ವಾಲ್ಮೀಕಿ ಮಹರ್ಷಿ ಜೀವನವೇ ಸಮಾಜಕ್ಕೆ ಮಾದರಿ; ಕಾವ್ಯಾರಾಣಿ

KannadaprabhaNewsNetwork |  
Published : Oct 08, 2025, 01:01 AM IST
ಪೊಟೋ7ಎಸ್.ಆರ್.ಎಸ್‌1 ( ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಪೂಜೆ ಸಲ್ಲಿಸಿದರು.) | Kannada Prabha

ಸಾರಾಂಶ

ವಾಲ್ಮೀಕಿಯವರ ಜೀವನದ ಅವರ ಬದಲಾವಣೆ, ಆ ಬಳಿಕ ಅಳವಡಿಸಿಕೊಂಡ ಆದರ್ಶ ನಮಗೆ ಮಾರ್ಗದರ್ಶನ

ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಹಾಯಕ ಆಯುಕ್ತೆ ಚಾಲನೆಕನ್ನಡಪ್ರಭ ವಾರ್ತೆ ಶಿರಸಿ

ವಾಲ್ಮೀಕಿಯವರ ಜೀವನದ ಅವರ ಬದಲಾವಣೆ, ಆ ಬಳಿಕ ಅಳವಡಿಸಿಕೊಂಡ ಆದರ್ಶ ನಮಗೆ ಮಾರ್ಗದರ್ಶನ ಎಂದು ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಹೇಳಿದರು.

ಮಂಗಳವಾರ ನಗರದ ಅಂಬೇಡ್ಕರ್ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಮಾತನಾಡಿದರು.

ಸಮಾಜ ಘಾತುಕ ಕಾರ್ಯದಲ್ಲಿ ತೊಡಗಿಕೊಂಡಿದ್ದರೂ ಪರಿವರ್ತನೆ ಹೊಂದಿ ರಾಮಾಯಣದಂತಹ ಮಹಾನ್ ಕೃತಿಯನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳ ಜೀವನವೇ ಸಮಾಜಕ್ಕೆ ಮಾದರಿ ನಾರದ ಮಹರ್ಷಿಯಿಂದ ಮನಪರಿವರ್ತನೆಯಾಗಿ ಶ್ರೇಷ್ಟ ರಾಮಾಯಣವನ್ನು ನಮಗೆ ನೀಡಿದ್ದಾರೆ ಎಂದರು.

ಸಿದ್ದಾಪುರ ತಾಲೂಕಿನ ಜ್ಞಾನಸಾಗರ ಕಾಲೇಜು ಉಪನ್ಯಾಸಕ ವಿರೂಪಾಕ್ಷಪ್ಪ ಮೇಟಿ ವಾಲ್ಮೀಕಿಯವರ ಕುರಿತು ಉಪನ್ಯಾಸ ನೀಡಿ, ರಾಮಾಯಣ ಮಹಾಭಾರತ ಜನಜೀವನದ ನಡುವೆ ಹಾಸು ಹೊಕ್ಕಾಗಿದೆ. ಪ್ರತಿಯೊಬ್ಬನ ಜೀವನದಲ್ಲಿ ಈ ಗ್ರಂಥಗಳು ಒಂದಿಲ್ಲೊಂದು ರೀತಿಯಲ್ಲಿ ಅಡಕವಾಗಿದೆ. ವಾಲ್ಮೀಕಿ ಮಹರ್ಷಿ ಆರಂಭದಲ್ಲಿ ಢಕಾಯಿತನಾಗಿದ್ದ ಎಂಬ ಬಗ್ಗೆ ಹೇಳಲಾಗುತ್ತದೆ. ಆದರೆ, ಆತ ಢಕಾಯಿತ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ವಾಲ್ಮೀಕಿಯವರ ಕಾಲಘಟ್ಟ ಕ್ರಿಪೂ 3ನೇ ಶತಮಾನ ಎನ್ನಲಾಗುತ್ತಿದೆ. ಈ ಅವಧಿಯಲ್ಲಿನ ಇತಿಹಾಸ ಅಸ್ಪಷ್ಟವಾಗಿದೆ. ಹೀಗಾಗಿ, ಅವರು ಢಕಾಯಿತರಾಗಿದ್ದರು ಎಂಬುದು ಒಪ್ಪುವ ಮಾತಲ್ಲ. ಕ್ರಿಶ 9ನೇ ಶತಮಾನದವರೆಗೂ ವಾಲ್ಮೀಕಿಯರು ಢಕಾಯಿತ ಎಂಬ ಬಗ್ಗೆ ಎಲ್ಲೂ ದಾಖಲೆ ಇಲ್ಲ, ವಾಲ್ಮೀಕಿಯವರ ಸಮಾನ ಅವಧಿಯವರು ಯಾರೂ ಅವರನ್ನು ಢಕಾಯಿತ ಎಂದಿರಲಿಲ್ಲ. 10ನೇ ಶತಮಾನದಲ್ಲಿ ಸ್ಕಂದ ಪುರಾಣದಲ್ಲಿ ವಾಲ್ಮೀಕಿಯನ್ನು ಢಕಾಯಿತ ಎಂದು ಉಲ್ಲೇಖ ಆಗಿದೆ. 13ನೇ ಶತಮಾನದ ವರೆಗೂ ದಕ್ಷಿಣ ಭಾರತದಲ್ಲಿ ರಾಮಾಯಣದ ಬಗ್ಗೆ ಕಲ್ಪನೆ ಇರಲಿಲ್ಲ. ವಾಲ್ಮೀಕಿಯವರು ಬಾಳಿ ಬದುಕಿದ 1,500 ವರ್ಷಗಳ ನಂತರ ಅವರನ್ನು ಢಕಾಯಿತ ಎಂದು ಕರೆದಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ತಹಸೀಲ್ದಾರ ಪಟ್ಟರಾಜ ಗೌಡ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, ತಾಪಂ ಕಾರ್ಯನಿರ್ವಹಣಾಧಿಕಾರಿ ಚೆನ್ನಬಸಪ್ಪ ಹಾವಣಗಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಬಸವರಾಜ ಪಂಡಿತ, ವಾಲ್ಮೀಕಿ ಸಮಾಜದ ಅಧ್ಯಕ್ಷ ಪುಟ್ಟ ಸ್ವಾಮಿ, ಅಶೋಕ ಭಜಂತ್ರಿ, ಕೆ.ಎನ್. ಹೊಸ್ಮನಿ, ಮಧುಕರ ನಾಯ್ಕ, ಸುಭಾಷ ಕಾನಡೆ, ಕುಮಾರ ಶೆಟ್ಟಿ, ಸಿಪಿಐ ಶಶಿಕಾಂತ ವರ್ಮಾ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಸ್ಥಬ್ಧಚಿತ್ರ ಮೆರವಣಿಗೆ ನಡೆಯಿತು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ