ಕನ್ನಡಪ್ರಭವಾರ್ತೆ ಹೊಸದುರ್ಗಆಧುನಿಕವಾಗಿ, ವೈಜ್ಞಾನಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ನಾಡಿನ ಪ್ರಗತಿ ತುಂಬಾ ಆಗಿದೆ. ಆದರೆ ವ್ಯಕ್ತಿಯ ವ್ಯಕ್ತಿತ್ವ ನಾಶವಾಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಸಾಣೇಹಳ್ಳಿಯ ಶ್ರೀ ಮಠದ ಆಶ್ರಯದಲ್ಲಿ ಶಾಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನದ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನದಂದು ಆದರ್ಶಗಳ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡುವರು ಮರುಕ್ಷಣದಿಂದಲೇ ಆದರ್ಶಗಳನ್ನು ಗಾಳಿಗೆ ತೂರಿ ಸ್ವೇಚ್ಛೆಯಿಂದ ನಡೆದುಕೊಳ್ಳುವ ವಾತಾವರಣ ಇಡೀ ನಾಡಿನಲ್ಲಿ ಕಾಣುತ್ತಿದ್ದೇವೆ. ನಮ್ಮ ಹಿರಿಯರು ಸ್ವಾರ್ಥ ಜೀವಿಗಳಾಗಿ ಬದುಕಿದವರಲ್ಲ. ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಗಂಧದ ಕೊರಡಿನ ಹಾಗೆ ತೀಡಿಕೊಂಡಂಥವರು ಎಂದರು.ಸತ್ಯ, ಪ್ರಾಮಾಣಿಕತೆ, ನೀತಿ ಇವೆಲ್ಲವೂ ಗಾಳಿಗೆ ತೂರುವ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡು ವ್ಯಕ್ತಿ ಕಲ್ಯಾಣದ ಜೊತೆಗೆ ಲೋಕಕಲ್ಯಾಣವನ್ನು ಬಯಸುವುದು ಹೇಗೆ ಎಂದು ಚಿಂತನೆ ಮಾಡಿ ಅದಕ್ಕನುಗುಣವಾಗಿ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡಾಗ ನಾವು ಪಡೆದ ಸ್ವಾತಂತ್ರ್ಯಕ್ಕೆ ವಿಶೇಷವಾದ ಅರ್ಥ ಬರುವುದು ಎಂದರು.
ಮುಖ್ಯ ಅತಿಥಿಗಳಾಗಿ ಎಸಿ ಚಂದ್ರಪ್ಪ, ಅಧ್ಯಾಪಕ ವಿ ಬಿ ಚಳಗೇರಿ, ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಗುರುಪಾದೇಶ್ವರ ಪ್ರೌಢಶಾಲೆ, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು, ಶಿವಸಂಚಾರದ ಕಲಾವಿದರು, ಗ್ರಾಮಸ್ಥರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ಆಕರ್ಷಕ ನೃತ್ಯ ಮಾಡಿದರು. ವೈ ಡಿ ಬದಾಮಿ ನಿರ್ದೇಶನದ ಸ್ವಾತಂತ್ರ್ಯ ಹೋರಾಟಗಾರ ಸುರಪುರದ ವೆಂಕಪಟ್ಟ ನಾಯಕ ರೂಪಕವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ನಂತರ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ‘ಕಳರಿ’ ಸಮರ ಕಲೆಯನ್ನು ಪ್ರದರ್ಶಿಸಿದರು. ಬೆಂಗಳೂರಿನ ಲಹರಿ ಭಾರಿಘಾಟ್ ತಂಡವರಿಂದ ‘ಶಾಂತಿ ಮತ್ತು ಪ್ರೀತಿಗಾಗಿ’ ನೃತ್ಯ ಪ್ರದರ್ಶನ ನಡೆಸಿಕೊಟ್ಟರು.