)
ಹೊಳೆಹೊನ್ನೂರು: ಸಮೀಪದ ಆನವೇರಿ ಗ್ರಾಮದ ಬಂಗಾರದ ಅಂಗಡಿ ಮಾಲೀಕನ ಪತ್ನಿಗೆ ಕಡಿಮೆ ಬೆಲೆಗೆ ಹಳೆಯ ಬಂಗಾರ ಮಾರುವುದಾಗಿ ನಂಬಿಸಿದ ಅಪರಿಚಿತ ಮಹಿಳೆಯರು 35 ಗ್ರಾಂನಷ್ಟು ನಕಲಿ ಬಂಗಾರ ನೀಡಿ 1.60 ಲಕ್ಷ ರು. ಮೌಲ್ಯದ 11 ಗ್ರಾಂ ಅಸಲಿ ಚಿನ್ನಾಭರಣ ಪಡೆದು ಯಾಮಾರಿಸಿದ್ದಾರೆ. ಆನವೇರಿಯ ಪ್ರಕಾಶ್ ಜ್ಯುವೆಲ್ಲರ್ಸ್ ಮಾಲೀಕ ರಾಘವೇಂದ್ರ ಎಂ. ಶೆಟ್ಟ್ ಪತ್ನಿ ಶೋಭಾ ಒಬ್ಬರೆ ಅಂಗಡಿಯಲ್ಲಿದ್ದಾಗ ಅಂಗಡಿಗೆ ಬಂದ ಮಹಿಳೆಯೊಬ್ಬಳು ತನ್ನ ಬಳಿ ಇದ್ದ ಹಳೆಯ ಚಿನ್ನದ ಬಳೆಯನ್ನು ನೀಡಿ, ಅದರ ಬದಲಿಗೆ ಕಿವಿಯೋಲೆ ಹಾಗೂ ಇತರ ಚಿನ್ನಾಭರಣಗಳನ್ನು ಪಡೆದು ಹೋಗಿದ್ದಾಳೆ. ಬಳಿಕ ಇನ್ನಿಬ್ಬರು ಮಹಿಳೆಯರನ್ನು ತನ್ನೊಟ್ಟಿಗೆ ಕರೆತಂದ ಮಹಿಳೆ ಇವರ ಬಳಿಯು ಚಿನ್ನದ ಗುಂಡುಗಳಿವೆ ಎಂದು ನಕಲಿ ಚಿನ್ನದ ಗುಂಡುಗಳನ್ನು ನೀಡಿ, ಎರಡು ಬಂಗಾರದ ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸಂಜೆ ವೇಳೆಗೆ ಅಂಗಡಿಗೆ ಬಂದ ಮಾಲೀಕ ರಾಘವೇಂದ್ರ ಬಂಗಾರದ ಗುಂಡುಗಳನ್ನು ಪುಡಿ ಮಾಡಿ ಪರಿಶೀಲಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.