- ರಥಸಪ್ತಮಿ ಅಂಗವಾಗಿ ನಡೆದ 108 ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಅಭಿಮತ
ಆದಿ ದೇವ ಎಂದು ಕರೆಯಲ್ಪಟ್ಟು ಏಳು ಬಣ್ಣಗಳ ಕಿರಣಗಳನ್ನು ಜಗತ್ತಿಗೆ ಹೊರಸೂಸುತ್ತಾ ಏಕಚಕ್ರದ ರಥದಲ್ಲಿ ಸದಾ ಸಂಚರಿಸುವ ಭಗವಾನ್ ಸೂರ್ಯ ಜನ್ಮ ತಳೆದ ದಿನ ರಥಸಪ್ತಮಿ. ಸಕಲ ಜೀವಿಗಳ ಜೀವನಾಧಾರವಾಗಿರುವ ಸೂರ್ಯ ಸರ್ವರೋಗ ನಿವಾರಕನು ಆಗಿದ್ದಾನೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ನಾಗೇಶ್ ಕಾಮತ್ ಹೇಳಿದರು.
ಶ್ರೀ ಮಠದ ಆವರಣದಲ್ಲಿ ಪತಂಜಲಿ ಯೋಗಶಿಕ್ಷಣ ಸಮಿತಿ ಆಯೋಜಿಸಿದ್ದ ರಥಸಪ್ತಮಿ ಕಾರ್ಯಕ್ರಮದಲ್ಲಿ ಮಾತನಾಡಿ ವೇದ,ಪುರಾಣಗಳಲ್ಲಿಯೂ ಉಲ್ಲೇಖಿಸಿದಂತೆ ಈ ದಿನ ಹಿಂದೂಗಳಿಗೆ ಪವಿತ್ರವಾದ ದಿನವಾಗಿದೆ. ಸೂರ್ಯ ತನ್ನ ಗುಣ ಲಕ್ಷಣಗಳಿಗೆ ಅನುಸಾರವಾಗಿ ಆದಿತ್ಯ, ದಿನಕರ, ಭಾನು, ರವಿ, ಪ್ರಭಾಕರ, ರಶ್ಮಿಮಾತೆ, ಭುವನೇಶ್ವರ, ಸವಿತಾ, ಸಪ್ತಪತಿ, ಆದಿದೇವ ಎಂಬ ಹಲವು ನಾಮಾವಳಿಗಳಿಂದ ಸಂಭೋಧಿಸಲ್ಪಡುವ ನಾರಾಯಣ ಅಂಶಜನಾದ ಸೂರ್ಯ ಕಣ್ಣಿಗೆ ಕಾಣುವ ದೇವರು ಎಂದು ಪ್ರತಿಪಾದಿಸಿದರು.ಪ್ರಕೃತಿ ಪೂಜೆ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಕಣ್ಣಿಗೆ ಕಾಣುವ ಕಲ್ಲು, ಮಣ್ಣು, ಗಿಡ, ಮರ, ಪ್ರಾಣಿ ಪಕ್ಷಿಗಳಲ್ಲಿಯೂ ದೈವತ್ವ ಕಾಣುವವರು ಭಾರತೀಯರು. ಜಗತ್ತಿಗೆ ಬೆಳಕನ್ನು ನೀಡಿ ಪ್ರಪಂಚದ ಸಕಲ ಜೀವಿಗಳಿಗೂ ಚೈತ್ಯನ್ಯ ನೀಡುವ ಸೂರ್ಯನಿಗೆ ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ವಿಶೇಷ ಆದ್ಯತೆಯಿದೆ. ರಥಸಪ್ತಮಿಯಂದು ಸೂರ್ಯಾರಾಧನೆ ನಮ್ಮ ಸಂಸ್ಕೃತಿಯಲ್ಲಿ ಬೆಳೆದುಬಂದ ಪ್ರಾಚೀನ ಪದ್ಧತಿ. ಪ್ರತಿನಿತ್ಯ ಯೋಗಾಭ್ಯಾಸದಲ್ಲಿ ಸೂರ್ಯನಮಸ್ಕಾರಕ್ಕೆ ವಿಶೇಷ ಸ್ಥಾನವಿದೆ. ದೇಹದ ಎಲ್ಲಾ ಅಂಗಗಳಿಗೆ ಶಕ್ತಿ ತುಂಬುವ ಸೂರ್ಯ ನಮಸ್ಕಾರದಿಂದ ನಮ್ಮ ಆರೋಗ್ಯ, ಆಯಸ್ಸು, ತೇಜಸ್ಸು ವೃದ್ಧಿಯಾಗಿ ಶರೀರ ಸುಸ್ಥಿತಿಯಲ್ಲಿಡಲು ಸಾಧ್ಯ ಎಂದರು.
25 ಶ್ರೀ ಚಿತ್ರ 2-