ತರೀಕೆರೆ ನಿಲ್ದಾಣಕ್ಕೆ ರಾತ್ರಿ ಬಸ್ಸುಗಳು ಬಾರದೇ ತೊಂದರೆ

KannadaprabhaNewsNetwork | Published : May 1, 2024 1:17 AM

ಸಾರಾಂಶ

ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಹಾದುಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ನಿಗದಿತ ನಿಲ್ದಾಣದೊಳಗೆ ಬಂದು ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ. ರಮೇಶ್, ಮಾಜಿ ಸದಸ್ಯ ಕೃಷ್ಣ, ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಒತ್ತಾಯಿಸಿದ್ದಾರೆ.

ಎಲ್ಲ ಬಸ್ಸುಗಳು ನಿಲ್ದಾಣದೊಳಗೆ ಬಂದು ನಿಲುಗಡೆ ಮಾಡುವಂತೆ ಕ್ರಮಕ್ಕೆ ಒತ್ತಾಯ

ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಂತು ಬಸ್ಸುಗಳು ಸಂಚರಿಸುವುದರಿಂದ ತೀವ್ರ ತೊಂದರೆ

ಕನ್ನಡಪ್ರಭವಾರ್ತೆ ತರೀಕೆರೆ

ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಹಾದುಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ನಿಗದಿತ ನಿಲ್ದಾಣದೊಳಗೆ ಬಂದು ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ. ರಮೇಶ್, ಮಾಜಿ ಸದಸ್ಯ ಕೃಷ್ಣ, ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಒತ್ತಾಯಿಸಿದ್ದಾರೆ.

ಇಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಇದ್ದೂ ಇಲ್ಲದಂತಾಗಿದೆ. ಪಟ್ಟಣದ ಸಾಲುಮರದಮ್ಮ ದೇವಸ್ಥಾನ ಎದುರು ಇರುವ ಸರ್ಕಾರಿ ಬಸ್ ನಿಲ್ದಾಣಕ್ಕೆ ರಾತ್ರಿ 8ರ ನಂತರ ಯಾವುದೇ ಮಾರ್ಗದ ಬಸ್ಸುಗಳು ಬಾರದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಸ್ಸುಗಳನ್ನು ನಿಲ್ದಾಣದಿಂದ ದೂರ ನಿಲ್ಲಿಸುವುದರಿಂದ ವೃದ್ದರು, ಮಹಿಳೆಯರು, ಚಿಕ್ಕ ಮಕ್ಕಳು ಸೇರಿದಂತೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತದೆ. ಪ್ರಯಾಣಿಕರು ಲಗೇಜ್ ಹೊತ್ತು ಬಸ್ಸು ನಿಲ್ಲಿಸಿದ ಸ್ಥಳಕ್ಕೆ ಓಡಬೇಕಾಗುತ್ತದೆ. ಹಾಗೂ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹೆಚ್ಚಿನ ವಾಹನ ಸಂಚಾರ ಇರುತ್ತದೆ, ಇಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಅನಾಹುತ ಆಗುವ ಆತಂಕವೂ ಇದೆ. ಬಸ್‌ ನಿಲ್ದಾಣದಲ್ಲಿ ರಾತ್ರಿ ಪಾಳೆ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇದರಿಂದ ಎಲ್ಲ ಮಾರ್ಗದ ಸರ್ಕಾರಿ ಬಸ್ಸುಗಳು ನಿಲ್ದಾಣದೊಳಗೆ ಪ್ರವೇಶಿಸಿ ನೋಂದಣಿಯಾಗುತ್ತವೆ, ಇದರಿಂದ ಬಸ್ಸುಗಳು ಬಂದು ಹೋಗುವ ಸಮಯ ಕೂಡ ಸಾರ್ವಜನಿರಿಗೆ ದೊರೆಯುತ್ತದೆ ಎಂದಿದ್ದಾರೆ.ತರೀಕೆರೆ ಮೂಲಕ ಬಸ್ಸುಗಳು ಬೆಂಗಳೂರು, ಅರಸೀಕೆರೆ, ಮೈಸೂರು, ಧರ್ಮಸ್ಥಳ, ಮಂಗಳೂರು, ಅಜ್ಜಂಪುರ, ಲಿಂಗದಹಳ್ಳಿ ಮಾರ್ಗವಾಗಿ ಚಿಕ್ಕಮಗಳೂರು ಕಡೆಗೆ ಹೋಗುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಅಲ್ಲದೆ ಪ್ರಯಾಣಿಕರು ವಿಶ್ರಾಂತಿ, ಸುರಕ್ಷತೆ ದೃಷ್ಟಿಯಿಂದಲೂ ಅನುಕೂಲವಾಗುತ್ತದೆ. ಆದ್ದರಿಂದ ಬಸ್ಸುಗಳು ನಿಲ್ದಾಣದ ಒಳಗೆ ಬಂದು ನಿಲ್ಲುವಂತೆ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಕಾರ್ಯಕ್ರಮದಡಿಯಲ್ಲಿ ಮಹಿಳೆಯರಿಗೆ ಬಸ್ಸುಗಲ್ಲಿ ಉಚಿತ ಪ್ರಯಾಣ ಸೌಲಭ್ಯವಿದೆ. ಹೀಗಾಗಿ ನಿಲ್ದಾಣದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸಿಗೆ ಕಾಯ್ದು ಕುಳಿತಿರುತ್ತಾರೆ. ಆದರೆ ಬಸ್ಸುಗಳು ನಿಲ್ದಾಣದೊಳಗೆ ಬಾರದೆ ಇವರಿಗಂತೂ ತೀವ್ರ ತೊಂದರೆಯಾಗಿದೆ ಎಂದು ಅವರು ವಿವರಿಸಿದ್ದಾರೆ. ಕೂಡಲೇ ಅಧಿಕಾರಿಗಳು ಬಸ್ಸು ನಿಲ್ದಾಣದೊಳಗೆ ಬಸ್ಸುಗಳು ಬಂದು ಹೋಗುವಂತೆ ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

------------------

30ಕೆಟಿಆರ್.ಕೆ.4ಃ

ತರೀಕೆರೆ ರಾಷ್ಟ್ರೀಯ ಹೆದ್ದಾರಿ 206 ನಲ್ಲಿರುವ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ.

Share this article