ಜಯಂತಿ ಆಚರಣೆಗೆ ಅನುದಾನ ಇಲ್ಲ ಎಂದರೆ ನಾವು ದೇಣಿಗೆ ನೀಡುತ್ತೇವೆ

KannadaprabhaNewsNetwork | Published : Mar 30, 2025 3:01 AM

ಸಾರಾಂಶ

ರಾಷ್ಟ್ರನಾಯಕರ ಜಯಂತಿಗೆ ಅನುದಾನವಿಲ್ಲ ಬಂದಿಲ್ಲ ಎಂದು ಹೇಳಬೇಡಿ, ನಾವು ದೇಣಿಗೆ ನೀಡುತ್ತೇವೆ, ಅಂಬೇಡ್ಕರ್ ಹಾಗೂ ಜಗಜೀವನರಾಮ್ ಅವರ ಜಯಂತಿಯನ್ನು ಸೈದ್ಧಾಂತಿಕವಾಗಿ, ವೈಜ್ಞಾನಿಕವಾಗಿ ಹಾಗೂ ಬೌದ್ಧಿಕವಾಗಿ ಕಾರ್ಯಕ್ರಮ ನಡೆಸಬೇಕು ಎಂದು ದಲಿತ ಮುಖಂಡರು ಒಕ್ಕೊರಲನಿಂದ ಅಧಿಕಾರಿಗಳಿಗೆ ಆಗ್ರಹಿಸಿದರು.

ಗಜೇಂದ್ರಗಡ: ರಾಷ್ಟ್ರನಾಯಕರ ಜಯಂತಿಗೆ ಅನುದಾನವಿಲ್ಲ ಬಂದಿಲ್ಲ ಎಂದು ಹೇಳಬೇಡಿ, ನಾವು ದೇಣಿಗೆ ನೀಡುತ್ತೇವೆ, ಅಂಬೇಡ್ಕರ್ ಹಾಗೂ ಜಗಜೀವನರಾಮ್ ಅವರ ಜಯಂತಿಯನ್ನು ಸೈದ್ಧಾಂತಿಕವಾಗಿ, ವೈಜ್ಞಾನಿಕವಾಗಿ ಹಾಗೂ ಬೌದ್ಧಿಕವಾಗಿ ಕಾರ್ಯಕ್ರಮ ನಡೆಸಬೇಕು ಎಂದು ದಲಿತ ಮುಖಂಡರು ಒಕ್ಕೊರಲನಿಂದ ಅಧಿಕಾರಿಗಳಿಗೆ ಆಗ್ರಹಿಸಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಶನಿವಾರ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಡಾ. ಬಾಬು ಜಗಜೀವನರಾಮ್ ಅವರ ೧೧೮ನೇ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಹಿನ್ನೆಲೆ ನಡೆದ ಪೂರ್ವಭಾವಿ ಸಭೆಯಲ್ಲಿ ಕೇಳಿ ಬಂದ ಆಗ್ರಹ ಹಾಗೂ ಅಸಮಾಧಾನದ ಮಾತುಗಳಿವು.

ರಾಷ್ಟ್ರನಾಯಕರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪಟ್ಟಣ ಸೇರಿ ಸುತ್ತಲಿನ ಗ್ರಾಮದ ಗಣ್ಯರು ಹಾಗೂ ಮುಖಂಡರಿಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಲಹೆ, ಸೂಚನೆಗಳನ್ನು ನೀಡಲು ರಾಷ್ಟ್ರನಾಯಕರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ತಿಳಿಸಿದಾಗ ಪಟ್ಟಣದಲ್ಲಿ ಕೆಲ ವರ್ಷಗಳಿಂದ ಸಂವಿಧಾನಿ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಕೋವಿಡ್, ನೀತಿಸಂಹಿತೆ ಹೀಗೆ ಅನೇಕ ಕಾರಣದಿಂದ ಅದ್ಧೂರಿಯಾಗಿ ಆಚರಿಸಲಾಗಿಲ್ಲ. ಆದರೆ ಈ ವರ್ಷ ರಾಷ್ಟ್ರನಾಯಕರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಪ್ರತಿ ಗ್ರಾಮಗಳಲ್ಲಿ ಪ್ರಚಾರ, ಪಟ್ಟಣದಲ್ಲಿ ಬ್ಯಾನರ್ ಬಂಟಿಂಗ್, ರಥದಲ್ಲಿ ಇಬ್ಬರು ನಾಯಕರ ಭಾವಚಿತ್ರಗಳ ಸೇರಿ ಗಜೇಂದ್ರಗಡ ಪಟ್ಟಣವನ್ನು ನೀಲಿಮಯವನ್ನಾಗಿಸಬೇಕು ಎಂದಾಗ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಜಯಂತಿ ಆಚರಣೆಗೆ ಅಷ್ಟೊಂದು ಅನುದಾನ ಬಂದಿಲ್ಲ, ಎಂದಾಗ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು, ಹಂಪಿ ಉತ್ಸವ ಸೇರಿ ಇತರ ಉತ್ಸವಗಳನ್ನು ಮಾಡಲು ಹಣವಿರುತ್ತದೆ, ಸರ್ವ ಸಮುದಾಯಗಳ ಬಾಳು ಬೆಳಗಿದ ನಾಯಕರ ಜಯಂತಿಗೆ ಅನುದಾನ ಎಲ್ಲ ಎನ್ನುತ್ತೀರಾ, ನಾವು ದೇಣಿಗೆ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ತಹಸೀಲ್ದಾರ್ ಈಗ ಸಲಹೆ, ಸೂಚನೆಗಳನ್ನು ನೀಡಿ ಅನುದಾನ ಕುರಿತು ಬಳಿಕ ಚರ್ಚಿಸೋಣ ಎಂದಾಗ ಅನುದಾನದ ಚರ್ಚೆಗೆ ವಿರಾಮ ಬಿದ್ದಿತು.ಪಟ್ಟಣದಲ್ಲಿ ಏ.೧೪ರಂದು ನಡೆಯುವ ರಾಷ್ಟ್ರ ನಾಯಕರ ಜಯಂತಿಯಂದು ರಥದಲ್ಲಿ ಅಂಬೇಡ್ಕರ್, ಜಗಜೀವನರಾಮ್ ಭಾವಚಿತ್ರಗಳ ಮೆರವಣಿಗೆ, ಮಹನೀಯರ ಕುರಿತು ಉಪನ್ಯಾಸ, ದುರ್ಗಾದೇವಿ ದೇವಸ್ಥಾನ ಮುಂಭಾಗದಿಂದ ಮೆರವಣಿಗೆ, ಕಾಲಕಾಲೇಶ್ವರ ವೃತ್ತದಲ್ಲಿ ಬಹಿರಂಗ ಸಭೆ, ಸಮುದಾಯ ಪ್ರತಿಭಾನ್ವಿತರಿಗೆ ಸನ್ಮಾನ, ಪ್ರತಿ ಗ್ರಾಮಗಳಲ್ಲಿ ಪೊಲೀಸ್ ಗಸ್ತು ಸೇರಿ ಅನೇಕ ಸಲಹೆಗಳನ್ನು ಸ್ವಾಗತಿಸಿದ ತಹಸೀಲ್ದಾರ್ ನೆಲ್ಲೂರ ಗ್ರಾಮದಲ್ಲಿ ವಿಶೇಷ ಗಸ್ತು ವ್ಯವಸ್ಥೆ, ವಿದ್ವಾಸರಿಂದ ಉಪನ್ಯಾಸ, ಸಂವಿಧಾನ ಪೀಠಿಕೆ ಓದುವ ಮೂಲಕ, ಸೇರಿ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಸೇರಿ ಇನ್ನಿತರ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ತಾಲೂಕಾಡಳಿತ ನಿರ್ವಹಿಸಲಿದೆ ಎಂದರು.ಸಮಾಜ ಕಲ್ಯಾಣ ಇಲಾಖೆಯ ಗೀತಾ ಆಲೂರ, ಮುಖಂಡರಾದ ಶಿವಪ್ಪ ಮಾದರ, ಮೈಲಾರಪ್ಪ ಚಳಮರದ, ಈಶ್ವರ ದೊಡ್ಡಮನಿ, ಬಸವರಾಜ ಮಾದರ, ಚಂದಪ್ಪ ಗೂಡದೂರ, ಕುಬೇರಪ್ಪ ರಾಠೋಡ, ರವಿ ಗಡೇದವರ, ಹನಮಂತಪ್ಪ ದೊಡ್ಡಮನಿ, ಶರಣು ಪೂಜಾರ ಮಾತನಾಡಿದರು. ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಮಹೇಶ ನಿಡಶೇಸಿ ಹಾಗೂ ಯಲ್ಲಪ್ಪ ಬಂಕದ, ಡಿ.ಜಿ. ಕಟ್ಟಿಮನಿ, ಕನಕಪ್ಪ ಕಲ್ಲೊಡ್ಡರ, ಅಂದಪ್ಪ ರಾಠೋಡ, ಮಾರುತಿ ಹಾದಿಮನಿ ಸೇರಿ ಸುತ್ತಲಿನ ಗ್ರಾಮಗಳಿಂದ ೧೦೦ಕ್ಕೂ ಅಧಿಕ ಮುಖಂಡರು ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share this article