ಕನ್ನಡಕ್ಕೆ ಭದ್ರ ಬುನಾದಿ ಹಾಕಿದವರು ಡೆ. ಚನ್ನಬಸಪ್ಪ: ಜಯಶ್ರೀ ಶಿಂತ್ರಿ

KannadaprabhaNewsNetwork | Published : Jan 6, 2025 1:01 AM

ಸಾರಾಂಶ

ಇಲ್ಲಿಯ ಡಯಟ್‌ನಲ್ಲಿ ಧಾರವಾಡದ ಶಾಲಾ ಶಿಕ್ಷಣ ಸಂಕಥನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಧಾರವಾಡ: ಡೆ. ಚನ್ನಬಸಪ್ಪನವರು ಕನ್ನಡ ಭಾಷೆಯ ಬೆಳವಣಿಗೆಗಾಗಿ ಕನ್ನಡ ಪಂಡಿತರಿಂದ ಪಠ್ಯ ಪೂರಕ ಸಾಮಗ್ರಿ ರಚಿಸಿ ಪ್ರಾಥಮಿಕ ಶಾಲೆಗಳಿಗೆ ಪೂರೈಸಿ ಕನ್ನಡ ಕಲಿಕೆಗೆ ಭದ್ರ ಬುನಾದಿ ಹಾಕುವುದಲ್ಲದೇ, ಕನ್ನಡ ಭಾಷಾ ಅನುಷ್ಠಾನ ಸಹಿತ ಹಲವಾರು ಸುಧಾರಣೆಗೆ ಪ್ರಯತ್ನಿಸಿದ್ದನ್ನು ಕನ್ನಡಿಗರು ಮರೆಯುವಂತಿಲ್ಲ ಎಂದು ಶಿಕ್ಷಣ ಇಲಾಖೆ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ ಹೇಳಿದರು.

ಇಲ್ಲಿಯ ಡಯಟ್‌ನಲ್ಲಿ ಏರ್ಪಡಿಸಿದ್ದ ಧಾರವಾಡದ ಶಾಲಾ ಶಿಕ್ಷಣ ಸಂಕಥನ ಪುಸ್ತಕ ಲೋಕಾರ್ಪಣೆಯಲ್ಲಿ ಮಾತನಾಡಿದರು.ಗಂಡು ಮಕ್ಕಳ ಸರ್ಕಾರಿ ಟ್ರೇನಿಂಗ್ ಕಾಲೇಜಿನ ಪ್ರಥಮ ಪ್ರಿನ್ಸಿಪಾಲರಾಗಿ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸುದ್ದಿ, ಸಮಾಚಾರಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕೆಂಬ ಮಹದಾಸೆಯಿಂದ 1865ರಲ್ಲಿ ‘ಮಠಪತ್ರಿಕೆ’ ಆರಂಭಿಸಿದರು. ಈ ರೀತಿಯ ಹಲವಾರು ಐತಿಹಾಸಿಕ ಘಟನೆಗಳು ಈ ಪುಸ್ತಕದಲ್ಲಿ ಅಡಕವಾಗಿರುವುದು ಹೆಮ್ಮೆಯ ವಿಷಯ ಎಂದರು.

ಪುಸ್ತಕ ಲೋಕಾರ್ಪಣೆ ಮಾಡಿದ ಐಐಟಿ ಡೀನ್ ಪ್ರೊ. ಎಸ್.ಎಂ. ಶಿವಪ್ರಸಾದ್ ಮಾತನಾಡಿ, ಈ ವಿಜ್ಞಾನ ಯುಗದಲ್ಲಿ ನ್ಯಾನೋ ಟೆಕ್ನಾಲಜಿ, ಬಯೋಟೆಕ್ನಾಲಜಿ, ಕೃತಕ ಬುದ್ಧಿಮತ್ತೆ ತುಂಬಾ ನಿರ್ಣಾಯಕ ಪಾತ್ರ ಹೊಂದಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು ಎಂದರು.

ಪುಸ್ತಕ ಪರಿಚಯ ಮಾಡಿದ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಸಿದ್ದರಾಮ ಮನಹಳ್ಳಿ, ಶಿವಶಂಕರ ಹಿರೇಮಠರ 1961 ರಿಂದ 2020ರ ವರೆಗಿನ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು ಕೇಂದ್ರಿತ ಸೇವಾ ನೆನಪುಗಳ ಸರಮಾಲೆಯನ್ನು ಈ ಪುಸ್ತಕ ಒಳಗೊಂಡಿದೆ. ಉಸಿರಾಗಿರುವ ಹಸಿರು, ಬಯಲಾಗಿರುವ ಬೆಳಕು, ಆಯ್ದ ಬರಹ, ಜೋಡಿ ದೀಪಗಳು ಧಾರವಾಡದ ನೆರಳು ನೀಡುವ ಮರಗಳು, ಶಿಕ್ಷಣ ಸೇವಾಯಾತ್ರೆ ಕವನಗಳು ಎಂಬ ಪ್ರಮುಖ ಭಾಗಗಳನ್ನು ಒಳಗೊಂಡಿದೆ ಎಂದರು.

ಕೃತಿಕಾರ ಶಿವಶಂಕರ ಹಿರೇಮಠ ಹಾಗೂ ಸಾನಿಧ್ಯ ವಹಿಸಿದ್ದ ಗದಗ-ಡಂಬಳ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಮಾತನಾಡಿದರು. ಶಾಂತಲಾ ಹಿರೇಮಠ, ಎಂ.ಎಂ. ಚಿಕ್ಕಮಠ, ಜಯಶ್ರೀ ಕಾರೇಕರ ಇದ್ದರು. ಹೇಮಂತ ಲಮಾಣಿ ಪ್ರಾರ್ಥಿಸಿದರು. ಎಸ್.ಬಿ. ಕೊಡ್ಲಿ ಸ್ವಾಗತಿಸಿದರು. ಡಾ. ರೇಣುಕಾ ಅಮಲಝರಿ ನಿರೂಪಿಸಿದರು. ವಿಜಯಲಕ್ಷ್ಮಿ ಅರ್ಕಸಾಲಿ ವಂದಿಸಿದರು.

Share this article