ಜಾನುವಾರು ಕಾಯುತ್ತಿದ್ದ ಕೈ ರಾಷ್ಟ್ರರಕ್ಷಣೆಗೂ ಜೈ

KannadaprabhaNewsNetwork |  
Published : Aug 24, 2026, 01:30 AM IST
23ಕೆಪಿಎಂಎಸ್‌ಕೆ01ಮತ್ತು02:ಹುಸೇನಪ್ಪ ಶಾಸ್ತ್ರಿ ಅವರ ಚಿತ್ರಗಳು | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಬೆಳಗಾಗುತ್ತಿದ್ದಂತೆ ದನಗಳ ಹಿಂಡಿನೊಂದಿಗೆ ಹೊಲದ ದಾರಿ ಹಿಡಿಯುತ್ತಿದ್ದ ಬಾಲಕನೊಬ್ಬ 15 ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ಗಡಿಯಲ್ಲಿ ಬಂದೂಕು ಹಿಡಿದು ದೇಶದ ರಕ್ಷಣೆಗಾಗಿ ನಿಂತಿದ್ದಾನೆ. ಕಡುಬಡತನದ ಸಂದರ್ಭದಲ್ಲಿ ಜಾನುವಾರು ಕಾಯುತ್ತಿದ್ದ ಆ ಕೈಗಳೇ ರಾಷ್ಟ್ರದ ರಕ್ಷಣೆಯ ಹೊಣೆ ಹೊತ್ತಿವೆ. ಇದು ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದ ಹುಸೇನಪ್ಪ ದುರ್ಗಪ್ಪ ಶಾಸ್ತ್ರಿ ಅವರ ಬದುಕಿನ ಸ್ಫೂರ್ತಿದಾಯಕ ಪಯಣವಾಗಿದೆ.

ಇಂದರಪಾಶ ಚಿಂಚರಕಿ

ಕನ್ನಡಪ್ರಭ ವಾರ್ತೆ ಮಸ್ಕಿ

ಗ್ರಾಮೀಣ ಪ್ರದೇಶದಲ್ಲಿ ಬೆಳಗಾಗುತ್ತಿದ್ದಂತೆ ದನಗಳ ಹಿಂಡಿನೊಂದಿಗೆ ಹೊಲದ ದಾರಿ ಹಿಡಿಯುತ್ತಿದ್ದ ಬಾಲಕನೊಬ್ಬ 15 ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ಗಡಿಯಲ್ಲಿ ಬಂದೂಕು ಹಿಡಿದು ದೇಶದ ರಕ್ಷಣೆಗಾಗಿ ನಿಂತಿದ್ದಾನೆ. ಕಡುಬಡತನದ ಸಂದರ್ಭದಲ್ಲಿ ಜಾನುವಾರು ಕಾಯುತ್ತಿದ್ದ ಆ ಕೈಗಳೇ ರಾಷ್ಟ್ರದ ರಕ್ಷಣೆಯ ಹೊಣೆ ಹೊತ್ತಿವೆ. ಇದು ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದ ಹುಸೇನಪ್ಪ ದುರ್ಗಪ್ಪ ಶಾಸ್ತ್ರಿ ಅವರ ಬದುಕಿನ ಸ್ಫೂರ್ತಿದಾಯಕ ಪಯಣವಾಗಿದೆ.

ತಾಲೂಕು ವ್ಯಾಪ್ತಿಯ ಮಟ್ಟೂರು ಗ್ರಾಮದಲ್ಲಿ ಬಡತನದ ನಡುವೆ ಹುಟ್ಟಿದರೂ ಹುಸೇನಪ್ಪ ಅವರ ಕನಸುಗಳು ಮಾತ್ರ ಬಡವಾಗಿರಲಿಲ್ಲ. ಏಳು ಸಹೋದರರು ಹಾಗೂ ಒಬ್ಬ ಅಕ್ಕ ಸೇರಿದಂತೆ ಎಂಟು ಜನರ ಕುಟುಂಬದಲ್ಲಿ ಬೆಳೆದ ಅವರಿಗೆ ಬಾಲ್ಯದಲ್ಲೇ ದುಡಿಮೆಯ ಅನಿವಾರ್ಯತೆ ಎದುರಾಗಿತ್ತು. ಮನೆ–ಹೊಲದ ಕೆಲಸ, ಜಾನುವಾರುಗಳ ಪಾಲನೆ ಮಾಡುತ್ತಲೇ ಅವರು ವಿದ್ಯಾಭ್ಯಾಸ ಮುಂದುವರಿಸಿದರು.

ದುಡಿಮೆಯ ಹಣದಲ್ಲೇ ಓದು: ಪುಸ್ತಕ ಹಿಡಿಯಬೇಕಾದ ವಯಸ್ಸಿನಲ್ಲಿ ದುಡಿಮೆಯ ಹೊರೆ ಹೊತ್ತಿದ್ದರೂ, ಓದಿನ ಮೇಲಿನ ಆಸಕ್ತಿ ಕಡಿಮೆಯಾಗಲಿಲ್ಲ. ತಾವು ದುಡಿದು ಗಳಿಸಿದ ಹಣದಲ್ಲೇ ವಿದ್ಯಾಭ್ಯಾಸದ ಖರ್ಚು ಭರಿಸಿಕೊಂಡು ಮಟ್ಟೂರಿನಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು.

ಕಷ್ಟಗಳ ನಡುವೆಯೂ ಕ್ರೀಡೆಯನ್ನು ಕೈಬಿಡದ ಹುಸೇನಪ್ಪ, ಕಬ್ಬಡಿ ಕ್ರೀಡೆಯಲ್ಲಿ ತಮ್ಮದೇ ಛಾಪು ಮೂಡಿಸಿದರು. ಎರಡು ಬಾರಿ ರಾಜ್ಯಮಟ್ಟದ ಕಬ್ಬಡಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ತಮ್ಮ ಪ್ರತಿಭೆ ಮೆರೆದರು. ಕ್ರೀಡಾಂಗಣದಲ್ಲಿ ಬೆಳೆದ ಆತ್ಮವಿಶ್ವಾಸವೇ ಮುಂದೆ ಸೇನೆಯ ಕಠಿಣ ಪರೀಕ್ಷೆಗಳನ್ನು ಎದುರಿಸುವ ಶಕ್ತಿಯಾಯಿತು.

ಪ್ರೌಢ ಶಿಕ್ಷಣದ ಬಳಿಕ ಲಿಂಗಸುಗೂರಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದರು. ಮುಂದೇನು ಎಂಬ ಪ್ರಶ್ನೆ ಕಾಡುತ್ತಿದ್ದ ಸಂದರ್ಭದಲ್ಲಿ ಸಂತೆಕೆಲ್ಲೂರಿನ ಶ್ರೀ ಘನಮಠ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಪ್ರವಚನ ನೀಡಲು ಆಗಮಿಸಿದ್ದ ಪ್ರಸಿದ್ಧ ಪ್ರವಚನಕಾರ ಶ್ರೀ ಈಶ್ವರ್ ಮಂಟೂರ್ ಅವರ ಮಾತುಗಳು ಹುಸೇನಪ್ಪ ಅವರ ಮನಸ್ಸಿನಲ್ಲಿ ಹೊಸ ಕನಸಿಗೆ ಕಿಚ್ಚು ಹಚ್ಚಿದವು.ದೇಶ ಸೇವೆಯ ಕುರಿತು ಅವರ ಮಾತುಗಳಿಂದ ಪ್ರೇರಿತರಾದ ಹುಸೇನಪ್ಪ ಸೇನಾ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿದರು. ಕಠಿಣ ದೈಹಿಕ ಹಾಗೂ ಇತರ ಆಯ್ಕೆ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿ ಭಾರತೀಯ ಸೇನೆಗೆ ಆಯ್ಕೆಯಾದರು.

ಒಮ್ಮೆ ಗ್ರಾಮದ ದನಗಳ ಹಿಂದೆ ನಡೆದಾಡುತ್ತಿದ್ದ ಹುಸೇನಪ್ಪ, ಸೇನೆ ಸೇರಿದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ 15 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಆರಂಭದ ಐದು ವರ್ಷಗಳ ಕಾಲ ಜಮ್ಮು–ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ದೇಶದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಊರಿನ ಮಣ್ಣಿನ ನಂಟು ಕಳಚಲಿಲ್ಲ: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಹುಸೇನಪ್ಪ ತಮ್ಮೂರು ಮತ್ತು ತಾವು ಓದಿದ ಶಾಲೆಯನ್ನು ಮರೆತಿಲ್ಲ. ಶಾಲೆಯ ಮಕ್ಕಳಿಗೆ ತಮ್ಮ ಕೈಲಾದಷ್ಟು ನೆರವು ನೀಡುತ್ತಾ, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂಬಂಧ ಉಳಿಸಿಕೊಂಡಿದ್ದಾರೆ. ತಾವು ಅನುಭವಿಸಿದ ಬಡತನ ಮತ್ತೊಬ್ಬ ಮಗುವಿನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂಬ ಕಾಳಜಿಯೇ ಅವರ ಸೇವಾ ಮನೋಭಾವಕ್ಕೆ ಮತ್ತೊಂದು ಮುಖ ನೀಡಿದೆ.

ಸಂತೆಕೆಲ್ಲೂರಿನ ಶ್ರೀ ಘನಮಠ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಪ್ರವಚನ ನೀಡಲು ಆಗಮಿಸಿದ್ದ ಪ್ರಸಿದ್ಧ ಪ್ರವಚನಕಾರರಾದ ಶ್ರೀ ಈಶ್ವರ್ ಮಂಟೂರ್ ಅವರ ಮಾತುಗಳು ನನ್ನ ಮನಸ್ಸಿನಲ್ಲಿ ಹೊಸ ಕನಸಿಗೆ ಕಿಚ್ಚು ಹಚ್ಚಿದವು. ದೇಶ ಸೇವೆಯ ಕುರಿತು ಅವರ ಮಾತುಗಳಿಂದ ಪ್ರೇರಿತನಾಗಿ ಮತ್ತು ಪಾಲಕರ ಪ್ರೋತ್ಸಾಹದಿಂದ ಸೇನಾ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಕಠಿಣ ಪರಿಶ್ರಮ ವಹಿಸಿ ಭಾರತೀಯ ಸೇನೆಗೆ ಆಯ್ಕೆಯಾಯಿತು ಎಂದು ಹುಸೇನಪ್ಪ ಶಾಸ್ತ್ರೀ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನ ಪಿಯುಸಿ ಮಕ್ಕಳಿಗೂ ಉಚಿತ ನೋಟ್‌ಬುಕ್‌: ಸಚಿವ ಮಧು ಬಂಗಾರಪ್ಪ
ಅಂಗಾಂಗ ದಾನದ ಕುರಿತು ಜಾಗೃತಿ ಅಗತ್ಯ: ಡಾ.ಆರ್‌.ವಿ.ಪ್ರದೀಪ್ ಕೃಷ್ಣ