ಶರಣಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಗೆ ಚಾಲನೆ
ಶಾಲಾ ಮಕ್ಕಳಲ್ಲಿ ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಎಂಬುದನ್ನು ತಿಳಿಸುವುದೇ ಶಾಲಾ ಸಂಸತ್ತು ಕಾರ್ಯಕ್ರಮದ ಮೂಲ ಉದ್ದೇಶ ಎಂದು ಸಂಸ್ಥೆಯ ಉಪಾಧ್ಯಕ್ಷ ಜಗದೀಶಪ್ಪ ಅವರಾದಿ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಸಂಸತ್ತು ಕಾರ್ಯಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಮಾದರಿಯಾಗಿದೆ ಎಂದು ಹೇಳಿದರು.ಇದಕ್ಕೂ ಮುನ್ನ ತರಗತಿ ಆರಂಭವಾಗುತ್ತಿದ್ದಂತೆ ಚುನಾವಣಾ ಪ್ರಕ್ರಿಯೆ ಆರಂಭವಾಯಿತು, ಶಾಲೆಯಲ್ಲಿ ಮತಗಟ್ಟೆ ನಿರ್ಮಿಸಲಾಗಿತ್ತು. ಮತದಾರ ಮಕ್ಕಳ ಪಟ್ಟಿ ಸಿದ್ಧವಡಿಸಿ, ಆಧಾರ್ ಕಾಡ್ಗಳನ್ನು ಗುರುತಿನ ಚೀಟಿಗಳಂತೆ ಪರಿಶೀಲಿಸಿ ತೋರ್ ಬೆರಳಿಗೆ ಸಾಮಾನ್ಯ ಇಂಕಿನ ಶಾಹಿ ಹಚ್ಚಲಾಯಿತು. ಸರತಿ ಸಾಲಿನಲ್ಲಿ ನಿಂತಿದ್ದ ಮಕ್ಕಳು, ಶಿಸ್ತಿನಿಂದ ಮತ ಚಲಾಯಿಸಿದರು. ಮತದಾನಕ್ಕೂ ಮೊದಲು ಶಾಲೆಯ ಹಲವು ವಿದ್ಯಾರ್ಥಿನಿಯರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಹಲವು ವಿದ್ಯಾರ್ಥಿಗಳನ್ನು ಶಾಲಾ ಸಂಸದರನ್ನಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಮತದಾನ ರಾಯಭಾರಿ ಆಗಿದ್ದ ಮೆಹಬೂಬ ಕಿಲ್ಲೇದಾರ್ ಹೊಸ ತಂತ್ರಜ್ಞಾನದ ಇವಿಎಂ ಮೂಲಕ ಚುನಾವಣೆ ಮಾಹಿತಿ ನೀಡಿ ಚುನಾವಣೆ ಪ್ರಾರಂಭ ಮಾಡಿದರು.