ಹೊಸಕೋಟೆ: ಕಾರ್ಮಿಕ ವರ್ಗದಲ್ಲಿ ಶೇ 20 ಸಂಘಟಿತ, ಶೇ80 ಅಸಂಘಟಿತ ಕಾರ್ಮಿಕರಿದ್ಧಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಫಲಾನುಭವಿಗಳಿಗೆ ಕಿಟ್ ವಿತರಿಸಿ ಮಾತನಾಡಿದರು.ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅನನ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಮಿಕರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಪಿಂಚಣಿ, ಟೂಲ್ ಕಿಟ್, ಮಹಿಳೆಯರಿಗೆ ಹೆರಿಗೆ ಸೌಲಭ್ಯ, ವಿವಾಹ ಹಾಗೂ ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ ವೈದ್ಯಕೀಯ ಸಹಾಯಧನ ಅಪಘಾತ ಪರಿಹಾರ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.ಬಿಎಆರ್ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜ್ ಮಾತನಾಡಿ, ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಬಿ.ಎನ್.ಬಚ್ಚೇಗೌಡರು ಕಾರ್ಮಿಕ ಸಚಿವರಾಗಿದ್ದ ವೇಳೆ ಕಾರ್ಮಿಕ ಇಲಾಖೆಗೆ ಹೊಸ ಕಾಯಕಲ್ಪ ಕೊಟ್ಟರು. ಸಣ್ಣ ಸಣ್ಣ ಕೈಗಾರಿಕಾ ವಲಯದ ಕಾರ್ಮಿಕರ ಅಭ್ಯುದಯಕ್ಕೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ತಾಲೂಕು ಕಾರ್ಮಿಕ ಕಲ್ಯಾಣ ಅಧಿಕಾರಿ ಯತೀಶ್ ಮಾತನಾಡಿ, ತಾಲೂಕಿನಲ್ಲಿ 17 ಸಾವಿರ ಅಸಂಘಟಿತ ಕಾರ್ಮಿಕರು ನೋಂದಣೆ ಮಾಡಿಕೊಂಡಿದ್ದು, ಕಟ್ಟಡ ಕಾರ್ಮಿಕರಿಗೆ120 ಮೆಸಿನ್ ಕಿಟ್, 20 ಎಲೆಕ್ಟ್ರೀಷಿಯನ್ ಕಿಟ್, ರಸ್ತೆ ಕಾಮಗಾರಿ ಕಾರ್ಮಿಕರಿಗೆ 20 ಕಿಟ್, ಕಾರ್ಮಿಕರ ಆರೋಗ್ಯ ಸುಧಾರಣೆಗೆ ಪೌಷ್ಟಿಕಾಂಶಯುಕ್ತ ನ್ಯೂಟ್ರಿಷನ್ ಕಿಟ್ ವಿತರಿಸಲಾಗುತ್ತಿದೆ ಎಂದರು.ವಿತರಕರು, ಪತ್ರಕರ್ತರಿಗೆ ಸೌಲಭ್ಯ: ತಾಲೂಕು ಕಾರ್ಮಿಕ ಕಲ್ಯಾಣ ಅಧಿಕಾರಿ ಯತೀಶ್ ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯಕ್ಕೆ ಪತ್ರಿಕಾ ವಿತರಕರು, ಪತ್ರಕರ್ತರು, ಡೆಲಿವರಿ ಬಾಯ್ಗಳನ್ನು ಸೇರಿಸಲಾಗಿದ್ದು ತಮ್ಮ ಗುರುತಿನ ಚೀಟಿ ನೀಡುವುದರ ಮೂಲಕ ಅಂಘಟಿತ ಕಾರ್ಮಿಕರಾಗಿ ನೋಂದಣೆ ಮಾಡಿಕೊಂಡು ಕಾರ್ಮಿಕ ಇಲಾಖೆಯ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.