ಸಾಮಾಜಿಕ ಮೌಲ್ಯಗಳೊಂದಿಗೆ ಹೊಸ ಪೀಳಿಗೆ ಸುಧಾರಿಸಬೇಕು- ಬಳಿಗಾರ

KannadaprabhaNewsNetwork |  
Published : Dec 16, 2023, 02:00 AM ISTUpdated : Dec 16, 2023, 02:01 AM IST
ಪೋಟೊ-೧೫ ಎಸ್.ಎಚ್.ಟಿ. ೧ಕೆ-ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಂಭು ಬಳಿಗಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. | Kannada Prabha

ಸಾರಾಂಶ

ಶಿರಹಟ್ಟಿ ಪಟ್ಟಣದಲ್ಲಿ ಗುರುವಾರ ಸಂಜೆ ಬೀರೇಶ್ವರ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ-ಬೆಂಗಳೂರ ಇವರ ಸಹಯೋಗದಲ್ಲಿ ನಡೆದ ಕಾರ್ತಿಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಂಭು ಬಳಿಗಾರ ಉಪನ್ಯಾಸ ನೀಡಿದರು.

ಕಾರ್ತಿಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ

ಶಿರಹಟ್ಟಿ:ಮಕ್ಕಳಲ್ಲಿ ಒಳ್ಳೆ ಸಂಸ್ಕಾರ ಬೆಳೆಸಬೇಕು. ದುಶ್ಚಟದಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಪ್ರೀತಿ, ವಿಶ್ವಾಸ ಇಲ್ಲದವರ ಬದುಕಿನಲ್ಲಿ ಸುಖ ಇರುವುದಿಲ್ಲ. ಆದ್ದರಿಂದ ಸಾಮಾಜಿಕ ಮೌಲ್ಯಗಳೊಂದಿಗೆ ಹೊಸ ಪೀಳಿಗೆಯನ್ನು ಸುಧಾರಿಸಬೇಕು. ಇದರಲ್ಲಿ ಪೋಷಕರು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಂಭು ಬಳಿಗಾರ ಕರೆ ನೀಡಿದರು.

ಪಟ್ಟಣದಲ್ಲಿ ಗುರುವಾರ ಸಂಜೆ ಬೀರೇಶ್ವರ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ-ಬೆಂಗಳೂರ ಇವರ ಸಹಯೋಗದಲ್ಲಿ ನಡೆದ ಕಾರ್ತಿಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಪೋಷಕರು ಮನೆಯಲ್ಲಿ ಮಕ್ಕಳಿಗೆ ಏನು ಕಲಿಸುತ್ತೀರೋ ಅದನ್ನೇ ಅವರು ಸಮಾಜಕ್ಕೆ ನೀಡುತ್ತಾರೆ ಎಂದರು.

ಇಂದಿನ ದಿನಗಳಲ್ಲಿ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಮತ್ತು ಕುಟುಂಬದ ಮೌಲ್ಯಗಳ ಬಗ್ಗೆ ಹೇಳಲು ಪುರುಸೊತ್ತು ಇಲ್ಲದಾಗಿದೆ. ಇದರಿಂದಾಗಿ ವಿಧೇಯವಿಲ್ಲದ ಸಮಾಜ ನಿರ್ಮಾಣವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳನ್ನು ತಿಳಿಸಿದಾಗ ಸಮಾಜವು ಸುಧಾರಣೆಯಾಗುತ್ತದೆ. ಅಲ್ಲದೇ ಅವರಿಗೂ ಬದುಕಲು ಇದು ನೆರವಾಗುತ್ತದೆ ಎಂದರು.

ಮಕ್ಕಳಾದವರು ವಿದ್ಯೆ ಕಲಿತು ಸಂಸ್ಕಾರ ಮತ್ತು ಸಂಸ್ಕೃತಿವಂತರಾಗಿ ಮಣ್ಣಿನ, ಸೃಷ್ಟಿ ಮತ್ತು ಹೆತ್ತವರ ಋಣ ತೀರಿಸಿದಾಗ ಮಾತ್ರ ಜನ್ಮ ಸಾರ್ಥಕವಾಗಲಿದೆ.

ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದಕ್ಕಿಂತ ಸಾಮಾಜಿಕ ಮೌಲ್ಯಗಳ ಬಗ್ಗೆ ತಿಳಿಸುವುದು ಮುಖ್ಯ. ನಾವೆಲ್ಲ ವಿಜ್ಞಾನ ಯುಗದಲ್ಲಿ ಅಭಿವೃದ್ಧಿ ಸಾಧಿಸಿ, ನಮ್ಮ ಪರಂಪರೆ, ಸೊಗಡು ಮರೆತು ಬಾಳುತ್ತಿದ್ದೇವೆ. ಬದುಕಿನಲ್ಲಿ ಹಾಸುಹೊಕ್ಕಾಗಿರುವ ಎಲ್ಲವೂ ಯಾಂತ್ರಿಕವಾಗುತ್ತಿದೆ. ಬೀರೇಶ್ವರ ಸೇವಾ ಸಮಿತಿಯವರು ಕಳೆದ ೧೮ ವರ್ಷಗಳಿಂದ ನಮ್ಮ ಪರಂಪರೆ, ಸಂಪ್ರದಾಯ ಉಳಿಸಿ ಬೆಳೆಸಲು ಸಮಾಜದ ಯುವಕರನ್ನು ಕಟ್ಟಿಕೊಂಡು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮಾಜದ ಉತ್ಸಾಹಿ ಯುವಕ ಮಂಜುನಾಥ ಘಂಟಿ ಅವರ ನೇತೃತ್ವದಲ್ಲಿ ಯುವಕರ ತಂಡ ಕಟ್ಟಿಕೊಂಡು ಮೇಕೆ-ಜೋಕೆ ಹೆಬ್ಬುಲಿ ಹಾಕಿದ ಕೇಕೆ ಎಂಬ ಹೆಸರಿನಡಿ ಡೊಳ್ಳಿನ ಪದಗಳ ತ್ರಿಕೋನ ಸ್ಪರ್ಧೆ ಏರ್ಪಡಿಸಿ ಯಾಂತ್ರಿಕ ಬದುಕಿನಲ್ಲಿ ನಮ್ಮ ಪರಂಪರೆಗಳು ಕಣ್ಮರೆಯಾಗುತ್ತಿರುವ ಸಮಯದಲ್ಲಿ ಜನಪದ ಹಾಡುಗಳು, ಡೊಳ್ಳಿನ ಸ್ಪರ್ಧೆ ಏರ್ಪಡಿಸಿ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಜಾನಪದ ದೇಶದಲ್ಲಿಯೇ ಕರ್ನಾಟಕದ ಸಂಸ್ಕೃತಿ ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಇಲ್ಲಿನ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ ಸೇರಿದಂತೆ ಹೀಗೆ ಅನೇಕ ಜಾನಪದ ನೃತ್ಯಗಳು ಬೇರೆಡೆ ಸಿಗುವುದಿಲ್ಲ. ವಿಷಾದದ ಸಂಗತಿ ಎಂದರೆ ಪಾಶ್ಚಿಮಾತ್ಯದ ಪ್ರಭಾವದಲ್ಲಿ ಎಲ್ಲರೂ ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ ಎಂದು ಕಳವಳದ ಧ್ವನಿಯಲ್ಲಿ ನುಡಿದರು.

ಶರಣ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷ ಕೆ.ಎ. ಬಳಿಗಾರ ಮಾತನಾಡಿ, ನಮ್ಮ ಹುಟ್ಟಿನಿಂದಲೇ ಜಾನಪದ ಆರಂಭವಾಗುತ್ತದೆ. ಮೌಖಿಕವಾಗಿರುವ ಮೌಲ್ಯಯುತ ಸಾಹಿತ್ಯ ಮಕ್ಕಳಿಗೆ ಪ್ರಾಥಮಿಕ ಹಂತದ ಶಾಲೆಗಳಲ್ಲಿ ನೀಡಬೇಕಾದ ಅವಶ್ಯಕತೆಯಿದ್ದು, ಶಿಕ್ಷಕವೃಂದವು ಜಾನಪದ ಉಳಿವಿಗೆ ಮುತುವರ್ಜಿ ವಹಿಸಬೇಕೆಂದು ಹೇಳಿದರು.

ಜಾನಪದ ಕೇವಲ ಅಕ್ಷರಸ್ಥರಿಗೆ ಮಾತ್ರ ಸೀಮಿತವಲ್ಲ. ಇಂದಿಗೂ ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರು ಸಾವಿರಾರು ಜಾನಪದ ಹಾಡುಗಳನ್ನು ಕಟ್ಟಿ ಹಾಡುತ್ತಾರೆ. ಜಾನಪದ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗೆ ಎಲ್ಲರೂ ಶ್ರಮಿಸಿಬೇಕು ಎಂದರು.

ಮಂಜುನಾಥ ಘಂಟಿ ಪ್ರಾಸ್ತಾವಿಕ ಮಾತನಾಡಿದರು. ಬೀರದೇವರ ಪೂಜಾರಿ ಭರಮಪ್ಪ ಶಿವಪ್ಪ ಪೂಜಾರ ಸಾನಿಧ್ಯ ವಹಿಸಿದ್ದರು. ಕಾಶಪ್ಪ ಗೂಳಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪರಮೇಶ ಪರಬ, ಗೂಳಪ್ಪ ಕರಿಗಾರ, ಇಸಾಕ ಅಹ್ಮದ ಆದ್ರಳ್ಳಿ, ಫಕ್ಕೀರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ಮುತ್ತುರಾಜ ಭಾವಿಮನಿ, ಎಸ್.ಬಿ. ಹೊಸೂರ, ಸತೀಶ ದೇಶಪಾಂಡೆ, ಅಸರತ್ ಡಾಲಾಯತ, ದೇವಪ್ಪ ಬಟ್ಟೂರ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು