರೆ ವೈಜ್ಞಾನಿಕ ಕೃಷಿ ಹಾಗೂ ಪರಂಪರಾಗತವಾಗಿ ಪೂರ್ವಜರು ಅನುಸರಿಸುತ್ತಿದ್ದ ಪದ್ಧತಿಯನ್ನು ತೊರೆದು, ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಎಂದರು.

ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಮಾತನಾಡಿ, ಕೃಷಿಯನ್ನೇ ನಂಬಿರುವ ರೈತರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದುವುದರ ಬಗ್ಗೆ ತಿಳಿಸಿಕೊಡಲು ಜಿಕೆವಿಕೆ ನಿರಂತರವಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಕೂಡ ತಮ್ಮ ಕುಟುಂಬವನ್ನು ತೊರೆದು ೩ ತಿಂಗಳು ವಾಸ್ತವ್ಯ ಹೂಡಿ ಕೃಷಿ ಅರಿವು ಪಡೆದುಕೊಳ್ಳುವುದು ಉತ್ತಮ ಬೆಳವಣಿಗೆ. ನಮ್ಮ ದೇಶ ಉಳಿಯಬೇಕಾದರೆ ಅದು ರೈತರಿಂದ ಮಾತ್ರ ಸಾಧ್ಯ. ರೈತರ ಸಂಖ್ಯೆ ಹೆಚ್ಚಳವಾಗಬೇಕು. ಜಮೀನು ಮಾರುವುದರ ಬದಲಾಗಿ ಕೃಷಿಗೆ ಬಳಸಿಕೊಳ್ಳುವ ಮೂಲಕ ಮಾದರಿಯಾಗಬೇಕು ಎಂದರು.

ಜಿಕೆವಿಕೆ ಕುಲಪತಿ ಎಸ್.ವಿ.ಸುರೇಶ್ ಮಾತನಾಡಿ, ಜಗತ್ತು ಕೃಷಿಯ ಮೇಲೆ ಅವಲಂಬಿತವಾಗಿದೆ. ಭಾರತ ಮೊದಲು ಕೃಷಿ ಕ್ಷೇತ್ರದಲ್ಲಿ ಹಿಂದುಳಿದಿತ್ತು, ಆದರೆ ಹಸಿರು ಕ್ರಾಂತಿಯಿಂದಾಗಿ ಕೃಷಿಯಲ್ಲಿ ಸ್ವಾವಲಂಬಿಯಾಗಿದೆ. ರೈತರು ಬೇಸಾಯದಲ್ಲಿ ಹಲವಾರು ವರ್ಷಗಳಿಂದ ಪಡೆದಿರುವ ಪರಿಣಿತಿಯನ್ನು ಜಿಕೆವಿಕೆ ವಿದ್ಯಾರ್ಥಿಗಳಿಗೆ ಕಲಿಯುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಉಲ್ಲಾಸ್, ಡಾ. ಎಂ.ಬಿ.ಪ್ರಕಾಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಮುಖಂಡ ಐ.ಸಿ.ಮುನಿಶಾಮಗೌಡ, ಗ್ರಾಪಂ ಅಧ್ಯಕ್ಷೆ ಬಿಂದು ದೇವೇಗೌಡ, ಸದಸ್ಯರಾದ ರಮೇಶ್, ರೂಪ ಚನ್ನಕೇಶವ, ರಾಮಾಂಜಿನಪ್ಪ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಿ. ನಾರಾಯಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಎಸ್‌ಎಫ್‌ಸಿಎಸ್ ನಿರ್ದೇಶಕ ಎಸ್. ಮಂಜುನಾಥ್, ಪಿಡಿಒ ಪುಷ್ಪಲತಾ ಹಾಜರಿದ್ದರು.

-----

Share this article