ಕೆಲವರ ರಾಜಕೀಯದಿಂದ ಹಿಂದೆ ಮೀಸಲಾತಿ ಸಿಕ್ಕಿಲ್ಲ

KannadaprabhaNewsNetwork | Published : Dec 8, 2024 1:16 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ ಮೂರೂವರೆ ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆದಿದೆ. ಆದರೂ ಸಹ ಯಾವ ಸರ್ಕಾರಗಳೂ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಬಾರಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶದಲ್ಲಿ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗಿದೆ. ಡಿ.10ರಂದು ಸಮಾಜದಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್.ರುದ್ರಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ಮೂರೂವರೆ ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆದಿದೆ. ಆದರೂ ಸಹ ಯಾವ ಸರ್ಕಾರಗಳೂ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಬಾರಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶದಲ್ಲಿ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗಿದೆ. ಡಿ.10ರಂದು ಸಮಾಜದಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್.ರುದ್ರಗೌಡರ ಹೇಳಿದರು.ನಗರದಲ್ಲಿ ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಡಿ.10ರಂದು ಸುವರ್ಣಸೌಧಕ್ಕೆ ಘೇರಾವ್ ಹಾಕಲಿದ್ದೇವೆ. ರಾಜ್ಯದ ಮೂಲೆಮೂಲೆಯಿಂದ ಸುಮಾರು 10 ಸಾವಿರ ಟ್ರ್ಯಾಕ್ಟರ್‌ಗಳಲ್ಲಿ ಅಂದಾಜು 20 ಲಕ್ಷ ಜನರು ಬಂದು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ವಿಜಯಪುರ ಜಿಲ್ಲೆಯಿಂದ 500ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ಬೆಳಗಾವಿಯ ಈ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹಿಂದೆ ಯಾವತ್ತೋ ಸಿಗಬೇಕಿದ್ದ ಮೀಸಲಾತಿಯ ನ್ಯಾಯ ಕೆಲವರ ರಾಜಕೀಯದಿಂದ ಸಿಕ್ಕಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಕೊನೆಯಲ್ಲಿ ಸಿಕ್ಕಿದ್ದ 2ಡಿ ಮೀಸಲಾತಿಯೂ ಸಹ ಅನುಷ್ಠಾನ ಆಗಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ನಮ್ಮ ಸರ್ಕಾರ ಬಂದರೆ 24 ತಾಸಿನಲ್ಲಿ 2ಎ ಮೀಸಲಾತಿ ಕೊಡಿಸುತ್ತೇವೆ ಎಂದು ಕಾಂಗ್ರೆಸ್‌ನಲ್ಲಿನ ಪಂಚಮಸಾಲಿ ಜನಪ್ರತಿನಿಧಿಗಳು ಭರವಸೆ ಕೊಟ್ಟಿದ್ದರು. ಆದರೆ ಇದೀಗ ಕಾಂಗ್ರೆಸ್‌ನಲ್ಲಿಯೂ ಸಹ ನಮ್ಮ ಸಮಾಜದ ಈ ಕೆಲಸ ಆಗುತ್ತಿಲ್ಲ. ಕಾಂಗ್ರೆಸ್‌ನಲ್ಲಿನ ಪಂಚಮಸಾಲಿ ಸಮಾಜದ ಶಾಸಕರು ಅಧಿಕಾರದ ಆಸೆಗೆ, ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ, ರಾಜಕೀಯ ಸ್ಥಾನಮಾನಕ್ಕಾಗಿ ಸುಮ್ಮನೆ ಕುಳಿತುಕೊಳ್ಳಬಾರದು. ಸಮಾಜಕ್ಕಾಗಿ ದುಡಿಯುವವರಿಗಾಗಿ ಸಮಾಜ ಬೆನ್ನೆಲುಬಾಗಿ ಇರುವುದರಿಂದ, ಸಮಾಜದ ಇಬ್ಬರು ಮಂತ್ರಿಗಳಾದ ಲಕ್ಷ್ಮೀ ಹೆಬ್ಬಾಳ್ಕರ ಹಾಗೂ ಶಿವಾನಂದ ಪಾಟೀಲ ಸೇರಿ ಉಳಿದ ಪಂಚಮಸಾಲಿ ಸಮುದಾಯದ ಶಾಸಕರು ಮತ್ತು ಪಂಚಮಸಾಲಿ ಮತಗಳ ಸಹಾಯ ಪಡೆದು ಆರಿಸಿ ಬಂದಿರುವ ಶಾಸಕರನ್ನು ಕರೆದುಕೊಂಡು ಹೋಗಿ ಒತ್ತಡ ಹಾಕಿದರೆ ಮೀಸಲಾತಿ ಸಿಗುತ್ತದೆ. ಜನರ ಭಾವನೆ ಅರಿತು ಜನಪ್ರತಿನಿಧಿಗಳು ಹಾಗೂ ಈ ಸರ್ಕಾರ ಮೀಸಲಾತಿ ಕೊಡಬೇಕು ಎಂದು ಮನವಿ ಮಾಡಿದರು.

ಪಂಚಸೇನೆ ಜಿಲ್ಲಾಧ್ಯಕ್ಷ ಶರಣಬಸಪ್ಪ ಗಂಗಶೆಟ್ಟಿ ಮಾತನಾಡಿ, ನಮ್ಮ ಸಮಾಜಕ್ಕೆ ಮೀಸಲಾತಿ ಕೊಟ್ಟರೆ ಮುತ್ತಿನ ಹಾರ ಹಾಕಲಾಗುವುದು‌, ಇಲ್ಲದಿದ್ದರೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಪಂಚಮಸಾಲಿ ಸಮಾಜದ ಹೋರಾಟಕ್ಕೆ ಮಾರ್ಗ ಮಧ್ಯದಲ್ಲಿ ಪೊಲೀಸರ ಮೂಲಕ ಸರ್ಕಾರ ತಡೆ ಮಾಡಿದರೆ ಅಲ್ಲೆ ರಸ್ತೆಯ ಮೇಲೆ ಅಡುಗೆ ಮಾಡಿಕೊಂಡು ಊಟ ಮಾಡಿ, ದಾರಿಯಲ್ಲೇ ವಾಸ್ತವ್ಯ ಹೂಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದಾನೇಶ ಅವಟಿ, ನಿಂಗನಗೌಡ ಸೋಲಾಪುರ, ಗುರುರಾಜ ಆಕಳವಾಡಿ, ಸದಾಶಿವ ಹಳ್ಳಿಗಿಡದ, ಸಿದ್ದು ಹಳ್ಳೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

----------ಕೋಟ್‌.......

ಕಳೆದ ವಿಧಾನಸಭೆ ಚುನಾವಣೆಯ ವೇಳೆ ನಮ್ಮ ಸರ್ಕಾರ ಬಂದರೆ 24 ತಾಸಿನಲ್ಲಿ 2ಎ ಮೀಸಲಾತಿ ಕೊಡಿಸುತ್ತೇವೆ ಎಂದು ಕಾಂಗ್ರೆಸ್‌ನಲ್ಲಿನ ಪಂಚಮಸಾಲಿ ಜನಪ್ರತಿನಿಧಿಗಳು ಭರವಸೆ ಕೊಟ್ಟಿದ್ದರು. ಆದರೆ ಇದೀಗ ಕಾಂಗ್ರೆಸ್‌ನಲ್ಲಿಯೂ ಸಹ ನಮ್ಮ ಸಮಾಜದ ಈ ಕೆಲಸ ಆಗುತ್ತಿಲ್ಲ. ಕಾಂಗ್ರೆಸ್‌ನಲ್ಲಿನ ಪಂಚಮಸಾಲಿ ಸಮಾಜದ ಶಾಸಕರು ಅಧಿಕಾರದ ಆಸೆಗೆ, ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ, ರಾಜಕೀಯ ಸ್ಥಾನಮಾನಕ್ಕಾಗಿ ಜೋತುಬಿದ್ದು ಸುಮ್ಮನೆ ಕುಳಿತುಕೊಳ್ಳಬಾರದು.

- ಎಂ.ಎಸ್.ರುದ್ರಗೌಡರ, ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ

------------

Share this article