ಯುವ ಶಕ್ತಿಯು ಬಲಿಷ್ಠ ಶಕ್ತಿಯಾದ್ದರಿಂದ ಯುವಜನರು ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಸಮಸ್ಯೆಗಳಿಗೆ ಹೆದರದೆ ಆತ್ಮವಿಶ್ವಾಸದಿಂದ ಜೀವನ ನಡೆಸುವುದನ್ನು ಕಲಿಯಬೇಕು.
ಕೆ.ಆರ್.ಪೇಟೆ: ಹುಟ್ಟಿನಿಂದ ಸಾಯುವವರೆಗೆ ಮನುಷ್ಯ ಕಾನೂನಿನ ನಡುವೆಯೇ ಜೀವನ ನಡೆಸಬೇಕಾಗಿರುವುದರಿಂದ ಕಾನೂನಿನ ಪರಿಮಿತಿಯೊಳಗೆ ಜೀವನ ನಡೆಸುವುದನ್ನು ಕಲಿಯಬೇಕು ಎಂದು ನ್ಯಾಯಾಧೀಶ ಸುಧೀರ್ ಹೇಳಿದರು.
ತಾಲೂಕಿನ ಬೀರವಳ್ಳಿಯಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಶ್ರಮದಾನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನರು ಸಣ್ಣಪುಟ್ಟ ವಿಚಾರಗಳಿಗೆ ಕಿತ್ತಾಟ ಮಾಡಿಕೊಂಡು ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲು ತುಳಿಯದೇ ಪರಸ್ಪರ ಪ್ರೀತಿ, ವಿಶ್ವಾಸದಿಂದ ನೆಮ್ಮದಿ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.
ಅಪರ ಸಿವಿಲ್ ನ್ಯಾಯಾಧೀಶ ದೇವರಾಜು ಮಾತನಾಡಿ, ನಮ್ಮನ್ನು ಹೆತ್ತು- ಹೊತ್ತು ಸಾಕಿದ ತಂದೆ- ತಾಯಿಗಳನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ವಿ.ಅರ್ಪಿತಾ ಮಾತನಾಡಿ, ಯುವ ಶಕ್ತಿಯು ಬಲಿಷ್ಠ ಶಕ್ತಿಯಾದ್ದರಿಂದ ಯುವಜನರು ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಸಮಸ್ಯೆಗಳಿಗೆ ಹೆದರದೆ ಆತ್ಮವಿಶ್ವಾಸದಿಂದ ಜೀವನ ನಡೆಸುವುದನ್ನು ಕಲಿಯಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಎನ್.ಎಸ್.ಎಸ್ ಘಟಕದ ಶಿಬಿರಾಧಿಕಾರಿ ಆರ್.ಬಿ.ಪದ್ಮನಾಭ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ವಕೀಲ ರಾಜೇಗೌಡ, ವಕೀಲರ ಸಂಘದ ಕಾರ್ಯದರ್ಶಿ ಮಂಜೇಗೌಡ, ಖಜಾಂಚಿ ಪ್ರಸನ್ನಕುಮಾರ್, ಪದಾಧಿಕಾರಿಗಳಾದ ಅಪ್ಪನಹಳ್ಳಿ ಅರುಣ್, ನ್ಯಾಯಾಲಯದ ಸಿಬ್ಬಂದಿ ಮನು, ಗ್ರಾಮದ ಮುಖಂಡ ಶಿವರಾಮೇಗೌಡ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.