ಚನ್ನಪಟ್ಟಣ: ತಾಲೂಕಿನ ಸಿಂಗರಾಜಿಪುರ ಗ್ರಾಮದ ಹೊರವಲಯದ ಗವಿರಂಗಸ್ವಾಮಿ ಬೆಟ್ಟದ ಕಂದಕದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿ ಶವವನ್ನು ಬೆಂಗಳೂರು ಕ್ಲೈಂಬಿಂಗ್ ಇನಿಷಿಯೇಟಿವ್ ಟೀಂ ಹಾಗೂ ಚನ್ನಪಟ್ಟಣದ ರಕ್ಷಾ ತಂಡದ ಸಹಕಾರದಿಂದ ಅಕ್ಕೂರು ಪೊಲೀಸರು ಮೇಲೆತ್ತಿದರು.
ಘಟನೆ ಹಿನ್ನೆಲೆ:
ತಾಲೂಕಿನ ಸಿಂಗರಾಜಿಪುರ ಹೊರವಲಯದ ಗವಿರಂಗಸ್ವಾಮಿ ಬೆಟ್ಟದ ಬಳಿ ಕೆಲ ದಿನಗಳಿಂದ ಒಂದು ಹೋಂಡಾ ಡಿಯೋ ಬೈಕ್ ನಿಂತಿತ್ತು. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಬೈಕ್ ಜತೆ ಕೆಲ ದಾಖಲಾತಿಗಳು ದೊರೆತ್ತಿದ್ದು, ಬೆಂಗಳೂರಿನ ಹೊಸಕರೆಹಳ್ಳಿ ನಿವಾಸಿ ಲೋಕೇಶ್(೩೫)ಗೆ ಸೇರಿದ್ದಾಗಿತ್ತು.ಜ.6ರಂದು ಮನೆಯವರಿಗೆ ರಾಮನಗರದ ಕಂಟ್ರೋಲ್ ರೂಮಿನಿಂದ ಲೋಕೇಶ್ ಕುಟುಂಬದವರಿಗೆ ಕರೆ ಮಾಡಿದ ಪೊಲೀಸರಿಗೆ ಬೆಂಗಳೂರಿನ ಹೊಸಕೆರೆಹಳ್ಳಿಯ ನಿವಾಸಿ ಲೋಕೇಶ್ ಡಿ.31ರಿಂದ ನಾಪತ್ತೆಯಾಗಿದ್ದು, ಅವರ ಪತ್ನಿ ಈ ಕುರಿತು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ವಿಚಾರ ತಿಳಿಸಿದರು.
ರೋಪ್ ಮೂಲಕ ಕಾರ್ಯಾಚರಣೆ: ಮಂಗಳವಾರ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಶವ ಹೊರತೆಗೆಯಲು ಪ್ರಯತ್ನಿಸಿದರಾದರೂ ಕಂದಕ ಆಳವಾಗಿದ್ದ ಕಾರಣ ಪ್ರಯತ್ನ ಸಫಲವಾಗಿರಲಿಲ್ಲ. ಬುಧವಾರ ಬೆಳಗ್ಗೆ 7 ಗಂಟೆಗೆ ಬೆಂಗಳೂರು ಕ್ಲೈಂಬಿಂಗ್ ಇನಿಷಿಯೇಟಿವ್ ಟೀಂನ ಸೋಹನ್ ನೇತೃತ್ವದ ತಂಡ ಚನ್ನಪಟ್ಟಣದ ರಕ್ಷಾ ತಂಡ ಅರುಣ್ ಹಾಗೂ ಅಪ್ಪಿ ಅವರ ಸಹಕಾರದಿಂದ ರೋಪ್ ಮೂಲಕ ತಂಡದವರನ್ನು ಕೆಳಕ್ಕೆ ಇಳಿಸಲಾಗಿತ್ತು. ಸತತ ಕಾರ್ಯಾಚರಣೆ ನಡೆಸಿದ ತಂಡ ಬುಧವಾರ ಮಧ್ಯಾಹ್ನ 3 ಗಂಟೆಗೆ ಶವ ಮೇಲೆತ್ತುವಲ್ಲಿ ಸಫಲಗೊಂಡಿದೆ. ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಒಪ್ಪಿಸಲಾಗಿದೆ. ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಟೊ೧೦ಸಿಪಿಟಿ೧,೨,೩: