ಆರೆಸ್ಸೆಸ್‌ನಿಂದ ದೇಶ ಸಂಘಟಿಸುವ ಕಾರ್ಯ ನಿರಂತರ

KannadaprabhaNewsNetwork |  
Published : Nov 19, 2024, 12:47 AM IST
ಪೊಟೋ ನ.17ಎಂಡಿಎಲ್ 1ಎ, 1ಬಿ, 1ಸಿ, 1ಡಿ. ಮುಧೋಳದಲ್ಲಿ ಭಾನುವಾರ ಸಂಜೆ ಆರ್.ಎಸ್.ಎಸ್ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. | Kannada Prabha

ಸಾರಾಂಶ

ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಪ್ರಜ್ಞೆಗಳಂತಹ ಹಲವು ವಿಚಾರ ನಾವೆಲ್ಲರೂ ಅಳವಡಿಸಿಕೊಂಡು ದೇಶ ಮುನ್ನಡೆಸಬೇಕಾಗಿದೆ. ಇಡೀ ಜಗತ್ತು ಭಾರತದೆಡೆ ಅಶಾಭಾವದಿಂದ ನೋಡುತ್ತಿದೆ

ಕನ್ನಡಪ್ರಭ ವಾರ್ತೆ ಮುಧೋಳ

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಳೆದ 99 ವರ್ಷಗಳಿಂದ ಇಡೀ ದೇಶವನ್ನು ಸಂಘಟಿಸುವ ಹಾಗೂ ದೇಶಭಕ್ತಿ ಉದ್ದೀಪನಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಮುಖ್ಯವಕ್ತಾರರಾಗಿ ಆಗಮಿಸಿದ್ದ ಧಾಮೋದರಜೀ ಹೇಳಿದರು.

ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಧೋಳ ಘಟಕದಿಂದ ಭಾನುವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಆರ್‌ಎಸ್‍ಎಸ್ ಗಣವೇಷಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಈ ವೇಳೆ ಭಾಗವಹಿಸಿ ಮಾತನಾಡಿದ ಅವರು, ಸಂಘ ಸ್ಥಾಪನೆಯಾಗಿ 100 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಕುಟುಂಬ ಪದ್ಧತಿ ಎಲ್ಲರೊಂದಿಗೆ ಸಾಮರಸ್ಯದಿಂದ ಬಾಳುವುದು. ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಪ್ರಜ್ಞೆಗಳಂತಹ ಹಲವು ವಿಚಾರ ನಾವೆಲ್ಲರೂ ಅಳವಡಿಸಿಕೊಂಡು ದೇಶ ಮುನ್ನಡೆಸಬೇಕಾಗಿದೆ. ಇಡೀ ಜಗತ್ತು ಭಾರತದೆಡೆ ಅಶಾಭಾವದಿಂದ ನೋಡುತ್ತಿದೆ. ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಭಾರತೀಯ ಜೀವನ ಪದ್ಧತಿಯಲ್ಲಿ ಪರಿಹಾರವಿದೆ ಎಂದರು.

ನಿವೃತ್ತ ಸರ್ಕಾರಿ ನೌಕರ ಡಾ.ಅಶೋಕ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಭಾರತ ಶಾಂತಿ ಹಾಗೂ ಸೌಹಾರ್ದತೆಯಿಂದ ಕೂಡಿದ ದೇಶವಾಗಿದೆ. ಸಂಘಟನೆಯಲ್ಲಿ ಶಕ್ತಿ ಇದೆ. ಯುವಕರು ಈ ಶಕ್ತಿಯನ್ನು ದೇಶದ ರಕ್ಷಣೆಗೆ ಬಳಸಿಕೊಳ್ಳಿರಿ ಎಂದರು.

ಸಂಘದ ಸಾಂಪ್ರದಾಯಿಕ ಉಡುಗೆ, ಟೊಪ್ಪಿ ಧರಿಸಿದ ಸಾವಿರಾರು ಸ್ವಯಂ ಸೇವಕರು ಕೈಯಲ್ಲಿ ಲಾಠಿ ಹಿಡಿದು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಚಿಕ್ಕಮಕ್ಕಳು ಸಹ ಗಣವೇಷದಲ್ಲಿ ಭಾಗವಹಿಸಿ ಹಿರಿಯ ಸ್ವಯಂ ಸೇವಕರೊಂದಿಗೆ ಉತ್ಸಾಹದ ಹೆಜ್ಜೆ ಹಾಕಿದರು.

ನಗರದ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಪಥಸಂಚಲನ ಮಾರ್ಗದಲ್ಲಿ ಪುಷ್ಟವೃಷ್ಟಿ ಮಾಡಿ ಸೇವಕರಿಗೆ ಅಭಿನಂದಿಸಿದರು. ಮಾರ್ಗಮಧ್ಯೆ ದೇಶಾಭಿಮಾನಿಗಳ ಛದ್ಮವೇಷದಲ್ಲಿ ಚಿಣ್ಣರು ಕಂಗೊಳಿಸಿ ಪಥಸಂಚಲನೆಕ್ಕೆ ವಿಶೇಷ ಮೆರಗು ತಂದರು. ಅಲಂಕೃತ ರಥದಲ್ಲಿ ಸಂಸ್ಥಾಪಕ ಡಾ.ಕೇಶವ ಹೆಡಗೆವಾರ್ ಹಾಗೂ ಎಂ.ಎಸ್.ಗೊಳವಲ್ಕರ ಭಾವಚಿತ್ರ ಇರಿಸಲಾಗಿತ್ತು. ಪಥಸಂಚಲನ ಸಾಗುವ ದಾರಿಯುದ್ದಕ್ಕೂ ದೇಶಭಕ್ತ ಮಹಿಳೆಯರು ಚಿತ್ತಾರದ ರಂಗೋಲಿ ಬಿಡಿಸಿದ್ದರು. ಯುವಕರು ತಳಿರು ತೋರಣ ಕಟ್ಟಿ ಅಲಂಕರಿಸಿದ್ದರು. ಚಿಕ್ಕ ಚಿಕ್ಕ ಮಕ್ಕಳು ದೇಶಭಕ್ತ ಮಹಾಪುರುಷರ ವೇಷಭೂಷಣ ಧರಿಸಿ ಜನಮನ ಸೆಳೆದರು.

ಗಾಂಧೀ ಸರ್ಕಲ್, ಕಲ್ಮೇಶ್ವರ ಸರ್ಕಲ್, ಜಡಗಾಬಾಲಾ ಸರ್ಕಲ್, ಶಿವಾಜಿ ಸರ್ಕಲ್ ಮಾರ್ಗದಲ್ಲಿ ಬಣ್ಣಬಣ್ಣದ ರಂಗೋಲಿ ಗಣವೇಷಧಾರಿಗಳಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು. ನಂತರ ಹೇಮರಡ್ಡಿ ಮಲ್ಲಮ್ಮ ಆವರಣಕ್ಕೆ ಪಥಸಂಚಲನ ತಲುಪಿ ಸಂಪನ್ನಗೊಂಡಿತು. ಪ್ರಕಾಶ ರಾಮತೀರ್ಥ ಸ್ವಾಗತಿಸಿ, ಅತಿಥಿ ಪರಿಚಯಿಸಿದರು, ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು