ಗ್ರಾಮಗಳ ಅಭಿವೃದ್ಧಿಯೇ ಗ್ರಾಮಸಭೆಯ ಉದ್ದೇಶ

KannadaprabhaNewsNetwork | Published : Apr 24, 2025 11:49 PM

ಸಾರಾಂಶ

ಸರ್ಕಾರದ ಯೋಜನೆಗಳನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ಕೊಂಡೊಯ್ಯಲು ಗ್ರಾಮಸಭೆ ಸಹಕಾರಿಯಾಗಿದೆ, ಈ ಸಭೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸುವುದರಿಂದ ಬಹುತೇಕ ಗ್ರಾಮಸ್ಥರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಭೆಯಲ್ಲಿ ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರ ಸಮ್ಮುಖದಲ್ಲೆ ನಿರ್ಧರಿಸಬಹುದು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗ್ರಾಮಸ್ಥರು ಗ್ರಾಮಗಳಲ್ಲಿ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ನೀಡುವ ಹಾಗೂ ಹೊಸ ಕಾಮಗಾರಿ ಕೈಗೊಳ್ಳಲು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಅವರು ತಾಲೂಕಿನ ಬೂದಿಕೋಟೆ ಗ್ರಾಪಂನಲ್ಲಿ ನಡೆದ ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನತೆ ನಮ್ಮನ್ನು ಆಯ್ಕೆ ಮಾಡಿದ ಮೇಲೆ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದರು.

ಕೆಲಸ ಮಾಡದಿದ್ದರೆ ಗೌರವ ಜಾಸ್ತಿ

ಆದರೆ ಕೆಲವರು ಅಧಿಕಾರ ಇದ್ದಾಗ ಏನೇನು ಕೆಲಸ ಮಾಡದಿದ್ದರೂ ಹೆಚ್ಚಿನ ಗೌರವ ಪಡೆಯುತ್ತಾರೆ. ಅಂತಹವರಿಗೆ ಬೆಲೆ ಜಾಸ್ತಿ, ಕೆಲಸ ಮಾಡಿದವರಿಗೆ ಬೆಲೆ ಕಡಿಮೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೆಸರು ಹೇಳದೆ ಟೀಕಿಸಿದರು. ಡಾಂಬರೀಕರಣ, ಕುಡಿಯುವ ನೀರು

ಬೂದಿಕೋಟೆ ಹೋಬಳಿಯ ಎಲ್ಲಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಮಾರ್ಕಂಡೇಯ ಡ್ಯಾಂನಿಂದ ಹರಿಯುವ ನೀರಿನ ಕಾಲುವೆಗಳು ಅವ್ಯವಸ್ಥೆಯಿಂದ ಕೂಡಿದ್ದು ಗ್ರಾಮಸ್ಥರ ನಾಲೆಯನ್ನು ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದ ಅವರ ಮನವಿಗೆ ಸ್ಪಂದಿಸಿ ೨ಕೋಟಿ ವೆಚ್ಚದಲ್ಲಿ ನಾಲೆ ದುರಸ್ತಿ ಕಾಮಗಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ

ಸರ್ಕಾರದ ಯೋಜನೆಗಳನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ಕೊಂಡೊಯ್ಯಲು ಗ್ರಾಮಸಭೆ ಸಹಕಾರಿಯಾಗಿದೆ, ಈ ಸಭೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸುವುದರಿಂದ ಬಹುತೇಕ ಗ್ರಾಮಸ್ಥರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಭೆಯಲ್ಲಿ ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರ ಸಮ್ಮುಖದಲ್ಲೆ ನಿರ್ಧರಿಸಬಹುದು ಆದ್ದರಿಂದ ಎಲ್ಲಾ ಗ್ರಾಮಸ್ಥರು ಸಭೆಯಲ್ಲಿ ಭಾಗಹಿಸಿ ಅಭಿವೃದ್ದಿ ಕಾಮಗಾರಿಗಳನ್ನು ಅನುಮೋದಿಸಬೇಕೆಂದು ಹೇಳಿದರು.

ಪಿಡಿಒ ಕಿಶೋರ್ ರವರು ಗ್ರಾಪಂ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ವಿವರಿಸಿದರು. ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು ೪೦ ಜನರು ನಿವೇಶನ ರಹಿತರಾಗಿದ್ದು ಅವರಿಗೆ ನಿವೇಶನ ಹಂಚುವ ಸಲುವಾಗಿ ಪಂಚಾಯ್ತಿ ವ್ಯಾಪ್ತಿಯಲ್ಲಿ ೨ಎಕರೆ ಜಮೀನನ್ನು ಗುರುತಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನರೇಗ ಮೂಲಕ ರಸ್ತೆ ನಿರ್ಮಾಣ

ಬೂದಿಕೋಟೆ ಗ್ರಾಮದ ಸ್ಮಶಾನಕ್ಕೆ ರಸ್ತೆ ಸಮಪರ್ಕವಿಲ್ಲದ ಕಾರಣ ಸತ್ತವರನ್ನು ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಎದುರಾಗಿದ್ದು ಈಗಾಲೇ ಸ್ಮಶಾನಕ್ಕೆ ಸಂಬಂಧಿಸಿದಂತೆ ಭೂಮಿಯನ್ನು ಸರ್ವೆ ಮಾಡಿ ಒತ್ತುವರಿಯನ್ನು ಬಿಡಿಸಲಾಗಿದೆ ಕೂಡಲೆ ಗ್ರಾಪಂ ಮೂಲಕ ನರೇಗ ಯೋಜನೆ ಮೂಲಕ ರಸ್ತೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷ ಬಿ.ಆರ್.ಮಂಜುನಾಥ್,ಉಪಾಧ್ಯಕ್ಷ ಚಂದ್ರಪ್ಪ,ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ತಾಪಂ ಇಒ ರವಿಕುಮಾರ್,ಪಿಡಿಒ ಕಿಶೋರ್ ಕುಮಾರ್,ಕಾರ್ಯದರ್ಶಿ ಮುನಿರಾಜು,ಎಇಇಗಳಾದ ರವಿಕುಮಾರ್,ಸುಕುಮಾರ್ ರಾಜು,ಸಿಡಿಪಿಒ ಮುನಿರಾಜು,ಜಿಪಂ ಮಾಜಿ ಸದಸ್ಯ ಬಿ.ವಿ.ಕೃಷ್ಣ,ತಾಪಂ ಮಾಜಿ ಅಧ್ಯಕ್ಷ ಮಹದೇವ್,ಗ್ರಾಪಂಃ ಸದಸ್ಯರಾದ ಕೃಷ್ಣಪ್ಪಶೆಟ್ಟಿ,ಸುರೇಶ್ ಇತರರು ಇದ್ದರು.

Share this article