ಬೆಂಗಳೂರು ಜಲ ಮಂಡಳಿ ಅಧಿಕಾರಿಗಳ ಕಳ್ಳಾಟ...!

KannadaprabhaNewsNetwork |  
Published : Aug 26, 2026, 01:30 AM IST
೨೫ಕೆಎಂಎನ್‌ಡಿ-೧ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಂಗಳೂರು ಜಲಮಂಡಳಿ ಅಧಿಕಾರಿಗಳನ್ನು ರೈತರು, ಕನ್ನಡಪರ ಸಂಘಟನೆ ಮುಖಂಡರು ತರಾಟೆ ತೆಗೆದುಕೊಂಡಿರುವ ದೃಶ್ಯ. | Kannada Prabha

ಸಾರಾಂಶ

ಕೃಷ್ಣರಾಜಸಾಗರ ಜಲಾಶಯದಿಂದ ಬೆಂಗಳೂರು ನಗರಕ್ಕೆ ಆರನೇ ಹಂತದ ಕುಡಿಯುವ ನೀರಿನ ಯೋಜನೆ ಸಂಬಂಧ ರೈತರ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಸಭೆ ನಡೆಸುತ್ತಿದ್ದ ಬೆಂಗಳೂರು ಜಲಮಂಡಳಿ ಅಧಿಕಾರಿಗಳ ಕಳ್ಳಾಟ ಮಂಗಳವಾರ ಬಯಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಜಲಾಶಯದಿಂದ ಬೆಂಗಳೂರು ನಗರಕ್ಕೆ ಆರನೇ ಹಂತದ ಕುಡಿಯುವ ನೀರಿನ ಯೋಜನೆ ಸಂಬಂಧ ರೈತರ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಸಭೆ ನಡೆಸುತ್ತಿದ್ದ ಬೆಂಗಳೂರು ಜಲಮಂಡಳಿ ಅಧಿಕಾರಿಗಳ ಕಳ್ಳಾಟ ಮಂಗಳವಾರ ಬಯಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿ ವರ್ಗದವರು ಅನ್ನದಾತರ ಕಣ್ತಪ್ಪಿಸಿ ಸಭೆ ನಡೆಸುತ್ತಿರುವ ವಿಷಯ ತಿಳಿದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ರೈತ, ಕನ್ನಡಪರ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಒಳನುಗ್ಗಿದರು. ಈ ಸಮಯದಲ್ಲಿ ವಿದ್ಯಾರ್ಥಿಗಳು ಸಭೆಯಿಂದ ಹೊರನಡೆದರು. ಆಗ ರೈತರು ಜಲಮಂಡಳಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು. ರೈತರ ಆಕ್ರೋಶ ಎದುರಿಸಲಾಗದೆ ಜಲಮಂಡಳಿ ಅಧಿಕಾರಿಗಳು ತಬ್ಬಿಬ್ಬಾದರು.

ಸಭೆಯನ್ನು ಬಹಿಷ್ಕರಿಸಿ ಬೆಂಗಳೂರಿನಿಂದ ಆಗಮಿಸಿದ್ದ ಮೂವರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸಭೆ ಬಿಟ್ಟು ಹೋಗಲು ಅಧಿಕಾರಿಗಳ ಯತ್ನಿಸಿದಾಗ ರೈತರು ಅವರನ್ನು ತಡೆದು, ಯಾರು ನೀವು, ನಿಮ್ಮನ್ನು ಇಲ್ಲಿಗೆ ಕಳುಹಿಸಿದವರು ಯಾರು ಎಂಬ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಗಾಬರಿಯಿಂದ ಅಧಿಕಾರಿಗಳು ಉತ್ತರಿಸಲು ತಿಣುಕಾಡಿದರು. ಕೊನೆಗೆ ರೈತರೇ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ವಾನುಮತದ ವಿರೋಧವಿರುವುದಾಗಿ ನಿರ್ಣಯ ಬರೆಸಿ ಅಧಿಕಾರಿಗಳಿಂದ ಸಹಿ ಹಾಕಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಓಡಿಸಿದರು.

ಏನಾಯ್ತು?

ಬೆಂಗಳೂರಿಗೆ ಆರನೇ ಹಂತದ ಕುಡಿಯುವ ನೀರು ಯೋಜನೆ ಜಾರಿಗೆ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಯೋಜನೆಗೆ ಪ್ರಬಲ ವಿರೋಧ ವ್ಯಕ್ತವಾಗಿದ್ದರೂ ಜಾರಿಗೊಳಿಸುವುದಕ್ಕೆ ಸರ್ಕಾರ ಮುಂದಾಗಿತ್ತು. ಕದ್ದು ಮುಚ್ಚಿ ರೈತ ಸಂಘಟನೆಗಳ ಸಭೆ ಕರೆದಂತೆ ಕರೆದು ಅಭಿಪ್ರಾಯ ಸಂಗ್ರಹಿಸಿದಂತೆ ಮಾಡಿ ನಿರ್ಣಯ ಮಾಡಿಕೊಳ್ಳುವ ಆಲೋಚನೆಯಲ್ಲಿತ್ತು.

ಅದಕ್ಕಾಗಿ ಬೆಂಗಳೂರಿನ ಜಲಮಂಡಳಿ ಅಧಿಕಾರಿಗಳನ್ನು ಮಂಡ್ಯಕ್ಕೆ ಕಳುಹಿಸಿ ಅವರ ಅಧ್ಯಕ್ಷತೆಯಲ್ಲಿ ರೈತರು, ಪ್ರಗತಿಪರರ ಸಭೆ ಕರೆದಿದ್ದರು. ಆದರೆ, ಸಭೆಗೆ ರೈತರ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ರಹಸ್ಯವಾಗಿ ಸಭೆ ನಡೆಸುತ್ತಿದ್ದರು.

ಈ ವಿಷಯ ರೈತ ಸಂಘಟನೆಯ ಮುಖಂಡರಿಗೆ ತಿಳಿದು ಅವರು ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿ ಬಂದರು. ಅಧಿಕಾರಿಗಳು ಸಭೆ ನಡೆಸುತ್ತಿದ್ದ ಕೊಠಡಿಯೊಳಗೆ ನುಗ್ಗಿದರು. ಸಭೆಯಲ್ಲಿದ್ದವರನ್ನು ನೋಡಿದ ರೈತ ಮುಖಂಡರಿಗೆ ಗಾಬರಿಯಾಯಿತು. ವಿದ್ಯಾರ್ಥಿಗಳನ್ನು ಕರೆತಂದು ಸಭೆ ನಡೆಸುತ್ತಿರುವ ವಿಷಯ ತಿಳಿದು ರೊಚ್ಚಿಗೆದ್ದರು. ರೈತರನ್ನು ಕಂಡ ವಿದ್ಯಾರ್ಥಿಗಳು ಸಭೆಯಿಂದ ಕಾಲ್ಕಿತ್ತರು.

ನಂತರ ಬೆಂಗಳೂರಿನಿಂದ ಬಂದಿದ್ದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ರೈತರು, ಸಭೆಗೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಗೈರು ಹಾಜರಾಗಿದ್ದರೂ ಸಭೆಯನ್ನು ನಡೆಸುವುದಕ್ಕೆ ನಿಮಗೆ ಅನುಮತಿ ನೀಡಿದವರು ಯಾರು?. ವಿದ್ಯಾರ್ಥಿಗಳನ್ನು ಕರೆತಂದು ಸಭೆ ನಡೆಸುವುದಕ್ಕೆ ನಾಚಿಕೆಯಾಗುವುದಿಲ್ಲವೇ?. ಮಾನ-ಮರ್ಯಾದೆ ಇದೆಯೇನ್ರೀ ನಿಮಗೆ ಎಂದೆಲ್ಲಾ ವಾಗ್ದಾಳಿ ನಡೆಸಲು ಆರಂಭಿಸಿದರು. ಜಿಲ್ಲಾಧಿಕಾರಿ ಇಲ್ಲದೆ ಹೇಗೆ ಸಭೆ ಮಾಡುತ್ತಿದ್ದೀರಿ ಎಂದು ಸಭೆಯಲ್ಲಿ ಹಾಕಿದ್ದ ಬ್ಯಾನರ್ ಕಿತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರ ಪ್ರಶ್ನೆಗೆ ಉತ್ತರಿಸಲಾಗದೆ ಅಧಿಕಾರಿಗಳು ತಡವರಿಸಿದರು.

ನಿರ್ಣಯಕ್ಕೆ ಅಧಿಕಾರಿಗಳಿಂದ ಸಹಿ:

ಬೆಂಗಳೂರು ೬ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ನೀವು ಈ ಯೋಜನೆ ಮಾಡಬಾರದು. ರೈತರಿಂದ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸಂಪೂರ್ಣ ವಿರೋಧ ವ್ಯಕ್ತವಾಗಿದ್ದು, ಯೋಜನೆ ಕೈಬಿಡುವಂತೆ ಒತ್ತಾಯಿಸಿರುವುದಾಗಿ ನಿರ್ಣಯ ಮಾಡುವಂತೆ ರೈತರು ಅಧಿಕಾರಿಗಳ ಬಳಿ ಪಟ್ಟು ಹಿಡಿದು ಸಹಿ ಹಾಕಿಸಿದರು. ನಂತರ ರೈತರ ಆಕ್ರೋಶಕ್ಕೆ ಹೆದರಿ ತಬ್ಬಿಬ್ಬಾದ ಅಧಿಕಾರಿಗಳು ಸಭೆಯಿಂದ ಓಡಿಹೋಗುವುದಕ್ಕೆ ಮುಂದಾದರು. ಆಗ ರೈತರು ೬ನೇ ಹಂತದ ಕುಡಿಯುವ ನೀರು ಯೋಜನೆ ಅಧಿಕಾರಿಗಳಿಗೆ ಗೋ ಬ್ಯಾಕ್ ಘೋಷಣೆ ಕೂಗಿದರು.

ಕೆಲವು ದಿನಗಳ ಹಿಂದೆ ಕೆಆರ್‌ಎಸ್‌ನಲ್ಲಿ ಆರನೇ ಹಂತದ ಕುಡಿಯುವ ನೀರು ಯೋಜನೆ ಜಾರಿಗೆ ಮಣ್ಣು ಪರೀಕ್ಷೆಗೆ ಆಗಮಿಸಿದ್ದ ಅಧಿಕಾರಿಗಳನ್ನು ತಡೆದು ಹೊರ ಕಳುಹಿಸಿದ್ದರು.

ಈ ಸಮಯದಲ್ಲಿ ರೈತ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಕೆ.ಬೋರಯ್ಯ, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಕನ್ನಡಪರ ಸಂಘಟನೆಗಳ ಮುಖಂಡರಾದ ಹೆಚ್.ಸಿ.ಮಂಜುನಾಥ್, ಎಂ.ಬಿ.ನಾಗಣ್ಣಗೌಡ, ಹೆಚ್.ಡಿ.ಜಯರಾಂ, ದಸಂಸ ಮುಖಂಡ ಎಂ.ವಿ.ಕೃಷ್ಣ ಹಾಗೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು.ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಸಾರ್ವಜನಿಕ ಅಹವಾಲಿನ ಸಭೆ ನಡೆಸುವುದಾಗಿ ಹೇಳಿ ಆ.೧೯ರಂದು ಪ್ರಕಟಣೆ ಹೊರಡಿಸಿ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿರುವುದನ್ನು ಈಗ ತೋರಿಸುತ್ತಿದ್ದಾರೆ. ಸಭೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಸಾರ್ವಜನಿಕ ಅಭಿಪ್ರಾಯ ಸಭೆ ನಡೆಯುವ ವಿಧಿ-ವಿಧಾನದನ್ವಯ ಸಭೆ ನಡೆಸಿಲ್ಲ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ಎಲ್ಲಾ ಸಂಘಟನೆಗಳು ಸಭೆಯನ್ನು ಬಹಿಷ್ಕರಿಸಿದ್ದೇವೆ. ೭೫೦೦ ಕೋಟಿ ರು. ವೆಚ್ಚದ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದ್ದೇವೆ. ವಸ್ತುಸ್ಥಿತಿಯನ್ನೂ ವಿವರಿಸಿದ್ದೇವೆ. ಕೆಆರ್‌ಎಸ್ ಅಣೆಕಟ್ಟೆಯ ನೀರು ಕೃಷಿ ಉದ್ದೇಶಕ್ಕೆ ಸೀಮಿತಗೊಳಿಸಬೇಕು. ಕೃಷಿಗೆ ಮಾರಕವಾಗುವ ಯೋಜನೆಯನ್ನು ಕೈಬಿಡಲೇಬೇಕು.

- ಸುನಂದಾ ಜಯರಾಂ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ಜಲಾಶಯದ ಡೆಡ್‌ಸ್ಟೋರೇಜ್ ನೀರಿಗೇ ಕೈ ಹಾಕಿರುವ ಯೋಜನೆ ಇದು. ೭೫೦೦ ಕೋಟಿ ರು. ಯೋಜನೆ ಬೆಂಗಳೂರಿಗೆ ಕುಡಿಯುವ ನೀರು ಕೊಡುವುದಕ್ಕಿಂತ ಕಮಿಷನ್ ಮೇಲೆ ಕಣ್ಣು ಬಿದ್ದಿದೆ. ಐದನೇ ಹಂತದ ಯೋಜನೆಯವರೆಗೆ ಬೆಂಗಳೂರಿಗೆ ನೀರು ಪೂರೈಸಲಾಗುತ್ತಿದೆ. ಆರನೇ ಹಂತ ಕೈಬಿಟ್ಟು ಕುಡಿಯುವ ನೀರಿಗೆ ಪರ್ಯಾಯ ಜಲಮೂಲ ಹುಡುಕಿಕೊಳ್ಳಲಿ. ಆರನೇ ಹಂತದ ಈ ಯೋಜನೆ ಜಾರಿಯಾದರೆ ಜಿಲ್ಲೆಯ ರೈತರು ಒಂದು ಬೆಳೆಯನ್ನೂ ಬೆಳೆಯಲಾಗುವುದಿಲ್ಲ. ಕುಡಿಯುವ ನೀರನ್ನು ಪೂರೈಸುವ ಟ್ಯಾಂಕಾಗಿ ಕೆಆರ್‌ಎಸ್ ಪರಿವರ್ತನೆಯಾಗಲಿದೆ. ಇದರಿಂದ ಕೃಷಿ ಬದುಕು ಸಂಪೂರ್ಣ ನಾಶವಾಗಲಿದೆ. ಇದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ.

- ಕೆ.ಎಸ್.ನಂಜುಂಡೇಗೌಡ, ರೈತ ಮುಖಂಡ

ಮುಖ್ಯಾಂಶ

- ರೈತರ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಸಭೆ

- ಸಭೆಯೊಳಗೆ ರೈತರು ನುಗ್ಗುತ್ತಿದ್ದಂತೆ ಹೊರನಡೆದ ವಿದ್ಯಾರ್ಥಿಗಳು

- ಅಧಿಕಾರಿಗಳಿಗೆ ತೀವ್ರ ತರಾಟೆ; ತುಟಿಬಿಚ್ಚದೆ ಓಡಿಹೋದ ಅಧಿಕಾರಿ ವರ್ಗ

- ಆರನೇ ಹಂತದ ಕುಡಿವ ನೀರಿನ ಯೋಜನೆ ಸಂಬಂಧ ಸಭೆ: ಡೀಸಿ ಗೈರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷ ಸಂಘಟನೆಗೆ ಭಾರತ್ ಜೋಡೋ ಸಂಘ ಸಹಕಾರಿ: ಪಿ.ರವಿಕುಮಾರ್
ಲಂಚಕ್ಕೆ ಬೇಡಿಕೆ: ವಿಎ ಲೋಕಾಯುಕ್ತ ಬಲೆಗೆ