ಚೆಕ್‌ಪೋಸ್ಟ್‌ ತೆರೆದರೂ ಟಿಪ್ಪರ್‌ ನಿಲ್ಲುತ್ತಿಲ್ಲ!

KannadaprabhaNewsNetwork | Published : Nov 6, 2024 11:58 PM

ಸಾರಾಂಶ

ಹಿರೀಕಾಟಿ ಖನಿಜ ತನಿಖಾ ಠಾಣೆಯ ಹೋಂ ಗಾರ್ಡ್‌ ಬದಲಾವಣೆಗಾಗಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಖನಿಜ ತನಿಖಾ ಠಾಣೆ (ಚೆಕ್‌ ಪೋಸ್ಟ್‌) ಯನ್ನೇ ನಾಲ್ಕು ದಿನಗಳ ಕಾಲ ಮುಚ್ಚಿಸಿದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಹಿರೀಕಾಟಿ ಖನಿಜ ತನಿಖಾ ಠಾಣೆಯ ಹೋಂ ಗಾರ್ಡ್‌ ಬದಲಾವಣೆಗಾಗಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಖನಿಜ ತನಿಖಾ ಠಾಣೆ (ಚೆಕ್‌ ಪೋಸ್ಟ್‌) ಯನ್ನೇ ನಾಲ್ಕು ದಿನಗಳ ಕಾಲ ಮುಚ್ಚಿಸಿದ್ದರು. ಕನ್ನಡಪ್ರಭದಲ್ಲಿ ವರದಿ ಬಂದ ಬಳಿಕ ಖನಿಜ ತನಿಖಾ ಠಾಣೆಯನ್ನು ತೆರೆಯಲಾಗಿದೆ. ಖನಿಜ ತನಿಖಾ ಠಾಣೆ ಓಪನ್‌ ಆದರೂ ಓವರ್‌ ಲೋಡ್‌ ಬೋಡ್ರೆಸ್‌ ಕಲ್ಲು, ಎಂ.ಸ್ಯಾಂಡ್‌, ಜಲ್ಲಿ ಖನಿಜ ತನಿಖಾ ಠಾಣೆ ಮುಂದೆಯೇ ಹೋದರೂ ಹೋಂ ಗಾರ್ಡ್‌ಗಳು ಕುಳಿತ ಜಾಗದಿಂದ ಮೇಲೆ ಏಳುತ್ತಿಲ್ಲ.

ತನಿಖಾ ಠಾಣೆ ಇದ್ದೂ ಇಲ್ಲದಂತಿದೆ. ಹೋಂ ಗಾರ್ಡ್‌ಗಳು ಟಿಪ್ಪರ್‌ಗಳ ತಪಾಸಣೆ ನಡೆಸುತ್ತಿಲ್ಲ. ಈ ಅವಕಾಶ ಬಳಸಿಕೊಂಡು ಕೆಲ ಟಿಪ್ಪರ್‌ ಹಾಗೂ ಕ್ರಷರ್‌ ಮಾಲೀಕರು ಎಂಡಿಪಿ ಹಾಗೂ ರಾಯಲ್ಟಿ ಇಲ್ಲದೆ ರಾಜಾರೋಷವಾಗಿ ವಂಚನೆ ಮಾಡುತ್ತಿದ್ದಾರೆ. ಭೂ ವಿಜ್ಞಾನಿಯೊಬ್ಬರು ತಮಗಿಷ್ಟ ಬಂದಂತೆ ಬರುತ್ತಾರೆ. ಕೆಲ ಹೊತ್ತು ಇದ್ದು ತೆರಳುತ್ತಿದ್ದಾರೆ. ಹೋಂ ಗಾರ್ಡ್‌ ಟಿಪ್ಪರ್‌ ತಡೆದು ತಪಾಸಣೆ ನಡೆಸಲು ಸಾಧ್ಯವೇ ಇಲ್ಲ ಎಂದು ಸ್ಥಳೀಯ ಪ್ರಸನ್ನ ದೂರಿದ್ದಾರೆ.

ಹಿರೀಕಾಟಿ ಸುತ್ತ ಮುತ್ತಲಿನ ಕ್ರಷರ್‌ ಮಾಲೀಕರೊಂದಿಗೆ ಹೋಂ ಗಾರ್ಡ್‌ ಹಾಗೂ ಈ ಭಾಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಶಾಮೀಲಾಗಿದ್ದಾರೆ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ಆರೋಪಿಸಿದೆ.

ಜಿಲ್ಲಾಡಳಿತ ಜಾಣ ಮೌನ:

ಕ್ವಾರಿಯಲ್ಲಿ ಕಲ್ಲು ತೆಗೆಯಲು ನೀಡಿದ ಅನುಮತಿಗಿಂತ ಲಕ್ಷಾಂತರ ಪಟ್ಟು ಕಲ್ಲು ಲೂಟಿ ಆಗುತ್ತಿದೆ. ಆದರೂ ಜಿಲ್ಲಾಡಳಿತ ಅಕ್ರಮ ಲೂಟಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂಬ ದೂರಿದೆ.

ರಾಯಲ್ಟಿ ಮೋಸ:

ಹಿರೀಕಾಟಿ ಬಳಿಯ ಕ್ರಷರ್‌ಗಳಿಗೆ ಹಿರೀಕಾಟಿ ಕ್ವಾರಿಯಿಂದ ಬರುವ ಕಲ್ಲಿಗೆ ರಾಯಲ್ಟಿ ಹಾಕುವುದಿಲ್ಲ. ಕಾರಣ ಕ್ವಾರಿಯಿಂದ ಕ್ರಷರ್‌ಗೆ ಕಲ್ಲು ಹೋಗುತ್ತದೆ ಹಾಗಾಗಿ ಕ್ರಷರ್‌ಗೆ ಕಲ್ಲಿನ ರಾಜಧನ ವಂಚನೆ ಆಗುತ್ತಿದೆ ಎಂದು ಗ್ರಾಮದ ಯುವಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

Share this article