ಕನ್ನಡಪ್ರಭ ವಾರ್ತೆ ಮಂಡ್ಯ
ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಆಯೋಜನೆಗೊಂಡಿದ್ದ ಗುರುದೇವೋತ್ಸವ ಶಾಸ್ತ್ರೀಯ ನೃತ್ಯಗಳ ರಾಷ್ಟ್ರೀಯ ಹಬ್ಬ ಅದ್ಧೂರಿಯಾಗಿ ಮೂಡಿಬಂದಿತು. ಆರಂಭದಲ್ಲಿ ವಿನಾಯಕ ಪುಷ್ಪಾಂಜಲಿ, ವೆಂಕಟಾಚಲ ನಿಲಯಂ, ಕನಕದಾಸರು, ಪುರಂದರದಾಸರ ಕೀರ್ತನೆಗಳು, ಶ್ರೀರಾಮ- ಕೃಷ್ಣ, ಶ್ರೀ ಸುಬ್ರಹ್ಮಣ್ಯ, ದೇವಿಯನ್ನು ಕುರಿತಾದ ಕೀರ್ತನಗಳಿಗೆ ಕಲಾವಿದರ ನಾಟ್ಯಪ್ರದರ್ಶನ ಮನಸೂರೆಗೊಂಡಿತು. ರಸ- ಭಾವಗಳನ್ನೆಲ್ಲಾ ಒಂದಾಗಿಸಿಕೊಂಡು ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದ ಕಲಾವಿದರು ಅದನ್ನು ಆಸ್ವಾಧಿಸುವವರ ಅಂತರಂಗಕ್ಕೂ ಮುದವನ್ನು ಉಂಟುಮಾಡಿದರು.
ಅತ್ಯುತ್ತಮ ರಂಗಸಜ್ಜಿಕೆಯೊಂದಿಗೆ, ಧ್ವನಿ- ಬೆಳಕುಗಳ ಸಂಯೋಜನೆಯೊಂದಿಗೆ ಮೂಡಿಬಂದ ಭರತನಾಟ್ಯ ರೂಪಕಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕಲಾವಿದರ ನಾಟ್ಯ ಪ್ರದರ್ಶನವನ್ನು ನೆರೆದಿದ್ದ ಪ್ರೇಕ್ಷಕರಲ್ಲಿ ಅನೇಕರು ಮೊಬೈಲ್ಗಳಲ್ಲಿ ಸೆರೆಹಿಡಿದರು. ಮಕ್ಕಳ ಕಲಾಪ್ರೌಢಿಮೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ನಾಟ್ಯಪ್ರದರ್ಶನವನ್ನು ನೋಡಿ ಆನಂದಿಸಿದರು.ಹಿಂದೂಸ್ತಾನಿ ಕಲಾವಿದೆ, ಕಲಾವಿಮರ್ಶಕಿ ಡಾ.ಮಣಿಕ್ ಬೆಂಗೇರಿ ಮಾತನಾಡಿ, ಭಾರತೀಯ ಕಲೆ, ಸಂಸ್ಕೃತಿ, ಪರಂಪರೆ ಅನಂತವಾದುದು. ಈ ಅನಂತವಾದುದನ್ನು ಪಡೆದುಕೊಳ್ಳುವುದು ನಮಗೆ ದೇವರು ಕೊಟ್ಟಿರುವ ವರ. ಕಲೆಯನ್ನು ಉಳಿಸಿ ಬೆಳೆಸಿಕೊಂಡು ಸಾಧನೆಯತ್ತ ಮುನ್ನಡೆದು ಕಲೆಗೆ ಹಾಗೂ ನಮ್ಮ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸುವುದು ಕಲಾವಿದರಾದವರ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಅನನ್ಯ ಕಲ್ಚರಲ್ ಅಕಾಡೆಮಿ ಸಂಸ್ಥಾಪಕ ಡಾ.ಆರ್.ವಿ.ರಾಘವೇಂದ್ರ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ.ದಿನೇಶ್ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಲ್.ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಗುರುದೇವ ಲಲಿತಕಲಾ ಅಕಾಡೆಮಿಯ ನಿರ್ದೇಶಕಿ ಡಾ.ಚೇತನಾ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಅವರು ಹಾಜರಿದ್ದರು.