ಸೋಮವಾರಪೇಟೆ: ಅಖಂಡ ಭಾರತ ವಿಭಜನೆಯಾದ ಬಳಿಕ ಮತ್ತೆ ದೇಶವನ್ನು ಒಂದಾಗಿಸುವ ಕಾರ್ಯವನ್ನು ಆರ್ಎಸ್ಎಸ್ ಮಾಡುತ್ತಿದೆ, ಸಮಸ್ತ ಹಿಂದೂಗಳನ್ನು ಒಂದು ಗೂಡಿಸುವ ಕೆಲಸಕ್ಕೆ ಆರ್ ಎಸ್ ಎಸ್ ಮುಂದಾಗಿರುವುದು ಶ್ಲಾಘನೀಯ ಎಂದು ಬಸವ ಪಟ್ಟಣದ ತೊಂಟದಾರ್ಯಾ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮಿಜಿ ಹೇಳಿದರು.ಹಿಂದೂ ಸಂಗಮ ಆಯೋಜನಾ ಸಮಿತಿಯ ತೋಳೂರುಶೆಟ್ಟಳ್ಳಿ ಮಂಡಲ ವತಿಯಿಂದ ದೊಡ್ಡ ತೋಳೂರು ಗ್ರಾಮದ ಆಟದ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು
ಆರ್ಎಸ್ಎಸ್ ಮಾಡುತ್ತಿರುವ ಸೇವೆಯನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಹಿಂದೂ ಧರ್ಮ ಉಳಿದರೆ ಮಾತ್ರ ನಾವು ಬದುಕಲು ಸಾಧ್ಯ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್, ಆರ್ಎಸ್ಎಸ್ ಹಾಗೂ ಭಜರಂಗ ದಳ ನಿರಂತರವಾಗಿ ಧರ್ಮ ಜಾಗೃತಿಗೆ ಕಾರ್ಯನಿರ್ವಹಿಸುತ್ತಿವೆ. ಸಮಾಜದಲ್ಲಿ ಶಿಸ್ತುಬದ್ಧವಾಗಿ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಎಂದರೆ ಅದು ಆರ್ಎಸ್ಎಸ್ ಎಂದು ಅಭಿಪ್ರಾಯ ಪಟ್ಟರು.
ದಿಕ್ಸೂಚಿ ಭಾಷಣ ಮಾಡಿದ ಆರ್.ಎಸ್.ಎಸ್ ಮಂಗಳೂರು ವಿಭಾಗ ಸಹ ಸೇವಾ ಪ್ರಮುಖ್ ಭರತ್ ರಾಜ್ ಅವರು, ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಹಿಂದೂ ಸಂಗಮ ಯೋಜನಾ ಸಮಿತಿಗಳು ಪ್ರತಿ ಮಂಡಲಗಳಲ್ಲೂ ಹಿಂದೂ ಸಂಘ ಕಾರ್ಯಕ್ರಮ ನಡೆಸುತ್ತಿದೆ. ನಮ್ಮ ರಾಷ್ಟ್ರ, ನಮ್ಮ ಸಂಸ್ಕೃತಿ, ನಮ್ಮ ಧರ್ಮದ ರಕ್ಷಣೆಯಲ್ಲಿ ನಮ್ಮ ಪಾತ್ರಗಳು ಏನು ಎಂಬುದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಂತ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.ಆಂಗ್ಲ ಭಾಷೆ ಬಿಟ್ಟು ನಮ್ಮ ಸ್ಥಳೀಯ ಭಾಷೆಯತ್ತ ಗಮನ ಕೊಡಬೇಕಾಗಿದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ಹುಟ್ಟುಹಬ್ಬ ಆಚರಣೆ ಮಾಡುವುದನ್ನು ಬಿಟ್ಟು, ಸನಾತನ ಧರ್ಮದಂತೆ ಆಚರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವದೇಶಿ ಜೀವನಶೈಲಿ ಹಾಗೂ ಸಂಸ್ಕೃತಿಗಳನ್ನು ಅಳವಡಿಸಿಕೊಂಡು, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಹರಪಳ್ಳಿ ರವೀಂದ್ರ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಸಂಗಮದ ಆಯೋಜನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಸನತ್ ಕರ್ಕಳ್ಳಿ, ಹಿಂದೂ ಸಂಗಮ ಆಯೋಜನ ಸಮಿತಿಯ ಮಂಡಲ ಅಧ್ಯಕ್ಷ ವಣಗೂರುಕೊಪ್ಪ ಉಮೇಶ್ ಇದ್ದರು.ತೋಳೂರುಶೆಟ್ಟಳ್ಳಿ ಜಂಕ್ಷನ್ನಿಂದ ವಾಧ್ಯ ಹಾಗೂ ನಾಸಿಕ್ ಬ್ಯಾಂಡ್ ನೊಂದಿಗೆ ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದಅಲಂಕೃತ ವಾಹನದಲ್ಲಿ ಶೋಭಾಯಾತ್ರೆ ನಡೆಯಿತು. ಮಹಿಳೆಯರು ಕಳಸದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.