ಪಾಲಿಕೆಯ ಹಳೆ ತ್ಯಾಜ್ಯವಿಲೇವಾರಿ ಘಟಕ ಅನಾಥ!

KannadaprabhaNewsNetwork |  
Published : May 21, 2025, 12:18 AM IST
ನಿರ್ವಹಣೆ ಇಲ್ಲದೇ ಹಾಳುಕೊಂಪೆಯಾಗಿರುವ ಮಡ್ಡಿಗುಡ್ಡದಲ್ಲಿರುವ ಹು-ಧಾ ಮಹಾನಗರ ಪಾಲಿಕೆ ಹಳೆ ತ್ಯಾಜ್ಯವಿಲೇವಾರಿ ಘಟಕ. | Kannada Prabha

ಸಾರಾಂಶ

ಪ್ರತಿಭಟನೆಯಿಂದಾಗಿ ಸಂಪೂರ್ಣವಾಗಿ ಬಂದಾದ ಈ ಮಡ್ಡಿಗುಡ್ಡ ನಿರ್ವಹಣೆಯಿಲ್ಲದೇ ಇಂದು ಹಾಳುಕೊಂಪೆಯಾಗಿದೆ. ಇದಕ್ಕೆ ಹೋಗಲು ಇರುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಈ ಹಿಂದೆ ಇಲ್ಲಿ ನೇಮಿಸಿದ್ದ ಕಾವಲು ಸಿಬ್ಬಂದಿಗಳಿಗೆ ಸಮರ್ಪಕ ವೇತನ ನೀಡದಿರುವುದರಿಂದ ಕಳೆದ ಒಂದೂವರೆ ವರ್ಷದಿಂದ ಇದರ ನಿರ್ವಹಣೆಗೆ ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಸಾರ್ವಜನಿಕರು ಹಗಲಿನಲ್ಲೂ ಇಲ್ಲಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ನಾಲ್ಕು ಗ್ರಾಮಗಳಿಗೆ ಕೂಗಳತೆಯ ದೂರದಲ್ಲಿರುವ ಮಡ್ಡಿಗುಡ್ಡ (ಕಿರುಬೆಟ್ಟ) ಇಂದು ಹಾಳುಕೊಂಪೆಯಾಗಿದೆ.

ಈ ಮಡ್ಡಿಯೊಳಗೆ ಕಾಲಿಟ್ಟರೆ ಸಾಕು ಕಿತ್ತುಹೋದ ಕಿಟಕಿ, ಬಾಗಿಲು, ಎಲ್ಲೆಂದರಲ್ಲಿ ಬಿದ್ದಿರುವ ಸರಾಯಿ ಪಾಕೆಟ್‌ಗಳು, ಮುರುಕು ಕಟ್ಟಡಗಳೇ ಕಾಣಸಿಗುತ್ತವೆ. ಇದು ಹುಬ್ಬಳ್ಳಿಯಿಂದ ಕೇವಲ 8 ಕಿಮೀ ಹಾಗೂ ಧಾರವಾಡದಿಂದ 15 ಕಿಮೀ ದೂರದಲ್ಲಿ ಪಾಲಿಕೆ ಅಧೀನದ 67 ಎಕರೆ ಜಾಗ ಹೊಂದಿರುವ ಶಿವಳ್ಳಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ (ಮಡ್ಡಿಗುಡ್ಡ)ದ ದುಸ್ಥಿತಿ.

ಮಹಾನಗರದಲ್ಲಿ ಮುಂದಿನ 20-25 ವರ್ಷಗಳ ಬಳಿಕ ಉದ್ಭವಿಸಬಹುದಾದ ತ್ಯಾಜ್ಯ ವಿಲೇವಾರಿ ಸಮಸ್ಯೆ ಸರಿದೂಗಿಸುವ ಭವಿಷ್ಯದ ಕಲ್ಪನೆಯನ್ನಿಟ್ಟುಕೊಂಡು ನಗರದಿಂದ ಕೇವಲ 8 ಕಿಮೀ ದೂರದಲ್ಲಿರುವ ಹೆಬ್ಬಳ್ಳಿ ಗ್ರಾಪಂ ವ್ಯಾಪ್ತಿಯ ಪಾಲಿಕೆ ಅಧೀನದ ಜಾಗದಲ್ಲಿ ನಿರ್ಮಿಸಲಾಗಿರುವ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಸೂಕ್ತ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಮಹಾನಗರದಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ವಿಲೇವಾರಿಗೆ ಬೇಕಾದ ಜಾಗವನ್ನು 2007-08 ರಲ್ಲಿಯೇ ಹೆಬ್ಬಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಪಾಲಿಕೆಯ 67 ಎಕರೆ ವಿಶಾಲವಾದ ಜಾಗವನ್ನು ಗುರುತಿಸಿ ಇಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪ ತೊಟ್ಟು ಅದಕ್ಕೆ ಬೇಕಾದ ಎಲ್ಲ ಕಾಮಗಾರಿ ಕೈಗೊಂಡು ಸಿದ್ಧಪಡಿಸಲಾಗಿತ್ತು.

ಸುತ್ತಲಿವೆ 4 ಗ್ರಾಮಗಳು: ಈ ಮಡ್ಡಿಗುಡ್ಡದ ಸುತ್ತಲೂ ಕೂಗಳತೆಯ ದೂರದಲ್ಲಿಯೇ 4 ಗ್ರಾಮಗಳಿವೆ. ಕೇವಲ ಅರ್ಧ ಕಿಮೀಯಲ್ಲಿ ಶಿವಳ್ಳಿ, ೧ ಕಿಮೀಯೊಳಗೆ ಹೆಬ್ಬಳ್ಳಿ, ಒಂದೂವರೆ ಕಿಮೀಗೆ ಮಾರಡಗಿ ಮತ್ತೊಂದೆಡೆ ಒಂದೂವರೆ ಕಿಮೀ ಸುಳ್ಳ ಗ್ರಾಮಗಳಿವೆ. ಈ ನಾಲ್ಕೂ ಗ್ರಾಮಗಳಲ್ಲಿರುವ ಕುರಿ, ದನಕರುಗಳು ಆಹಾರಕ್ಕಾಗಿ ಈ ಮಡ್ಡಿಗುಡ್ಡವೇ ಆಸರೆ.

ಗ್ರಾಮಸ್ಥರಿಗೆ ಇರಲಿಲ್ಲ ಮಾಹಿತಿ: ಪಾಲಿಕೆಯಿಂದ ಮಡ್ಡಿಗುಡ್ಡದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇಲ್ಲಿ ಖಾಸಗಿ ಕಂಪನಿಯೊಂದು ಬರಲಿದೆ ಎಂದು ಸುಳ್ಳುಹೇಳಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಬಳಸಿಕೊಂಡು ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಗುಡ್ಡದ ಸುತ್ತಲೂ ತಡೆಗೋಡೆ ನಿರ್ಮಾಣ, ಸಿಬ್ಬಂದಿಗಳು ತಂಗಲು ಬೇಕಾದ ಮನೆಗಳು ಹಾಗೂ ತ್ಯಾಜ್ಯವಿಲೇವಾರಿ ಯಂತ್ರಗಳನ್ನು ಅಳವಡಿಸಲು ಬೇಕಾದ ಬೃಹತ್‌ ಪ್ರಮಾಣದ ಘಟಕ ನಿರ್ಮಿಸಲಾಯಿತು. 2009ರಲ್ಲಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಮೇಯರ್‌ ಆಗಿದ್ದ ರಾಧಾಬಾಯಿ ಸಫಾರೆ ಅವರು ಹು-ಧಾ ಮಹಾನಗರ ಪಾಲಿಕೆ ಶಿವಳ್ಳಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಉದ್ಘಾಟಿಸಿದ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಗೊತ್ತಾಯಿತು.

ಗ್ರಾಮಸ್ಥರ ಪ್ರತಿಭಟನೆ: ಎತ್ತರದ ಪ್ರದೇಶದಲ್ಲಿರುವ ಈ ಮಡ್ಡಿಗುಡ್ಡದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಿಸಿದರೆ ಶಿವಳ್ಳಿ, ಹೆಬ್ಬಳ್ಳಿ, ಮಾರಡಗಿ ಹಾಗೂ ಸುಳ್ಳ ಗ್ರಾಮದವರು ಸಂಕಷ್ಟ ಅನುಭವಿಸುವ ಆತಂಕ ವ್ಯಕ್ತವಾಗುತ್ತಿದ್ದಂತೆ ನಾಲ್ಕೂ ಗ್ರಾಮದ ಜನರು ಸೇರಿ ಈ ಮಡ್ಡಿಗುಡ್ಡದ ಎದುರು ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡರು. ಇದಕ್ಕೆ ಮಣಿದ ಹು-ಧಾ ಮಹಾನಗರ ಪಾಲಿಕೆಯು 2013ರಿಂದ ಈ ತ್ಯಾಜ್ಯವಿಲೇವಾರಿ ಘಟಕವನ್ನು ತಾತ್ಕಾಲಿಕವಾಗಿ ಬಂದ್ ಮಾಡಿತು.

ಅನೈತಿಕ ಚಟುವಟಿಕೆ ತಾಣ: ಪ್ರತಿಭಟನೆಯಿಂದಾಗಿ ಸಂಪೂರ್ಣವಾಗಿ ಬಂದಾದ ಈ ಮಡ್ಡಿಗುಡ್ಡ ನಿರ್ವಹಣೆಯಿಲ್ಲದೇ ಇಂದು ಹಾಳುಕೊಂಪೆಯಾಗಿದೆ. ಇದಕ್ಕೆ ಹೋಗಲು ಇರುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಈ ಹಿಂದೆ ಇಲ್ಲಿ ನೇಮಿಸಿದ್ದ ಕಾವಲು ಸಿಬ್ಬಂದಿಗಳಿಗೆ ಸಮರ್ಪಕ ವೇತನ ನೀಡದಿರುವುದರಿಂದ ಕಳೆದ ಒಂದೂವರೆ ವರ್ಷದಿಂದ ಇದರ ನಿರ್ವಹಣೆಗೆ ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಸಾರ್ವಜನಿಕರು ಹಗಲಿನಲ್ಲೂ ಇಲ್ಲಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಮಡ್ಡಿಗುಡ್ಡದಲ್ಲಿ ತ್ಯಾಜ್ಯವಿಲೇವಾರಿ ಘಟಕ ನಿರ್ಮಾಣ ಮಾಡುವ ಕುರಿತು ಗ್ರಾಮಸ್ಥರಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ಆರಂಭಿಸಿದ್ದರು. ನಂತರ ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟನೆ ನಡೆಸಿದ ಬಳಿಕ ಈ ಘಟಕ ಬಂದ್‌ ಮಾಡಲಾಗಿದೆ ಎಂದು ಹೆಬ್ಬಳ್ಳಿ ಗ್ರಾಮಸ್ಥ ಈರಣ್ಣ ಹೇಳಿದರು.

ಸುತ್ತಮುತ್ತಲಿನ ಗ್ರಾಮದವರಿಗೆ ತೊಂದರೆಯಾಗದಂತಹ ಕಾರ್ಯಚಟುವಟಿಕೆಗಳನ್ನು ಪಾಲಿಕೆ ಇಲ್ಲಿ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಮತ್ತೇನಾದರೂ ತ್ಯಾಜ್ಯವಿಲೇವಾರಿಗೆ ಮುಂದಾದರೆ ಈ ಮಡ್ಡಿಗುಡ್ಡಕ್ಕೆ ಪಾಲಿಕೆ ವಾಹನ ಬರದಂತೆ ತಡೆಯುತ್ತೇವೆ ಎಂದು ಶಿವಳ್ಳಿ ಗ್ರಾಮದವರಾದ ಮೆಹಬೂಬಪಾಷಾ, ಮನೋಹರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!