ಅದ್ಧೂರಿಯಾಗಿ ನೆರವೇರಿದ ಮೂರುಸಾವಿರ ಮಠದ ರಥೋತ್ಸವ

KannadaprabhaNewsNetwork |  
Published : Sep 03, 2024, 01:32 AM IST
ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಗುರುಸಿದ್ದೇಶ್ವರ ಶ್ರೀಗಳ ಜಾತ್ರಾಮಹೋತ್ಸವದ ರಥೋತ್ಸವ ಸೋಮವಾರ ಸಂಜೆ ಅದ್ಧೂರಿಯಾಗಿ ನೆರವೇರಿತು. | Kannada Prabha

ಸಾರಾಂಶ

ಅಪಾರ ಭಕ್ತಗಣ ಹೊಂದಿರುವ, ಉತ್ತರ ಕರ್ನಾಟಕ ಭಾಗದ ಐತಿಹಾಸಿಕ ಮಠಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯ ಮೂರುಸಾವಿರಮಠದ ಶ್ರೀ ಗುರುಸಿದ್ದೇಶ್ವರ ಶ್ರೀಗಳ ಮಹಾರಥೋತ್ಸವ ಸೋಮವಾರ ಸಂಜೆ ಅಪಾರ ಜನಸ್ತೋಮದ ನಡುವೆ ಸಂಭ್ರಮದಿಂದ ನೆರವೇರಿತು.

ಹುಬ್ಬಳ್ಳಿ: ಅಪಾರ ಭಕ್ತಗಣ ಹೊಂದಿರುವ, ಉತ್ತರ ಕರ್ನಾಟಕ ಭಾಗದ ಐತಿಹಾಸಿಕ ಮಠಗಳಲ್ಲಿ ಒಂದಾಗಿರುವ ಇಲ್ಲಿಯ ಮೂರುಸಾವಿರಮಠದ ಶ್ರೀ ಗುರುಸಿದ್ದೇಶ್ವರ ಶ್ರೀಗಳ ಮಹಾರಥೋತ್ಸವ ಸೋಮವಾರ ಸಂಜೆ ಅಪಾರ ಜನಸ್ತೋಮದ ನಡುವೆ ಸಂಭ್ರಮದಿಂದ ನೆರವೇರಿತು.

ಪ್ರತಿ ವರ್ಷ ಶ್ರಾವಣಮಾಸದ ಕೊನೆಯ ಸೋಮವಾರ ನಡೆಯುವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಬೆಳಗಿನ ಜಾವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಠವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಸಂಜೆ ಮೂರುಸಾವಿರ ಮಠದಿಂದ ಸಕಲ ವಾದ್ಯ ಮೇಳದೊಂದಿಗೆ ಆರಂಭವಾದ ಪಲ್ಲಕ್ಕಿ ಮೆರವಣಿಗೆಯು ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣ ಮಂಟಪ (ಓಲಿ ಮಠ)ಕ್ಕೆ ತೆರಳಿತು. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯು ಮರಳಿ ಶ್ರೀಮಠಕ್ಕೆ ಆಗಮಿಸಿತು. ಆನಂತರ ಶ್ರೀಮಠದ ಆವರಣದಲ್ಲಿ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳ ನೇತೃತ್ವದಲ್ಲಿ ಅಪಾರ ಭಕ್ತರವೃಂದ ಸೇರಿದಂತೆ ಅನೇಕ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ಸಂಜೆ ಶ್ರೀಮಠದ ಆವರಣದಿಂದ ಪ್ರಾರಂಭಗೊಂಡ ರಥೋತ್ಸವ ಕೊಪ್ಪಿಕರ ರಸ್ತೆಯ ಬಳಿ ಸೊಬರದಮಠ ಗಲ್ಲಿಯ ವರೆಗೂ ನಡೆಯಿತು. ಬಳಿಕ ಅಲ್ಲಿಂದ ಮರಳಿದ ರಥೋತ್ಸವ ಶ್ರೀಮಠಕ್ಕೆ ಬಂದು ಸಂಪನ್ನಗೊಂಡಿತು. ರಥೋತ್ಸವ ವೇಳೆ ಭಕ್ತರು ಗುರುಸಿದ್ದೇಶ್ವರ ಮಹಾರಾಜಕೀ ಜೈ, ಹರ ಹರ ಮಹಾದೇವ ಎಂದು ಘೋಷಣೆ ಮೊಳಗಿಸಿ ಸಂಭ್ರಮಿಸಿದರು.

ರಥೋತ್ಸವದ ಮಾರ್ಗದುದ್ದಕ್ಕೂ ಡೊಳ್ಳು, ಜಾಂಝ ಮೇಳ, ಕೋಲಾಟ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡು ಮೆರಗು ತಂದವು. ಅಲ್ಲದೇ, ರಥೋತ್ಸವದ ದಾರಿಯುದ್ದಕ್ಕೂ ಭಕ್ತರು ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಶೂನ್ಯ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ವಾರ್ಷಿಕ ರಜತ ಸಿಂಹಾಸನಾರೋಹಣ ನಡೆಯಿತು. ಜಾತ್ರಾ ಮಹೋತ್ಸವ ಅಂಗವಾಗಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಆಗಮಿಸಿದ ಭಕ್ತರು ಶ್ರೀಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದರು. ಮಧ್ಯಾಹ್ನ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ನಗರ, ಸುತ್ತಲಿನ ಜಿಲ್ಲೆಯ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ವ್ಯಕ್ತಪಡಿಸಿದರು.

ರಥೋತ್ಸವದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಗಣ್ಯರಾದ ಅರವಿಂದ ಕುಬಸದ, ವಿಜಯ ಶೆಟ್ಟರ, ವೀರೇಶ ಸಂಗಳದ, ಮಂಜುನಾಥ ಮುನವಳ್ಳಿ, ಅಮರೇಶ ಹಿಪ್ಪರಗಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!