ಕನಕಗಿರಿ: ನಿವೇಶನಕ್ಕಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಬಸವರಾಜರೆಡ್ಡಿ ಅವರು ಸೇವಿಸಿದ್ದ ಪ್ಯಾರಾಕ್ವಿಟ್ ಡೈಕ್ಲೋರಾಯಿಡ್ ಕಳೆನಾಶಕ ಖರೀದಿಯ ಗೋಲ್ಮಾಲ್ ಚರ್ಚೆಗೆ ಗ್ರಾಸವಾಗಿದೆ.
ಬಸವರಾಜರೆಡ್ಡಿ ಕಳೆನಾಶಕ ಖರೀದಿಸಿರುವುದು ಪಟ್ಟಣದಲ್ಲಿಯೇ ಆಗಿದ್ದರೂ ಬಿಲ್ ಮಾತ್ರ ಸಿಂಧನೂರು ತಾಲೂಕಿನ ಗಾಂಧಿನಗರದ ವಿನಾಯಕ ಟ್ರೆಡರ್ಸ್ ಹೆಸರಿನಲ್ಲಿದೆ. ಕಳೆನಾಶಕ ಡಬ್ಬದ ಮೇಲೆ ₹೯೯೦ ದರ ನಿಗದಿಯಾಗಿದೆ. ಆದರೆ, ಬಿಲ್ ನಲ್ಲಿ ₹೬೦೦ ಪಡೆಯಲಾಗಿದೆ. ಅಲ್ಲದೇ ಮೃತ ಬಸವರಾಜರೆಡ್ಡಿ ಮೂರಾಲ್ಕು ಬಾರಿ ಅಂಗಡಿ ಮಾಲೀಕನಿಗೆ ಈ ಕಳೆನಾಶಕ ಕೇಳಿದ್ದರಿಂದ ತರಿಸಿಕೊಟ್ಟಿದ್ದಾನೆ ಎಂದು ಕೃಷಿ ಅಧಿಕಾರಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯ ರಸಗೊಬ್ಬರ ಅಂಗಡಿ ಮಾಲೀಕರು ಸಿಂಧನೂರಿನ ಗಾಂಧಿನಗರದ ವಿನಾಯಕ ಟ್ರೆಡರ್ಸ್ ಜತೆ ಲಿಂಕ್ ನಲ್ಲಿದ್ದಾನೆ. ಕೆಲ ತಿಂಗಳು ಹಿಂದೆ ಕನಕಗಿರಿ ಹಾಗೂ ಗಂಗಾವತಿ ತಾಲೂಕಿನ ರೈತರಿಗೆ ಇದೇ ಅಂಗಡಿ (ಲಲಿತಾ ಟ್ರೇಡರ್ಸ) ಮಾಲೀಕನೊಬ್ಬ ಜನನಿ ಸಿಡ್ಸ್ ಎಂಬ ಕಲಬೆರಕೆ ಹಾಗೂ ಕಳಪೆ ಭತ್ತದ ಬೀಜ ಮಾರಾಟ ಮಾಡಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.ಪ್ಯಾರಾಕ್ವಿಟ್ ಡೈಕ್ಲೋರಾಯಿಡ್ ಟ್ರಾಫಿಕಲ್ ಕಂಪನಿಯ ಕಳೆನಾಶಕ ಕೇಂದ್ರ ಸರ್ಕಾರ ಇನ್ನೂ ನಿಷೇಧಿಸಿಲ್ಲ. ಮಾರಾಟಕ್ಕೆ ಅವಕಾಶ ಇದೆ. ಕೆಲವೇ ಅಂಗಡಿಗಳಲ್ಲಿ ಮಾತ್ರ ಈ ಕಳೆನಾಶಕ ಮಾರಾಟ ಮಾಡಲಾಗುತ್ತಿದೆ. ಸಿಂಧನೂರಿನ ಗಾಂಧಿನಗರದ ವಿನಾಯಕ ಟ್ರೆಡರ್ಸ್ ನಿಂದ ಕಳೆನಾಶಕ ತರಿಸಿ ಲಲಿತಾ ಟ್ರೆಡರ್ಸ್ ಅಂಗಡಿಯ ಮಾಲೀಕನು ಮೃತ ಬಸವರಾಜರೆಡ್ಡಿಗೆ ಕೊಟ್ಟಿದ್ದಾನೆ ಎಂದು ಕನಕಗಿರಿ ಕೃಷಿ ಅಧಿಕಾರಿ ನವೀನ್ ತಿಳಿಸಿದ್ದಾರೆ.