ಅಂತರ್ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಕನ್ನಡಪ್ರಭ ವಾರ್ತೆ ಹಾವೇರಿ
ಸುಸ್ಥಿರ ಭವಿಷ್ಯವನ್ನು ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಎನ್ಜಿಓಗಳ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಹೇಳಿದರುನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಪೆವಾರ್ಡ ಕರ್ನಾಟಕ ಹಾಗೂ ಹಾವೇರಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಅಂತರ್ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ತಳಮಟ್ಟದ ಸಮುದಾಯಕ್ಕೆ, ಜನರಿಗೆ ತಲುಪಿಸುವಲ್ಲಿ ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳ ಕಾರ್ಯದಿಂದ ದೇಶದ ಪ್ರಗತಿ ಕಾಣಬಹುದು. ಸರ್ಕಾರದ ಜತೆಗೆ ನುರಿತ ಸ್ವಯಂ ಸೇವಾ ಸಂಸ್ಥೆಗಳು ಕೈ ಜೋಡಿಸಿದಾಗ ಅಭಿವೃದ್ದಿ ಕಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಅರ್ಹ ಸಂಸ್ಥೆಗಳನ್ನು ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಸಮೃದ್ಧ ರಾಷ್ಟ್ರ, ಜಾತ್ಯತೀತ ಸಮಾಜ ಸ್ವಯಂ ಸೇವಾ ಸಂಸ್ಥೆಗಳ ಪರಿಣಾಮಕಾರಿ ಕೆಲಸದಿಂದ ಮಾತ್ರ ಸಾಧ್ಯ. ಸ್ವಯಂ ಸೇವಾ ಸಂಸ್ಥೆಗಳು ನೊಂದವರ ಧ್ವನಿಯಾಗಿ ರೈತರ, ಮಹಿಳಾ ಸಬಲಿಕರಣ, ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನಿಯವಾದದ್ದು. ಸರ್ಕಾರ ಯೋಜನೆಗಳ ಅನುಷ್ಠಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಲಹೆ, ಸಹಕಾರ ಪಡೆದು ಅವಕಾಶ ವಂಚಿತ ಜನರಿಗೆ, ಸಮುದಾಯಕ್ಕೆ ಗುಣಮಟ್ಟದ ಸೇವೆ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಯಶ್ರೀ ಕರೆಗೌಡ್ರ (ಆರೋಗ್ಯ ಕ್ಷೇತ್ರ), ಚನ್ನಬಸಪ್ಪ ಕೊಂಬಳಿ (ಕೃಷಿ ಕ್ಷೇತ್ರ), ಹಸಿನಾ ಹೆಡಿಯಾಳ, ಕರಿಬಸಪ್ಪ ಕಾಗಿನೆಲಿ (ಪರಿಸರ ಮತ್ತು ಅರಣ್ಯ ಸಂರಕ್ಷಣೆ), ಗುತ್ತೆಮ್ಮ (ಮಹಿಳಾ ಸಬಲೀಕರಣ) ಅವರನ್ನು ಸನ್ಮಾನಿಸಲಾಯಿತು.
ಹಾವೇರಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಎಸ್.ಎಚ್. ಮಜೀದ್ ಮಾತನಾಡಿದರು. ಎಚ್.ಎಫ್. ಅಕ್ಕಿ ಅಧ್ಯಕ್ಷತೆ ವಹಿಸಿದ್ದರು.ರೆಡ್ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷ ಸಂಜೀವ ನೀರಲಗಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಪಾಟೀಲ, ಪವಿತ್ರಾ ಹರಿಜನ, ಜನವಿಕಾಸ ಫೌಂಡೇಶನ್ನ ಗೀತಾ ಪಾಟೀಲ, ಮುತ್ತುರಾಜ ಮಾದರ, ಎಂ.ಎನ್. ಹೊನಕೇರಿ ಹಾಗೂ ಜಿಲ್ಲೆಯ ವಿವಿಧ ಸಂಘ- ಸಂಸ್ಥೆಗಳ ಸುಮಾರು 180 ಜನ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.