ಸಮಾಜ ತಿದ್ದಿ, ಮುನ್ನಡೆಸೋದೇ ಗುರುವಿನ ಆದ್ಯಕರ್ತವ್ಯ

KannadaprabhaNewsNetwork | Published : Aug 5, 2024 12:42 AM

ಸಾರಾಂಶ

ಮನುಷ್ಯರಲ್ಲಿ ಅರಿವು ಮತ್ತು ಮರೆವು ಎರಡು ಇದೆ. ಅರಿವನ್ನು ಜಾಗೃತಿಗೊಳಿಸುವ ಶಕ್ತಿ ಶ್ರೀಗುರುವಿಗೆ ಇದೆ. ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡಿ, ಮುನ್ನಡೆಸುವುದೇ ಗುರುವಿನ ಆದ್ಯಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನುಡಿದಿದ್ದಾರೆ.

- ಶ್ರೀ ಸಿದ್ದಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆಯಲ್ಲಿ ರಂಭಾಪುರಿ ಶ್ರೀ ಆಶೀರ್ವಚನ । ತಾವರೆಕೆರೆ ಶಿಲಾಮಠದಲ್ಲಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಮನುಷ್ಯರಲ್ಲಿ ಅರಿವು ಮತ್ತು ಮರೆವು ಎರಡು ಇದೆ. ಅರಿವನ್ನು ಜಾಗೃತಿಗೊಳಿಸುವ ಶಕ್ತಿ ಶ್ರೀಗುರುವಿಗೆ ಇದೆ. ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡಿ, ಮುನ್ನಡೆಸುವುದೇ ಗುರುವಿನ ಆದ್ಯಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನುಡಿದರು.

ಭಾನುವಾರ ತಾಲೂಕಿನ ತಾವರೆಕೆರೆ ಶಿಲಾಮಠದ ಸಿದ್ದಿಪುರುಷ ಲಿಂಗೈಕ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯರ 53ನೇ ವಾರ್ಷಿಕ ಪುಣ್ಯಸ್ಮರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು. ಹಣತೆ ತನಗಾಗಿ ಉರಿಯುವುದಿಲ್ಲ. ಅದು ಪರರಿಗೆ ಬೆಳಕು ಕೊಡುವಂತೆ, ನಂಬಿದ ಭಕ್ತನ ಬಾಳು ಬೆಳಗಿಸಲು ಗುರುವು ಸದಾ ಶ್ರಮಿಸುತ್ತಾನೆ ಎಂದರು.

ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆಹಾರ ಆರೋಗ್ಯ ಮತ್ತು ಅಧ್ಯಾತ್ಮ ಚಿಂತನೆ ಬಹಳ ಮುಖ್ಯವಾಗಿದೆ. ವೀರಶೈವ ಧರ್ಮವಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರೀ ಗುರುವಿನ ಮಹತ್ವವನ್ನು ಸಿದ್ಧಾಂತ ಶಿಕಾಮಣಿಯಲ್ಲಿ ನಿರೂಪಿಸಿದ್ದಾರೆ ಎಂದರು.

ಪರಶಿವನ ಸಾಕಾರ ರೂಪವೇ ಗುರುವೆಂದು ಶಾಸ್ತ್ರ ಸಿದ್ಧಾಂತಗಳು ಹೇಳುತ್ತವೆ. ಶಿಲಾಮಠದ ಸಿದ್ದಿ ಪುರುಷ ಲಿಂಗೈಕ್ಯ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರ ಬಾಳಿಗೆ ಅಜ್ಞಾನ ಕಳೆದು ಜ್ಞಾನದ ಬೆಳಕನ್ನು ತೋರಿದವರು. ಸಿದ್ದಿ ಪುರುಷರಾದ ಅವರಿಗೆ ಇಡೀ ಸಮಾಜ ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. 53ನೇ ಪುಣ್ಯ ಸ್ಮರಣೋತ್ಸವ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸಮಾರಂಭ ನೇತೃತ್ವ ವಹಿಸಿದ್ದ ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಕಲಿಕೆ, ಗಳಿಕೆ ಮತ್ತು ಭಗವಂತನ ಚಿಂತನೆಯಲ್ಲಿ ಹೆಜ್ಜೆ ಹಾಕಬೇಕು. ಬೌದ್ಧಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಪ್ರಜ್ಞೆ ಮತ್ತು ಸದಾಚಾರ ಮುಖ್ಯ. ಲಿಂಗೈಕ್ಯ ಸಿದ್ದಲಿಂಗ ಮತ್ತು ಚಂದ್ರಶೇಖರ ಶ್ರೀಗಳು ಶಿಲಾಮಠದ ಎರಡು ಕಣ್ಣುಗಳಾಗಿ ಭಕ್ತರ ಭಾಳಿಗೆ ಶಕ್ತಿ ತುಂಬಿದವರು ಎಂದು ಸ್ಮರಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದ ಉದ್ದಾರಕ್ಕೆ ವೀರಶೈವ ಪೀಠ ಮಠಗಳ ಕೊಡುಗೆ ಅಪಾರವಾಗಿದೆ. ಶಿಕ್ಷಣ ಮತ್ತು ಸಂಸ್ಕಾರ ಕೊಟ್ಟ ಕೀರ್ತಿ ಮಠಗಳಿಗೆ ಸಲ್ಲುತ್ತದೆ. ಲಿಂಗೈಕ್ಯ ಶ್ರೀಗಳವರ ಚಿಂತನೆಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

ಮುಖ್ಯ ಅತಿಥಿ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ವೀರಶೈವ ಧರ್ಮಕ್ಕೆ ಮಠಗಳ ಕೊಡುಗೆ ಅಪಾರವಾಗಿವೆ. ಭಕ್ತಸಮೂಹಕ್ಕೆ ಉತ್ತಮ ಸಂಸ್ಕಾರ, ಸದ್ವಿಚಾರಗಳನ್ನು ಬೋಧಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಗಳನ್ನು ನಡೆಸಲಾಗುತ್ತಿದೆ. ಶಿಲಾಮಠದ ಲಿಂಗೈಕ್ಯ ಉಭಯ ಶ್ರೀಗಳು ಧರ್ಮಮುಖಿ ಮತ್ತು ಸಮಾಜಮುಖಿಯಾಗಿ ಕಾರ್ಯ ಮಾಡಿದ್ದನ್ನು ಮರೆಯಲಾಗದು ಎಂದರು.

ಕೆ.ಬಿದರೆ ದೊಡ್ಡ ಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯರು, ಚಿಕ್ಕಮಗಳೂರಿನ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಚಂಡೇಗೆರೆ ಗಂಗಾಧರ ಶಿವಾಚಾರ್ಯರು, ಹುಲಿಕೆರೆ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಹಾರನಹಳ್ಳಿಯ ಶ್ರೀ ಶಿವಯೋಗಿ ಶಿವಾಚಾರ್ಯರು, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಭಾಗವಹಿಸಿದ್ದರು.

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರು ಅವರ ಇಷ್ಟಲಿಂಗ ಮಹಾಪೂಜೆ ನಡೆಯಿತು. ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ರುದ್ರಾಭೀಷೇಕ, ಅಷ್ಟೋತ್ರ ಪೂಜೆ ನಡೆಯಿತು. ಭಕ್ತಗರಿಗೆ ಅನ್ನ ದಾಸೋಹ ನಡೆಯಿತು.

- - - -4ಕೆಸಿಎನ್‌ಜಿ3:

ಚನ್ನಗಿರಿ ತಾಲೂಕಿನ ತಾವರೆಕೆರೆ ಶಿಲಾಮಠದ ಸಿದ್ದಿಪುರುಷ ಲಿಂ. ಶ್ರೀ ಸಿದ್ದಲಿಂಗ ಶಿವಾಚಾರ್ಯರ 53ನೇ ವಾರ್ಷಿಕ ಪುಣ್ಯಸ್ಮರಣೆ ಸಮಾರಂಭದಲ್ಲಿ ರಂಭಾಪುರಿ ಶ್ರೀಗಳು ಆಶೀರ್ವಚನ ನೀಡಿದರು.

Share this article