ಕನ್ನಡಪ್ರಭ ವಾರ್ತೆ ಬೇಲೂರು ಮಾಜಿ ಶಾಸಕ ದಿ. ರುದ್ರೇಶ್ಗೌಡರ ವಿರುದ್ಧ ಮಾಜಿ ಸಚಿವ ಶಿವರಾಂ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ರುದ್ರೇಶಗೌಡರ ಸಹೋದರ ವೈ.ಎನ್. ಕೃಷ್ಣೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕ ದಿವಂಗತ ರುದ್ರೇಶ್ಗೌಡ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಡವರಿಗೆ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಸಿಲ್ಲ. ಅಧಿಕಾರಿಗಳ ವರದಿ ಹಾಗೂ ಪರಿಶೀಲನೆಯ ಆಧಾರದ ಮೇಲೆಯೇ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಲಾಗುತ್ತಿತ್ತು. ಈ ವಿಷಯ ಗೊತ್ತಿದ್ದರೂ ನೂತನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರು ಬರ ಅಧ್ಯಯನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶಿವರಾಂ ಅವರು, ದಿ. ರುದ್ರೇಶ್ಗೌಡ ಅವರು ಶಾಸಕರಾಗಿ ಬಗರ್ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದಾಗ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ನೂತನ ಸಚಿವರಿಗೆ ಸುಳ್ಳು ಮಾಹಿತಿ ನೀಡಿರುವುದು ಖಂಡನಾರ್ಹವಾಗಿದೆ ಎಂದು ಕಿಡಿಕಾರಿದರು.ರುದ್ರೇಶ್ ಗೌಡರ ಅವಧಿಯಲ್ಲಿ ಜಮೀನು ಕೋರಿ ಬಂದ ಅರ್ಜಿದಾರರ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದರು. ಅರ್ಜಿದಾರರ ಅರ್ಹತೆ, ದಾಖಲೆಗಳು ಹಾಗೂ ಜಮೀನಿನ ವಿವರಗಳನ್ನು ಪರಿಶೀಲಿಸಿ ಅಧಿಕಾರಿಗಳು ವರದಿ ನೀಡಿದ ನಂತರವೇ ಮುಂದಿನ ಪ್ರಕ್ರಿಯೆ ನಡೆಯುತ್ತಿತ್ತು. ಸರ್ಕಾರದ ನಿಯಮಾನುಸಾರ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದರು. ಅಧಿಕಾರಿಗಳ ವರದಿ ಹಾಗೂ ಪರಿಶೀಲನೆಯ ಆಧಾರದ ಮೇಲೆಯೇ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತಿತ್ತು. ಹೀಗಾಗಿ ದಿ. ಶಾಸಕ ರುದ್ರೇಶ್ ಗೌಡರ ಮೇಲೆ ಮಾಜಿ ಸಚಿವ ಬಿ. ಶಿವರಾಂ ಏಕಾಏಕಿ ಆರೋಪ ಮಾಡುವುದು ಸರಿ ಇಲ್ಲ. ತಮಗೆ ಬೇಕಾದವರಿಗೆ ಜಮೀನು ಮಂಜೂರು ಮಾಡಿಸಲು ಸಾಧ್ಯವಿಲ್ಲ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.ಅಧಿಕಾರಿಗಳ ಪರಿಶೀಲನೆ ಮತ್ತು ವರದಿಯ ನಂತರ ಸಂಬಂಧಪಟ್ಟ ಅಧ್ಯಕ್ಷರು ಶಾಸಕರು ಅಗತ್ಯ ದಾಖಲೆಗಳಿಗೆ ಸಹಿ ಮಾಡುತ್ತಿದ್ದರು. ಈ ಪ್ರಕ್ರಿಯೆ ನಿಯಮಾನುಸಾರವೇ ನಡೆದಿರುವುದರಿಂದ ರುದ್ರೇಶ್ಗೌಡ ಅವರ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಮಾಜಿ ಸಚಿವ ಬಿ ಶಿವರಾಂ ಅವರು ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದು ಕಾಂಗ್ರೆಸ್ನ ನಾಯಕರು ಮತ್ತು ಮಾಜಿ ಸಚಿವರಾಗಿದ್ದು ಸ್ವಪಕ್ಷದ ನಾಯಕರ ವಿರುದ್ಧವೇ ಹೆಚ್ಚು ಆರೋಪ ಮಾಡುತ್ತಿರುವುದು ವಿಪರ್ಯಾಸ ಎಂದರು.
ದಿ . ರುದ್ರೇಶ್ಗೌಡ ಕುಟುಂಬಕ್ಕೆ ನೋವು ತರುವಂತಹ ಹೇಳಿಕೆಗಳನ್ನು ನೀಡಬಾರದು. ಮಾಜಿ ಶಾಸಕ ದಿವಂಗತ ರುದ್ರೇಶ್ಗೌಡ ಅವರ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಅವರ ಕುಟುಂಬಕ್ಕೆ ನೋವುಂಟು ಮಾಡಿವೆ ಸರ್ಕಾರಿ ಆಸ್ಪತ್ರೆ ಕಾಲೇಜು ಸೇರಿದಂತೆ ವಿವಿಧ ದಾನ - ಧರ್ಮಗಳಲ್ಲಿ ಕುಟುಂಬ ಹಲವು ದಶಕಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದು ಇಂತವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು. ರುದ್ರೇಶ್ಗೌಡರು ಬದುಕಿದ್ದಾಗ ಬೇಲೂರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ವೈಯಕ್ತಿಕ ಹಾಗೂ ರಾಜಕೀಯ ಕಾರಣಗಳಿಂದ ದಿವಂಗತ ರುದ್ರೇಶ್ಗೌಡ ಅವರ ಹೆಸರನ್ನು ಎಳೆದು ತರುವುದು ಅವರ ಕುಟುಂಬದ ಸದಸ್ಯರಿಗೆ ನೋವುಂಟು ಮಾಡಿದೆ. ರಾಜಕೀಯ ಆರೋಪ-ಪ್ರತ್ಯಾರೋಪ ಮಾಡುವ ಬದಲು, ಅಧಿಕಾರಿಗಳು ಸಲ್ಲಿಸಿರುವ ದಾಖಲೆಗಳು ಮತ್ತು ವರದಿಗಳನ್ನು ಪರಿಶೀಲಿಸಿ ನಿಜಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಂಗಾಧರ್ ಹಳೇಬೀಡು, ಸತ್ಯನಾರಾಯಣ, ಇನ್ನಿತರರು ಹಾಜರಿದ್ದರು.