ನಮ್ಮ ದೇಶದಲ್ಲಿ ೧೦೦ ಯುನಿಟ್ ರಕ್ತದ ಅವಶ್ಯವಿದ್ದರೆ ಕೇವಲ ೬೦ ಯುನಿಟ್ ರಕ್ತ ಸಂಗ್ರಹವಾಗುತ್ತಿದೆ, ಉಳಿಕೆ ೪೦ ಯುನಿಟ್ ಕೊರತೆ ಎದುರಿಸುವಂತಾಗಿದೆ, ಇದನ್ನು ಸರಿದೂಗಿಸಲು ಹೊಸ ಹೊಸ ರಕ್ತದಾನಿಗಳು ಹುಟ್ಟಿಕೊಳ್ಳಬೇಕು. ೧೮ ವರ್ಷದಿಂದ ೮೦ ವರ್ಷದವರಗೆ ರಕ್ತದಾನ ಮಾಡಬಹುದು, ಪುರುಷರು ೩ ತಿಂಗಳಿಗೊಮ್ಮೆ, ಮಹಿಳೆಯರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಇಂದಿನ ದಿನಗಳಲ್ಲಿ ಹೊಸ ಹೊಸ ರಕ್ತದಾನಿಗಳು ಹೆಚ್ಚಾಗಬೇಕಿದೆ. ರಕ್ತ ಬೇಡಿಕೆ ಪೂರೈಸಲು ಹೊಸಬರಿಂದ ಸಾಧ್ಯವಿದೆ ಎಂದು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ. ಹನುಮಂತು ಹೇಳಿದರು.
ನಗರದ ಮೈಸೂರು ಬೆಂಗಳೂರು ಹೆದ್ದಾರಿಯ ವಿ.ಸಿ.ಫಾರಂ ವೃತ್ತ ಸಮೀಪ ಇರುವ ಜಾನ್ಡೀರ್ ಕೃಷ್ಣವೇಣಿ ಟ್ರ್ಯಾಕ್ಟರ್ ಶೋರೂಮ್ ಬಳಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ, ಕೃಷಿಕ ಅಲಯನ್ಸ್ ಸಂಸ್ಥೆ, ಸಕ್ಕರೆ ನಾಡು ಅಲಯನ್ಸ್ ಸಂಸ್ಥೆ ಇವರು ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದ ಬೇಡಿಕೆಗೆ ಅನುಗುಣವಾಗಿ ರಕ್ತ ಸಿಗುತ್ತಿಲ್ಲ. ಹಳೇ ರಕ್ತದಾನಿಗಳು ಮಾತ್ರ ನಿರಂತರವಾಗಿ ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಹೊಸ ತಲೆಮಾರಿನ ಯುವಕರು, ಸಾರ್ವಜನಿಕರು ರಕ್ತದಾನ ಮಾಡಲು ಮುಂದಾಗಬೇಕು. ಒಂದು ಯುನಿಟ್ ರಕ್ತದಿಂದ ೪-೫ ಮಂದಿ ಜೀವ ಉಳಿಸಿದ ಸಾರ್ಥಕತೆ ರಕ್ತದಾನಿಗಳದ್ದಾಗುತ್ತದೆ ಎಂದು ನುಡಿದರು.
ದೇಶದ ಜನಸಂಖ್ಯೆಯಲ್ಲಿ ಶೇ.೧ರಿಂದ ೨ರಷ್ಟು ಮಂದಿ ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ಶೇ.೪ರಷ್ಟು ಹೆಚ್ಚಾಗಬೇಕಿದೆ, ಹೊಸ ಹೊಸ ರಕ್ತದಾನಿಗಳು ಉತ್ಪತ್ತಿಯಾಗಬೇಕಿದೆ. ರಕ್ತದ ಕೊರತೆಯಿಂದ ಸಾವಿರಾರು ಜನರ ಪ್ರಾಣ ಅಪಾಯದಲ್ಲಿದೆ ಎಂದು ಮನವಿ ಮಾಡಿದರು.
ನಮ್ಮ ದೇಶದಲ್ಲಿ ೧೦೦ ಯುನಿಟ್ ರಕ್ತದ ಅವಶ್ಯವಿದ್ದರೆ ಕೇವಲ ೬೦ ಯುನಿಟ್ ರಕ್ತ ಸಂಗ್ರಹವಾಗುತ್ತಿದೆ, ಉಳಿಕೆ ೪೦ ಯುನಿಟ್ ಕೊರತೆ ಎದುರಿಸುವಂತಾಗಿದೆ, ಇದನ್ನು ಸರಿದೂಗಿಸಲು ಹೊಸ ಹೊಸ ರಕ್ತದಾನಿಗಳು ಹುಟ್ಟಿಕೊಳ್ಳಬೇಕು. ೧೮ ವರ್ಷದಿಂದ ೮೦ ವರ್ಷದವರಗೆ ರಕ್ತದಾನ ಮಾಡಬಹುದು, ಪುರುಷರು ೩ ತಿಂಗಳಿಗೊಮ್ಮೆ, ಮಹಿಳೆಯರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.
ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳು ೫೦ಕ್ಕೂ ಹೆಚ್ಚು ಯುನಿಟ್ ರಕ್ತದಾನ ಮಾಡಿದರು. ಮಿಮ್ಸ್ ರಕ್ತನಿಧಿ ಕೇಂದ್ರ ಸಿಬ್ಬಂದಿ ಸಂಗ್ರಹಿಸಿಕೊಂಡರು.
ಕಾರ್ಯಕ್ರಮದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ನಿರ್ದೇಶಕ ಕೆ.ಎಸ್.ಹೊನ್ನೇಗೌಡ, ಪುಟ್ಟಸ್ವಾಮಿ, ಅಲಯನ್ಸ್ ಸಂಸ್ಥೆ ೧ನೇ ಉಪರಾಜ್ಯಪಾಲ ಕೆ.ಆರ್.ಶಶಿಧರ ಈಚೆಗೆರೆ, ರಕ್ತದಾನ ಅಲಯನ್ಸ್ ಅಧ್ಯಕ್ಷ ಶಿವಕುಮಾರ್, ಕೆ.ಜೆ.ಜೋಗಿಗೌಡ, ಹರ್ಷ, ಸೌಭಾಗ್ಯಮ್ಮ, ಪ್ರತಿನಿಧಿ ಕೇಂದ್ರದ ವೈದ್ಯರಾದ ಡಾ.ಗಗನ್ ಹಾಗೂ ಸಿಬ್ಬಂದಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.