ಅಮರೇಶ್ವರಸ್ವಾಮಿ ಕಂದಗಲ್ಲಮಠ
ಉತ್ತಮ ರಸ್ತೆ ಇದ್ದರೆ ಪ್ರಯಾಣಿಕರು ಸುರಕ್ಷಿತವಾಗಿ ಹಾಗೂ ಬೇಗ ತಲುಪಬಹುದು. ಆದರೆ ಈ ರಸ್ತೆಯಲ್ಲಿ ಜೀವ ಕೈಯಲ್ಲಿಟ್ಟುಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ತೊಂಡಿಹಾಳ ಮಾರ್ಗವಾಗಿ ನರೇಗಲ್ಲ ಪಟ್ಟಣಕ್ಕೆ ತೆರಳಿದರೆ, ಇಲ್ಲವೇ ನರೇಗಲ್ಲ ಪಟ್ಟಣದಿಂದ ತೊಂಡಿಹಾಳ ಗ್ರಾಮಕ್ಕೆ ಬಂದರೆ ಈ ರಸ್ತೆಯ ಅಧ್ವಾನ ಸ್ಥಿತಿ ಕಂಡು ಬರುತ್ತದೆ.
ಜಾಲಿ, ತಗ್ಗು ಗುಂಡಿ: ನರೇಗಲ್ಲ ಸಂಪರ್ಕಿಸುವ ತೊಂಡಿಹಾಳ-ನರೇಗಲ್ಲ ರಸ್ತೆಗೆ ಮಗ್ಗುಲುಗಳೆಲ್ಲ ಜಾಲಿಗಿಡಗಳಿಂದ ಕೂಡಿದೆ. ಎದುರು ಬರುವ ವಾಹನ ನೇರವಾಗಿ ಬೇಗ ಕಾಣುವುದಿಲ್ಲ. ಇದರಿಂದ ಅಪಘಾತ ಉಂಟಾಗುವ ಸಂಭವ ಹೆಚ್ಚಿದೆ. ಅಲ್ಲದೆ ರಸ್ತೆ ತುಂಬೆಲ್ಲ ತಗ್ಗು-ಗುಂಡಿಗಳು ಇರುವ ಕಾರಣ ರಸ್ತೆ ಸಂಚಾರ ಸಹ ಕಷ್ಟಕರವಾಗಿದೆ. ವಾಹನಗಳು ಯಾವ ಕಡೆ ಬರುತ್ತವೆ ಎಂಬುದೇ ಗೊತ್ತಾಗುವುದಿಲ್ಲ.ರಸ್ತೆ ದುರಸ್ತಿ ಆಗಲಿ: ಜನರ ಹಿತದೃಷ್ಟಿಯಿಂದ ಈ ರಸ್ತೆಯನ್ನು ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ದುರಸ್ತಿ ಮಾಡಿಸಬೇಕು. ಮುಂದೆ ಆಗುವ ಅಪಾಯಕಾರಿ ಘಟನೆಗಳನ್ನು ತಪ್ಪಿಸಬೇಕು. ಇದರಿಂದ ಜನರ ಪ್ರಯಾಣ ಸಹ ಸುಖಕರವಾಗಿರುತ್ತದೆ. ಅಲ್ಲದೆ ಮಳೆಗಾಲದಲ್ಲಿ ಸಹ ಅನುಭವಿಸುವ ತೊಂದರೆ ತಪ್ಪುತ್ತದೆ. ಈ ಬಗ್ಗೆ ಕಾಳಜಿ ವಹಿಸಿದರೆ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.ನರೇಗಲ್ಲ ಪಟ್ಟಣಕ್ಕೆ ತೊಂಡಿಹಾಳ ರಸ್ತೆ ಮೂಲಕ ತೆರಳಬೇಕೆಂದರೆ ಯಾಕಪ್ಪಾ ಈ ರಸ್ತೆಗೆ ಬಂದೇವು ಎನ್ನುವ ಭಾವನೆ ಬರುತ್ತದೆ. ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿ ರಸ್ತೆ ಸುಧಾರಣೆ ಮಾಡಿದರೆ ಪ್ರಯಾಣಕ್ಕೆ ಅನುಕೂಲ ಆಗುತ್ತದೆ. ರಸ್ತೆ ತುಂಬಾ ಹದಗೆಟ್ಟಿದೆ. ಕಲ್ಲು, ತಗ್ಗು, ಜಾಲಿ ಗಿಡಗಳಿಂದ ತುಂಬಿದೆ ಎಂದು ರಸ್ತೆ ಸಂಚರಿಸುವ ಕಲ್ಲಯ್ಯ, ರಾಮಣ್ಣ ಹೇಳುತ್ತಾರೆ.