ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೇಂದ್ರ ಸರ್ಕಾರ ಜಿಎಸ್ಟಿಯನ್ನು ವಿಧಿಸಿದಾಗ ವಿರೋಧ ಮಾಡದವರು ಈಗ ಜಿಎಸ್ಟಿ ಇಳಿಕೆ ಹೆಸರಲ್ಲಿ ಬಿಜೆಪಿಯವರೇ ಸಂಭ್ರಮಾಚರಣೆ ಮಾಡುವ ಮೂಲಕ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಲೇವಡಿ ಮಾಡಿದರು.ಪಟ್ಟಣದಲ್ಲಿ ಅಮೃತ್ ೨.೦ ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಕಲ್ಪಿಸುವ ೧೪.೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಜಿಎಸ್ಟಿಯನ್ನು ಇಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಮೋದಿಯವರು ಮತ್ತು ನಿರ್ಮಲಾ ಸೀತಾರಾಮನ್ರವರೇ ದಿನಬಳಕೆಯ ಅಗತ್ಯ ವಸ್ತುಗಳಿಗೆ ಜಿಎಸ್ಟಿಯನ್ನು ವಿಧಿಸಿ, ಜನಸಾಮಾನ್ಯರು ತೊಂದರೆ ಅನುಭವಿಸುವಂತೆ ಮಾಡಿದ್ದರು. ಈ ಹಿಂದೆ ಇದ್ದಂತಹ ಮನಮೋಹನ್ ಸಿಂಗ್ ಜಿಎಸ್ಟಿ ಹಾಕಿಲ್ಲ. ಜಿಎಸ್ಟಿ ಹಾಕಿದ್ದು, ನೋಟ್ ಬ್ಯಾನ್ ಮಾಡಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಮೋದಿ ಸರ್ಕಾರ. ಈಗ ಜಿಎಸ್ಟಿಯನ್ನು ಕಡಿಮೆ ಮಾಡಿರುವುದಕ್ಕೆ ಸ್ವಾಗತ ಬಯಸುತ್ತೇನೆ, ಸಂಭ್ರಮಾಚರಣೆ ಮಾಡುವಷ್ಟು ಏನೂ ಸಾಧನೆ ಮಾಡಿಲ್ಲ. ಕೈಗಾರಿಕೆಗಳನ್ನು ಆರಂಭಿಸಿ ಯುವಕರಿಗೆ ಉದ್ಯೋಗ ಕಲ್ಪಿಸಿಲ್ಲ, ಬೆಲೆಯನ್ನು ಇಳಿಕೆ ಮಾಡಲಿಲ್ಲ, ಇದ್ಯಾವುದನ್ನೂ ಮಾಡದೇ ಸಂಭ್ರಮಾಚರಣೆ ಮಾಡಿ ಜನರ ದಿಕ್ಕು ತಪ್ಪಿಸಬಾರದು. ಜಿಎಸ್ಟಿಯಿಂದ ಇದೂವರೆಗೂ ಎಷ್ಟು ಕೋಟಿ ಹಣವನ್ನು ಜನರಿಂದ ಪಡೆದಿದ್ದಾರೆ, ಅದಕ್ಕೆ ಲೆಕ್ಕ ನೀಡಬೇಕು. ಇಡೀ ದೇಶದಲ್ಲಿ ಮಹಾರಾಷ್ಟ್ರ ನಂತರ ಹೆಚ್ಚು ಜಿಎಸ್ಟಿ ಕಟ್ಟುತ್ತಿರುವುದು ಕರ್ನಾಟಕ ರಾಜ್ಯವಾಗಿದ್ದು, ಇದೂವರೆಗೂ ವಸೂಲಿ ಮಾಡಿರುವ ಲಕ್ಷಾಂತರ ಕೋಟಿ ಹಣದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಎಲ್ಲಾ ಸಂಸದರು ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಸಿಎಂ ಆದ ಮೇಲೆ ಯರಗೋಳ್ ಡ್ಯಾಂ ಅನ್ನು ಲೋಕಾರ್ಪಣೆ ಮಾಡುವ ಮೂಲಕ ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಒದಗಿಸಿದ್ದಾರೆ. ಇದರ ಮೂಲಕ ಪಟ್ಟಣದಲ್ಲಿ ಈಗ ಶೇ ೬೦ರಷ್ಟು ಮಾತ್ರ ಮನೆಗಳಿಗೆ ನೀರನ್ನು ಒದಗಿಸಲಾಗುತ್ತಿತ್ತು. ಮುಂದಿನ ೨೦ ವರ್ಷಗಳ ಪಟ್ಟಣದ ಅಭಿವೃದ್ಧಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಡೀ ಪಟ್ಟಣಕ್ಕೆ ಯರಗೊಳ್ ನೀರನ್ನು ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮನವಿ ಮಾಡಿದ ಪರಿಣಾಮ ಅದರಂತೆ ೧೫ ಲಕ್ಷ ಲೀಟರ್ ಸಾಮರ್ಥ್ಯದ ಒವರ್ ಟ್ಯಾಂಕ್ ನಿರ್ಮಿಸಲು ಮತ್ತು ೫೦ ಕಿಮೀನಷ್ಟು ಪೈಪ್ ಲೈನ್ ಅಳವಡಿಸಲು ಒಟ್ಟು ೧೮ ಕೋಟಿ ಅನುದಾನ ನೀಡಿದ್ದಾರೆ. ಒಟ್ಟು ೪೫೦೦ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ, ಸದಸ್ಯರಾದ ಅರುಣಾಚಲಂ ಮಣಿ, ಶಫೀ, ರಾಜನ್, ಬಾಬುಲಾಲ್, ನಯಾಜ್, ಪೊಣ್ಣಿ, ರತ್ನಮ್ಮ, ರಂಗರಾಮಯ್ಯ, ಶಾಧಿಕ್, ಅರುಣ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಹದೇವ್ ಸೇರಿದಂತೆ ಇತರರು ಹಾಜರಿದ್ದರು.