ಲೀಷಟ್ ಸ್ಥಲಗಳು ವಚನಕಾರರ ಅನುಭಾವದ ಸಾರ

KannadaprabhaNewsNetwork |  
Published : Apr 20, 2026, 02:45 AM IST
19ಬಿಎಸ್ವಿ04- ಬಸವನಬಾಗೇವಾಡಿಯ ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿಯಂಗವಾಗಿ ಹಮ್ಮಿಕೊಂಡಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಹಡಪದ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಭಾರತೀಯ ಪರಂಪರೆಯಲ್ಲಿ ಬಸವಾದಿ ಶರಣರು ವಿಶಿಷ್ಠ ದರ್ಶನ ನೀಡಿದ್ದಾರೆ. ಷಟ್ ಸ್ಥಲಗಳು 12ನೇ ಶತಮಾನದ ವಚನಕಾರರ ಅನುಭಾವದ ಸಾರವಾಗಿದ್ದು. ಜೀವನದ ಆಧ್ಯಾತ್ಮಿಕ ಸಾಧನೆಗೆ ಮಾರ್ಗದರ್ಶಿಯಾಗಿವೆ ಎಂದು ಮುದ್ದೇಬಿಹಾಳ ಎಂಜಿವಿಸಿ ಮಹಾವಿದ್ಯಾಲಯದ ಅಧ್ಯಾಪಕ ಡಾ.ಬಸವರಾಜ ಹಡಪದ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಭಾರತೀಯ ಪರಂಪರೆಯಲ್ಲಿ ಬಸವಾದಿ ಶರಣರು ವಿಶಿಷ್ಠ ದರ್ಶನ ನೀಡಿದ್ದಾರೆ. ಷಟ್ ಸ್ಥಲಗಳು 12ನೇ ಶತಮಾನದ ವಚನಕಾರರ ಅನುಭಾವದ ಸಾರವಾಗಿದ್ದು. ಜೀವನದ ಆಧ್ಯಾತ್ಮಿಕ ಸಾಧನೆಗೆ ಮಾರ್ಗದರ್ಶಿಯಾಗಿವೆ ಎಂದು ಮುದ್ದೇಬಿಹಾಳ ಎಂಜಿವಿಸಿ ಮಹಾವಿದ್ಯಾಲಯದ ಅಧ್ಯಾಪಕ ಡಾ.ಬಸವರಾಜ ಹಡಪದ ಹೇಳಿದರು.ಪಟ್ಟಣದ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಬಸವ ಜಯಂತಿ ನಿಮಿತ್ತ ಆಯೋಜಿಸಿರುವ ರಾಷ್ಟ್ರೀಯ ಬಸವೇಶ್ವರ ಜಯಂತ್ಯುತ್ಸವದ ಮೊದಲ ದಿನ ಶನಿವಾರ ಸಂಜೆ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಕ್ತಸ್ಥಲ, ಮಹೇಶಸ್ಥಲ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಷಟ್ ಎಂದರೆ 6, ಸ್ಥಲ ಎಂದರೆ ಹಂತ. ಶರಣರು ಭಕ್ತಸ್ಥಲ, ಮಹೇಶ್ವರಸ್ಥಲ, ಪ್ರಸಾದಿಸ್ಥಲ, ಪ್ರಾಣಲಿಂಗಿ ಸ್ಥಲ, ಶರಣಸ್ಥಲ, ಐಕ್ಯಸ್ಥಲ ಎಂದು ಷಟ್ ಸ್ಥಲಗಳನ್ನು ನೀಡಿದ್ದಾರೆ. ಷಟ್ ಸ್ಥಲಗಳನ್ನು ಸಾಧನೆ ಮಾಡಿದಾಗ ಲಿಂಗಾಂಗ ಸಾಮರಸ್ಯ ಹೊಂದಬಹುದು ಎಂದು ಶರಣರು ವೈಜ್ಞಾನಿಕವಾಗಿ ತೋರಿಸಿಕೊಟ್ಟಿದ್ದಾರೆ. ಈ ಷಟ್ ಸ್ಥಲಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಲಿಂಗಾಂಗ ಸಾಮರಸ್ಯ ಪಡೆಯಲು ಸಾಧ್ಯ ಎಂದರು.

ಷಟ್ ಸ್ಥಲಗಳು ಮಾನವನ ಆತ್ಮೋದ್ದಾರ, ಔನ್ಯತ್ಯ ಉಂಟು ಮಾಡುತ್ತವೆ. ಬಸವಾದಿ ಶರಣರು ನೀಡಿದ ಮಹತ್ವ ಪೂರ್ವ ಹಂತಗಳಾಗಿವೆ. ಇವುಗಳ ಪಾಲನೆ, ಸ್ವಾಧ್ಯಾಯ ಮಾಡಬೇಕು. ಇವು ಧರ್ಮ ತಾತ್ವಿಕ, ಧಾರ್ಮಿಕ ನೀತಿಯನ್ನು ತಿಳಿಸುತ್ತವೆ. ಸತ್ಯ, ಜೀವ ಜಗತ್ತನ್ನು ತಿಳಿಸುತ್ತವೆ. ಭಕ್ತಸ್ಥಲ ಆರಂಭದ ಹಂತವಾಗಿದೆ. ನಂತರ ಮಹೇಶ್ವರಸ್ಥಲ 2ನೇ ಹಂತವಾಗಿದೆ. ಷಟ್ ಸ್ಥಲದಲ್ಲಿ ತತ್ವ ನಿಷ್ಠೆ, ಅಚಲ ಶ್ರದ್ಧೆ ಇಟ್ಟುಕೊಳ್ಳಬೇಕು. ಏನಾದರೂ ಸಿದ್ಧಿಸಿಕೊಳ್ಳಬೇಕಾದರೆ ಏಕಾಗ್ರತೆ ಅಗತ್ಯವಿದೆ. ಕ್ರಿಯೆಯಿಂದ ಮಹೇಶ್ವರ ಸ್ಥಲ ಕೂಡಿದೆ. ದ್ವೇಷಕ್ಕೆ ಅವಕಾಶ ಕೊಡದೆ ಸ್ಥಲಗಳನ್ನು ಸಾಧಿಸಬೇಕು. ಶರಣರ ಅನುಭವ ಮಂಟಪದಲ್ಲಿ ತಮ್ಮತನದ ಹುಡುಕಾಟ ಮಾಡುತ್ತಿದ್ದರು. ಯಾವುದೇ ಆಸೆ ಹೊಂದದೇ ಇರುವವರೇ ಶರಣರಾಗಿದ್ದಾರೆ. ಭಾವವನ್ನು ನಿರ್ಭಾವ ಮಾಡಿಕೊಂಡು ನಿಸಂದೇಹವಾಗಿ ನಿಶ್ಚಿಂತವಾಗಿ, ನಿರ್ಲೀಪ್ತವಾಗಿ ಷಟ್ ಸ್ಥಲಗಳನ್ನು ಸಾಧಿಸಬೇಕೆಂದ ಅವರು, ಭಕ್ತಸ್ಥಲ, ಮಹೇಶ್ವರಸ್ಥಲದ ಕುರಿತು ಹೇಳಿದರು.

ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಗುರುನಾಥ ದಡ್ಡೆ ಮಾತನಾಡಿ, ಬಸವೇಶ್ವರರು ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸಮಾನತೆಯನ್ನು ತಂದರು. ಕಾಯಕ, ದಾಸೋಹ, ಅನುಭಾವ ತತ್ವ ಸಮಾಜದಲ್ಲಿ ಜಾರಿಗೆ ತಂದರು. ಬಸವೇಶ್ವರರು ರಚಿಸಿರುವ ವಚನಗಳಲ್ಲಿರುವ ದಿವ್ಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾದರೆ ಅವರಿಗೆ ನಿಜವಾಗಿ ಗೌರವ ಸಲ್ಲಿಸದಂತಾಗುತ್ತದೆ. 3 ದಿನಗಳ ಕಾಲ ಪ್ರಾಧಿಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳಲ್ಲಿ ಜನತೆ ಹೆಚ್ಚು ಭಾಗವಹಿಸಿ ಶರಣರ ವಿಚಾರಗಳನ್ನು ಅರಿತುಕೊಳ್ಳುವಂತಾಗಬೇಕು ಎಂದರು.

ಅಧ್ಯಕ್ಷತೆ, ಸಾನ್ನಿಧ್ಯ ವಹಿಸಿದ್ದ ವಿರಕ್ತಮಠ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವೇಶ್ವರರು ಜನಿಸಿದ ಈ ಪುಣ್ಯಸ್ಥಳದ ಮಹಿಮೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳುವ ಅಗತ್ಯವಿದೆ. ಪ್ರಭಾವಿ ದಾರ್ಶನಿಕರಲ್ಲಿ ಒಬ್ಬರಾಗಿರುವ ಬಸವೇಶ್ವರರು ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಅವರು ಸೀಮಾತೀತರಾಗಿದ್ದಾರೆ. ಪ್ರತಿಯೊಬ್ಬರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ. ಅವರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಣೆಯಾಗುವಂತಾಗಬೇಕು. ಆಗ ಮಾತ್ರ ಬಸವ ಜಯಂತಿಗೆ ಅರ್ಥ ಬರಲು ಸಾಧ್ಯ. ವಚನ ಸಾಹಿತ್ಯ ಕುರಿತು ತಿಳಿಸುವ ಕಾರ್ಯ ನಿರಂತರವಾಗಿ ನಾಡಿನಲ್ಲಿ ನಡೆಯುವಂತಾಗಬೇಕೆಂದರು.

ಎಸ್.ಎಂ.ಬಿಸ್ಟಗೊಂಡ ಸ್ವಾಗತಿಸಿದರು. ವೈ.ಡಿ.ದೊಡಮನಿ, ಎಲ್.ಎಸ್.ಹಿರೇಮಠ ನಿರೂಪಿದರು.

ವೇದಿಕೆಯಲ್ಲಿ ಜರುಗಿದ ಸ್ಥಳೀಯ ಕಲಾವಿದರಿಂದ ವಚನ ಗಾಯನ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ವಚನ ನೃತ್ಯ, ದಿವ್ಯಾಂಗ ಕಲಾವಿದರ ವಚನ ಗಾಯನ, ಆರು ವರ್ಷದ ವಜ್ರಾ ರೆಡ್ಡಿ ವಚನ ನೃತ್ಯ ಜನರ ಮನಸೂರೆಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ಮಹಿಳೆಯರ ಮೇಲಿದೆ
ವೆನ್ಲಾಕ್ ಆಸ್ಪತ್ರೆಗೆ ವೈದ್ಯಕೀಯ ಯಂತ್ರೋಪಕರಣ ಕೊಡುಗೆ