ನನ್ನ ರಕ್ಷಿಸಿ ಆಸ್ತಿ ಉಳಿಸಿಕೊಡಿ ಎಂದು ವೃದ್ಧೆ ಅಳಲು

KannadaprabhaNewsNetwork | Published : Mar 28, 2025 12:31 AM

ಗ್ರಾಮದಿಂದ ಓಡಿಸಿ ನನ್ನ ಆಸ್ತಿ ಲಪಾಟಿಯಿಸುವ ನಿಟ್ಟಿನಲ್ಲಿ ಅನೇಕ ದೇವರ ಕೈಮುಗಿದು ನನಗೆ ಹಿಂಸೆ ಕೊಡುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಬಂದು ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ಜಮೀನನ್ನು ಬಿಡಿಸಿಕೊಡಬೇಕಾಗಿ ವೃದ್ಧೆ ಓರ್ವಳು ಡಿಸಿ ಕಚೇರಿ ಮುಂದೆ ತಹಸೀಲ್ದಾರಲ್ಲಿ ಮನವಿ ಮಾಡಿಕೊಂಡು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ನಂತರ ಮಾನವೀಯತೆ ದೃಷ್ಠಿಯಲ್ಲಿ ಹಾಗೂ ನ್ಯಾಯಕೊಡಿಸುವುದಾಗಿ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಅವರು ತಮ್ಮ ವಾಹನದಲ್ಲೆ ಕೂರಿಸಿಕೊಂಡು ಆಕೆಯ ಸ್ಥಳಕ್ಕೆ ಕರೆದೊಯ್ದರು.

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮದಿಂದ ಓಡಿಸಿ ನನ್ನ ಆಸ್ತಿ ಲಪಾಟಿಯಿಸುವ ನಿಟ್ಟಿನಲ್ಲಿ ಅನೇಕ ದೇವರ ಕೈಮುಗಿದು ನನಗೆ ಹಿಂಸೆ ಕೊಡುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಬಂದು ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ಜಮೀನನ್ನು ಬಿಡಿಸಿಕೊಡಬೇಕಾಗಿ ವೃದ್ಧೆ ಓರ್ವಳು ಡಿಸಿ ಕಚೇರಿ ಮುಂದೆ ತಹಸೀಲ್ದಾರಲ್ಲಿ ಮನವಿ ಮಾಡಿಕೊಂಡು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ನಂತರ ಮಾನವೀಯತೆ ದೃಷ್ಠಿಯಲ್ಲಿ ಹಾಗೂ ನ್ಯಾಯಕೊಡಿಸುವುದಾಗಿ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಅವರು ತಮ್ಮ ವಾಹನದಲ್ಲೆ ಕೂರಿಸಿಕೊಂಡು ಆಕೆಯ ಸ್ಥಳಕ್ಕೆ ಕರೆದೊಯ್ದರು.

ಅರಸೀಕೆರೆ ತಾಲೂಕಿನ ಕಣಕಟ್ಟೆಹಳ್ಳಿ ಗ್ರಾಮದ ನಂಜುಂಡಮ್ಮ ಎಂಬುವರೇ ನನಗೆ ರಕ್ಷಣೆ ನೀಡಿ ನನ್ನ ಆಸ್ತಿ ನಮಗೆ ಕೊಡಿಸುವಂತೆ ಮನವಿ ಮಾಡಿದ ವೃದ್ಧೆ. ನಡೆಯಲು ಸಾಧ್ಯವಾಗದೇ ತೆವಳುತ್ತಲೆ ಡಿಸಿ ಕಚೇರಿಗೆ ಬಂದಿದ್ದು, ಈ ವೇಳೆ ತಹಸೀಲ್ದಾರ್ ವಿಚಾರಿಸಿದಾಗ ಆಕೆ ಹೇಳಿದ್ದು ಕೇಳಿ ಅಧಿಕಾರಿಗಳು ಬೇಸರಗೊಂಡರು. ತಹಸೀಲ್ದಾರ್ ಎದುರು ಮಾತನಾಡಿದ ವೃದ್ಧೆ, ನಮ್ಮ ಗ್ರಾಮದ ರಾಜ, ಪಾಲಾಕ್ಷಮ್ಮ, ದಿವ್ಯ, ಯೋಗೇಶ್, ಜ್ಯೋತಿ, ನಂಜುಂಡೇಗೌಡ, ಬಸವರಾಜಪ್ಪ, ಬಸವರಾಜ ಹೆಂಡತಿ ತಾಯಮ್ಮ, ಬಸವರಾಜ, ತಾಯಮ್ಮನ ಮಕ್ಕಳುಗಳು ಇಬ್ಬರು ಗಂಡು ಮಕ್ಕಳು, ಯೋಗೇಶ್‌ ಎರಡು ಹೆಣ್ಣು ಮಕ್ಕಳು, ಶಾರದಮ್ಮ, ಸ್ವಾಮಿ, ಭಾಗ್ಯ, ಶೇಖರ, ಹಾಗೂ ಶೇಖರನ ಹೆಂಡತಿ ಜ್ಯೋತಿ, ಹಾಗೂ ಅವರ ಮಗ, ಇವರು ಸೇರಿಕೊಂಡು ನನ್ನನ್ನು ಗ್ರಾಮ ಬಿಡಿಸಿ ನನ್ನ ಆಸ್ತಿ ಲಪಟಾಯಿಸಲು ಹಾಗೂ ದೇವರುಗಳಾದ ಟಿ.ಕೋಡಿಹಳ್ಳಿ ದ್ಯಾವಮ್ಮ, ತಳ್ಳುರಮ್ಮ, ಚೌಡೇಶ್ವರಿ, ಪಂಡಿತರು, ಕಲ್ಲು ಮಕಾಡೆ ಹಾಕಿಕೊಂಡು ನಮ್ಮ ಗ್ರಾಮಕ್ಕೆ ಬರದಂತೆ ಹೋಗದಂತೆ ದೊಣ್ಣೆ, ಹಾಗೂ ಮಚ್ಚು ಎಲ್ಲ ಹಿಡಿದುಕೊಂಡು ನನಗೆ ಬೆದರಿಕೆ ಹಾಕುತ್ತಿರುತ್ತಾರೆ ಎಂದು ದೂರಿದರು. ನನಗೆ ಮನೆ ಇರುವುದಿಲ್ಲ ಮನೆಯನ್ನು ಕೆಡವಿ ಹಾಕಿರುತ್ತಾರೆ ಹಾಗೂ ಕರೆಂಟ್ ಸಹ ಕಿತ್ತು ಹಾಕಿರುತ್ತಾರೆ. ಕುಡಿಯಲು ನೀರು ಸಹ ಇರುವುದಿಲ್ಲ. ಹಣ ಕೊಟ್ಟು ನೀರನ್ನು ಖರೀದಿ ಮಾಡಿ ಕುಡಿಯುತ್ತಿರುತ್ತೇವೆ. ಗ್ರಾಮದಲ್ಲಿ ೨೦೨೫ ಜನವರಿ ೩೦ರಂದು ರಾತ್ರಿ ೮ ಗಂಟೆಗೆ ಬಂದು ನಾವು ಸಾಕಿದ್ದ ೧೦ ಆಡುಗಳನ್ನು, ೪ ದನಗಳನ್ನು ಕದ್ದು ನಮಗೆ ಹೊಡೆದಿರುತ್ತಾರೆ. ಸಬ್ ಇನ್ಸ್ಪೆಕ್ಟರ್ ಜೀಪ್ನಲ್ಲಿ ಬಂದು ಪೊಲೀಸ್ ಎಲ್ಲಾ ಬಂದು ನಮ್ಮನ್ನು ಹೆದರಿಸಿ ಶೆಡ್‌ ಅನ್ನೂ ಕಿತ್ತುಹಾಕಿರುತ್ತಾರೆ. ಕಳೆದ ಒಂದು ತಿಂಗಳಷ್ಟೆ ನನ್ನ ಮೇಲೆ ಆಸೀಡ್ ದಾಳಿ ಮಾಡಿರುವುದಾಗಿ ತನ್ನ ಎಡಗೈ ಸುಟ್ಟಿರುವುದಾಗಿ ವೃದ್ಧೆ ಆರೋಪಿಸಿದರು.

ನನ್ನ ಗಂಡನನ್ನು ಹೊಡೆಯಲು ಬಂದಾಗ ನಾನು ಬಿಡಿಸಿಕೊಂಡು ಸರ್ವೆ ನಂ: ೩೭ ರಲ್ಲಿ ೧೪ವರೆ ಎಕರೆ ಜಮೀನನ್ನು ಕಾರ್ಯದರ್ಶಿಗಳಿಂದ ಯಾರ ಯಾರಿಗೆ ಬೇಕು ಅವರಿಗೆ ಖಾತೆ ಮಾಡಿಸಿಕೊಂಡು ಬಂದಿರುತ್ತಾರೆ. ನನ್ನ ಜಮೀನಿನ ಮೇಲೆ ಎಷ್ಟು ಸಾಲ ಮಾಡಿರುತ್ತಾರೋ ಗೊತ್ತಿಲ್ಲ. ನನ್ನ ಜಮೀನಿನ ಮೇಲೆ ಲೋನ್ ತೆಗೆದುಕೊಂಡಿರುತ್ತಾರೆ. ಸರ್ಕಾರದವರೆ ಬಂದು ಅದನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿದರು. ನನಗೆ ಮತ್ತು ಮಗಳಾದ ಸುವರ್ಣಮ್ಮನಿಗೂ ಸಹ ಹೊಡೆದು ಅವಳ ಮೇಲೆ ದೈಹಿಕ ಹಲ್ಲೆ ಮಾಡಿ ರಕ್ತಗಾಯಗಳಾಗಿ ಊರಿನಿಂದ ಹೊರಹಾಕಿರುತ್ತಾರೆ. ನನಗೆ ಕೊಲೆ ಬೆದರಿಕೆ ಹಾಕಿರುತ್ತಾರೆ ಮತ್ತು ನನಗೆ ಕೋವಿಯ ಮೂಲಕ ಎದರಿಸಿರುತ್ತಾರೆ. ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿಕೊಂಡು ಇವರಿಗೆ ತಕ್ಕ ಶಿಕ್ಷೆಯನ್ನು ಕೊಡಿಸಿ ಹಾಗೂ ನೀವು ಸ್ಥಳಕ್ಕೆ ಬಂದು ನನ್ನ ಜಮೀನನ್ನು ಬಿಡಿಸಿಕೊಡಬೇಕಾಗಿ ಹಾಗೂ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ತನ್ನ ಅಳಲು ತೋಡಿಕೊಂಡರು.

ನಾನು ಸುಮಾರು ಬಾರಿ ಅರ್ಜಿಯನ್ನು ಎಲ್ಲಾ ಅಧಿಕಾರಿಗಳಿಗೆ ಕೊಟ್ಟರೂ ಸಹ ಯಾರು ನ್ಯಾಯ ಕೊಡಿಸುತ್ತಿಲ್ಲ. ಎಸ್.ಪಿ. ಸಾಹೇಬರು ಸಹ ಬರುವುದಿಲ್ಲವೆಂದು ನನಗೆ ತುಂಬಾ ತೊಂದರೆ ಕೊಡುತ್ತಿರುತ್ತಾರೆ. ಆದ್ದರಿಂದ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ನನ್ನ ಜಮೀನನ್ನು ನನಗೆ ಬಿಡಿಸಿಕೊಡಬೇಕಾಗಿ ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಅರಸೀಕೆರೆ ತಹಸೀಲ್ದಾರರಲ್ಲಿ ಕೈಮುಗಿದು ವೃದ್ಧೆ ಬೇಡಿದರು. ಇದೇ ವೇಳೆ ಹಾಸನ ತಹಸೀಲ್ದಾರ್ ಕೂಡ ಸ್ಥಳದಲ್ಲಿದ್ದು, ಆಕೆಯ ಅಳಲನ್ನು ಕೇಳಿದರು.