ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ರೈತರ ಜೀವನಾಡಿಯಾಗಿರುವ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯನ್ನು ೧೯೭೩-೭೪ನೇ ಸಾಲಿನ ಬರಗಾಲ ಪೀಡಿತ ಪ್ರದೇಶದ ಯೋಜನೆ ಅಡಿಯಲ್ಲಿ ಜಲಾಶಯ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಜಲಾಶಯದಿಂದ ಹೆಚ್ಚುವರಿ ನೀರು ಹರಿದು ಹೋಗಲು ೧೯೯೬-೯೭ನೇ ಸಾಲಿನಲ್ಲಿ ಜಲಾಶಯಕ್ಕೆ ಆರು ಗೇಟ್ ಮಾಡಲಾಗಿದೆ. ಆದರೆ ಗೇಟ್ ಮೇಲೆ ನಾಗರಾಳ, ಎಲ್ಮಡಗಿ, ಚಿಮ್ಮನಚೋಡ, ರೋಹಿಲಾ ತಾಂಡಾ ರೈತರು ತಮ್ಮ ಹೊಲಗಳಿಗೆ ಹೋಗಲು ಇದೇ ಮಾರ್ಗ ನಂಬಿಕೊಂಡು ದಿನನಿತ್ಯ ದನಕರುಗಳು, ಆಟೋ, ಟಂಟಂ, ಟ್ರ್ಯಾಲಿ, ಡಿಸಿಎಮ ಎತ್ತಿನ ಬಂಡಿಗಳು ಗೇಟಿನ ಮೇಲೆ ಸಂಚರಿಸುತ್ತಿವೆ.
ಜಲಾಶಯದಿಂದ ನದಿಗೆ ಹರಿದು ಬಿಟ್ಟ ನೀರು ನೋಡುವುದಕ್ಕಾಗಿ ಜನರು ಗೇಟ್ ಮೇಲೆ ಹತ್ತುವುದುನ್ನು ನಿಗಮ ಅಧಿಕಾರಿಗಳೂ ಯಾವುದೇ ನಿರ್ಬಂಧ ಮಾಡದೇ ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದಾರೆ.ಕೆಳದಂಡೆ ಮುಲ್ಲಾಮಾರಿ ಜಲಾಶಯ ಗೇಟ್ ಮೇಲೆ ದಿನ ನಿತ್ಯ ವಾಹನಗಳ ಓಡಾಟದಿಂದಾಗಿ ಕೆಳಭಾಗದಲ್ಲಿ ಕೆಲವು ಗೇಟ್ಗಳಲ್ಲಿ ನೀರು ಸೋರಿಕೆ ಆದರು ಸಹಾ ಇದರ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳು ಗಮನಹರಿಸುತ್ತಿಲ್ಲವೆಂದು ತಾಲೂಕು ಭೀಮಾ ಮಿಷನ್ ಹೋರಾಟ ಸಮಿತಿ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ದೂರಿದ್ದಾರೆ.
ಕೆಳದಂಡೆ ಮುಲ್ಲಾಮಾರಿ ಜಲಾಶಯ ಗೇಟ್ ಮೇಲೆ ಹೋಗುವ ಸಂದರ್ಭದಲ್ಲಿ ದನಕರು, ಜನರು ವಾಹಗಳು ಒಂದು ವೇಳೆ ಆಯತಪ್ಪಿ ಬಿದ್ದರೆ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಜನ ಜಾನುವಾರುಗಳ ವಾಹನಗಳ ಸಂಚಾರಕ್ಕೆ ನಿಗಮ ಕಡಿವಾಣ ಹಾಕಬೇಕಾಗಿದೆ. ಭಾರಿ ವಾಹನಗಳ ಸಂಚಾರದಿಂದ ಗೇಟ್ಗಳಿಗೆ ಮುಂದಿನ ದಿನಗಳಲ್ಲಿ ಹಾನಿ ಆಗುವ ಸಾಧ್ಯತೆಗಳಿಗೆ ನಿಗಮ ಅಧಿಕಾರಿಗಳು ಎಚ್ಚರವಹಿಸಬೇಕಾಗಿದೆ.
ರಾಮರೆಡ್ಡಿ ಪಾಟೀಲ ಚಿಮ್ಮನಚೋಡ, ಬಿಜೆಪಿ ಮುಖಂಡಕೆಳದಂಡೆ ಮುಲ್ಲಾಮಾರಿ ಜಲಾಶಯ ಗೇಟ್ ಮೇಲೆ ಜನರು ಹೋಗದಂತೆ ಪ್ರತ್ಯೇಕವಾಗಿ ಸಣ್ಣ ಸೇತುವೆ ನಿರ್ಮಿಸಿಕೊಡುವುದಕ್ಕಾಗಿ ಕರ್ನಾಟಕ ರಾಜ್ಯ ನೀರಾವರಿ ನಿಗಮಕ್ಕೆ ಪತ್ರವನ್ನು ಬರೆಯಲಾಗಿದೆ. ಆದರೆ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ. ರೈತರ ಬೇಡಿಕೆಗೆ ಸರಕಾರ ಸ್ಪಂದಿಸಬೇಕಾಗಿದೆ.
ವಿನಾಯಕ ಚವ್ಹಾಣ, ಸಹಾಯಕ ಎಂಜನಿಯರ್