ಕೋರ್ಟ್‌ ಆವರಣಕ್ಕೆ ಬಂದ ಸಾರಿಗೆ ಬಸ್‌

KannadaprabhaNewsNetwork |  
Published : Sep 12, 2024, 01:46 AM IST
11ಎಚ್‌ಪಿಟಿ2- ಹೊಸಪೇಟೆಯ ಕೋರ್ಟ್‌ ಆವರಣದಲ್ಲಿರುವ ಜಫ್ತಿ ಮಾಡಲಾಗಿರುವ ಸಾರಿಗೆ ಬಸ್‌. | Kannada Prabha

ಸಾರಾಂಶ

ಗಾದಿಗನೂರು ಗ್ರಾಮದಲ್ಲಿ 2002ರಲ್ಲಿ ಹೊಸಪೇಟೆ ಡಿಪೋಗೆ ಸೇರಿದ ಬಸ್‌ ಇಬ್ಬರು ಯುವಕರ ಮೇಲೆ ಹರಿದಿತ್ತು.

ಹೊಸಪೇಟೆ; ಅಪಘಾತದಲ್ಲಿ ಮರಣ ಹೊಂದಿದ ಯುವಕನ ಕುಟುಂಬಕ್ಕೆ ನ್ಯಾಯಾಲಯ ಆದೇಶ ನೀಡಿದರೂ ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಸ್ಥಳೀಯ ಡಿಪೋಗೆ ಸೇರಿದ ಬಸ್‌ ಅನ್ನೇ ಕೋರ್ಟ್‌ ಅಮಿನ್‌ ನೇತೃತ್ವದಲ್ಲಿ ಬುಧವಾರ ಜಫ್ತಿ ಮಾಡಲಾಗಿದೆ.

ನಗರದಿಂದ ವಿಜಯಪುರಕ್ಕೆ ಹೊರಟಿದ್ದ ಹೊಸಪೇಟೆ ಡಿಪೋಗೆ ಸೇರಿದ (ಕೆಎ-35 ಎಫ್‌- 334) ಬಸ್‌ ಅನ್ನು ಜಫ್ತಿ ಮಾಡಲಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಳಿಕ ನಿಲ್ದಾಣದಿಂದ ಕೋರ್ಟ್‌ ಆವರಣದ ವರೆಗೆ ಬಸ್‌ ಚಾಲಕ ಚಾಲನೆ ಮಾಡಿಕೊಂಡು ಬಂದರು. ಬಸ್‌ ನ್ಯಾಯಾಲಯದ ಆವರಣದೊಳಗೆ ಬರುವುದನ್ನು ಕಂಡು ವಕೀಲರು ಹಾಗೂ ಕಕ್ಷಿದಾರರು ಕುತೂಹಲಭರಿತರಾಗಿ ನೋಡಿದರು.

ಪ್ರಕರಣದ ಹಿನ್ನೆಲೆ:

ತಾಲೂಕಿನ ಗಾದಿಗನೂರು ಗ್ರಾಮದಲ್ಲಿ 2002ರಲ್ಲಿ ಹೊಸಪೇಟೆ ಡಿಪೋಗೆ ಸೇರಿದ ಬಸ್‌ ಇಬ್ಬರು ಯುವಕರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ ವೆಂಕಟೇಶ್ (22) ಎಂಬ ಯುವಕ ಕೂಡ ಪ್ರಾಣ ಕಳೆದುಕೊಂಡಿದ್ದರು. ಈ ಯುವಕನ ತಾಯಿ ರೇಣುಕಮ್ಮ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯ ಫೆ. 27ರಂದು ₹24 ಲಕ್ಷ ಪರಿಹಾರ ಮೊತ್ತ ಪಾವತಿಸಲು ಸೂಚಿಸಿತ್ತು.

ಈ ಆದೇಶ ಪಾಲನೆಯಲ್ಲಿ ಹೊಸಪೇಟೆ ಬಸ್‌ ಡಿಪೋ ವಿಫಲವಾಗಿದೆ ಎಂದು ಸಂತ್ರಸ್ತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಡಿಪೋಗೆ ಸೇರಿದ ಯಾವುದಾದರೂ ಬಸ್‌ ಜಫ್ತಿ ಮಾಡಲು ನ್ಯಾಯಾಲಯ ಸೂಚಿಸಿತ್ತು. ಕೋರ್ಟ್‌ ಅಮಿನ್‌ ಹಾಗೂ ಯುವಕನ ಸಹೋದರ ಮಲ್ಲಿಕಾರ್ಜುನ ಮತ್ತು ವಕೀಲ ಎಚ್‌. ಗೋರಂಟ್ಲ ಅವರು ಬಸ್‌ ಅನ್ನು ಜಫ್ತಿ ಮಾಡಿ ನ್ಯಾಯಾಲಯಕ್ಕೆ ತಂದಿದ್ದಾರೆ. ಈ ಕುರಿತ ಪ್ರಕರಣ ಸೆ. 13ರಂದು ನಿಗದಿಯಾಗಿದೆ. ಈಗ ಬಸ್‌ ಅನ್ನು ಕೋರ್ಟ್‌ ಆವರಣದಿಂದ ಬಿಡಿಸಿಕೊಳ್ಳಲು ಡಿಪೋ ಅಧಿಕಾರಿಗಳು ಹಣ ಜೋಡಣೆಗೆ ತಡಬಡಾಯಿಸುತ್ತಿದ್ದಾರೆ.

ಹೊಸಪೇಟೆಯ ಕೋರ್ಟ್‌ ಆವರಣದಲ್ಲಿರುವ ಜಫ್ತಿ ಮಾಡಲಾಗಿರುವ ಸಾರಿಗೆ ಬಸ್‌.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ