ಕನ್ನಡಪ್ರಭ ವಾರ್ತೆ ಚಾಮರಾಜನಗರ ನರೇಂದ್ರ ಮೋದಿ ಅವರು ಮತ್ತೇ ಪ್ರಧಾನಿಯಾಗಬೇಕೆಂದು ವಿಶ್ವವೇ ಎದುರು ನೋಡುತ್ತಿದ್ದು, ಈ ದೊಡ್ಡ ಸಮರದಲ್ಲಿ ಬಿಜೆಪಿ ೪೦೦ರ ಗಡಿ ದಾಟಲು ರಾಜ್ಯದ ೨೮ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ, ವಿಧಾನ ಪರಿಷತ್ ಸದಸ್ಯ ಮಾಜಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ತಿಳಿಸಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸಾಧನೆ, ವರ್ಚಸ್ಸು ಹಾಗೂ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ರಾಷ್ಟ್ರದಲ್ಲಿ ನಡ್ಡಾ ಹಾಗೂ ರಾಜ್ಯದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಚಾ.ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ೮ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಬೂತ್ಗಳಲ್ಲಿ ಹೆಚ್ಚಿನ ಮತಗಳಿಸಲು ತಳ ಮಟ್ಟದಿಂದ ಪಕ್ಷವನ್ನು ಶ್ರಮಿಸೋಣ ಎಂದರು.ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದ ಸಹ ಪ್ರಭಾರಿ ಎಸ್. ವಿ. ಫಣೀಶ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಡಲು ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಬೇಕು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಹೆಸರಿನಲ್ಲಿ ಓಟ್ ಬ್ಯಾಂಕ್ ಆಗಿದ್ದು, ಚಾ.ನಗರ ಲೋಕಸಭಾ ಕ್ಷೇತ್ರದಿಂದ ಯಾರು ಅಭ್ಯರ್ಥಿ ಎಂಬುವುದು ನಮಗೆ ಬೇಕಿಲ್ಲ. ಕಮಲ ಮತ್ತು ಮೋದಿ ಅವರನ್ನು ಗೆಲ್ಲಿಸಲು ಮತಯಾಚನೆ ಮಾಡಬೇಕು. ಕಳೆದ ಬಾರಿ ಹಿರಿಯರಾದ ಸಂಸದ ವಿ. ಶ್ರೀನಿವಾಸಪ್ರಸಾದ್ ಸ್ಪರ್ಧೆ ಮಾಡಿದ್ದರು. ಹೀಗಾಗಿ ಬಿಜೆಪಿ ಗೆಲ್ಲಲು ಹೆಚ್ಚಿನ ಶ್ರಮವಾಗಲಿಲ್ಲ. ಈ ಬಾರಿ ಚುನಾವಣಾ ಕಣಕ್ಕೆ ಹೊಸ ಮುಖವನ್ನು ಕಣಕ್ಕಿಳಿಸಬೇಕಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಇನ್ನು ಮೂರು ತಿಂಗಳ ಕಾಲ ಪಕ್ಷದ ಸಂಘಟನೆ ಹಾಗೂ ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಎನ್ನದೇ ದುಡಿಯಬೇಕು ಎಂದರು.