ಈ ಚುನಾವಣೆ ಸುಳ್ಳು-ಸತ್ಯದ ನಡುವಿನ ಸಮರ: ಶಿವರಾಜ ತಂಗಡಿಗಿ

KannadaprabhaNewsNetwork | Published : Apr 7, 2024 1:51 AM

ಸುಳ್ಳು ಮತ್ತು ಸತ್ಯದ ನಡುವೆ ಸಮರದ ರೀತಿಯಲ್ಲಿ ಈ ಚುನಾವಣೆ ನಡೆಯುತ್ತಿದೆ.

ಹನುಮಸಾಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಿಟ್ನಾಳ ಪರ ಪ್ರಚಾರಕನ್ನಡಪ್ರಭ ವಾರ್ತೆ ಹನುಮಸಾಗರ

ಸುಳ್ಳು ಮತ್ತು ಸತ್ಯದ ನಡುವೆ ಸಮರದ ರೀತಿಯಲ್ಲಿ ಈ ಚುನಾವಣೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಗ್ರಾಮದ ಶ್ರೀ ಗೌರಿ ಶಂಕರ ಆಯಿಲ್ ಮಿಲ್‌ನಲ್ಲಿ ಶನಿವಾರ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹತ್ತು ವರ್ಷದ ಹಿಂದಿನ ಬಿಜೆಪಿ ಸರ್ಕಾರದವರು ಆಡಿದ ಭಾಷಣದ ತುಣುಕು ತೆಗೆದು ನೋಡಿದರೆ, ಜನರು ಬಿಜೆಪಿಗೆ ಮತ ಹಾಕುವುದಿಲ್ಲ. ಮೋದಿ ಅವರು ಸುಳ್ಳು ಹೇಳುವ ಸರದಾರ ಆಗಿದ್ದಾರೆ. ನೂರು ದಿನ ಅವಕಾಶ ಕೊಡಿ, ಕಪ್ಪು ಹಣ ತಂದು ಅಕೌಂಟಿಗೆ ಹಾಕ್ತೀನಿ ಅಂದಿದ್ದರು. ದೇಶದಲ್ಲಿ 100 ಸ್ಮಾರ್ಟ್ ಸಿಟಿ ಮಾಡ್ತೀನಿ ಎಂದಿದ್ದರು. ಏನೂ ಮಾಡಿಲ್ಲ. ಕರ್ನಾಟಕದಲ್ಲಿ ಬರಗಾಲ ಆವರಿಸಿದೆ, ರೈತರಿಗೆ ಬರಗಾಲದ ಅನುದಾನ ನೀಡುತ್ತಿಲ್ಲ. ಇಂದಿರಾ ಗಾಂಧಿ ಉಳುವನೇ ಭೂ ಒಡೆಯ ಎಂದು ಹೇಳಿದರು. ಇಂದು ಬಡವರು ನಾಲ್ಕೈದು ಎಕರೆ ಜಮೀನಿನಲ್ಲಿ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುವಂತೆ ಕಾಂಗ್ರೆಸ್‌ ಮಾಡಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ಬಿಜೆಪಿಯಲ್ಲಿ ಜನಪರ ಯೋಜನೆಗಳು ಇಲ್ಲದಂತಾಗಿವೆ. ಹೇಳಿಕೊಳ್ಳಲು ಒಂದು ಯೋಜನೆಗಳು ಅಸ್ತಿತ್ವದಲ್ಲಿಲ್ಲ. ದೇಶದ ಶೇ. 83ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಸಾಕಷ್ಟು ಜನಪರ ಕೆಲಸಗಳನ್ನು ಮಾಡಲಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಕಾಂಗ್ರೆಸ್ ಎನ್ನುವುದು ಗ್ಯಾರಂಟಿ ಸರ್ಕಾರ. ಎಲ್ಲ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಬಿಜೆಪಿಯು ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ₹50 ಸಾವಿರ ಕೋಟಿ ಸಾಲ ಮಾಡಿದರೆ, ಬಿಜೆಪಿ ಸರ್ಕಾರ ಕೇವಲ 10 ವರ್ಷದಲ್ಲಿ ₹ 1 ಕೋಟಿ 73 ಲಕ್ಷ ಕೋಟಿ ಸಾಲ ಮಾಡಿದೆ ಎಂದರು.

ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಜಿಲ್ಲಾ ಅಧ್ಯಕ್ಷೆ ಮಾಲತಿ ನಾಯಕ, ನಿರ್ಮಲಾ ಕರಡಿ, ಮೈನುದ್ದೀನ್ ಮುಲ್ಲಾ, ವಿಶ್ವನಾಥ ಕನ್ನೂರ, ಚಂದ್ರು ನಾಲತವಾಡ, ಕಲ್ಲಪ್ಪ ತಳವಾರ, ಹನುಮಗೌಡ, ಸಂಗಯ್ಯ ವಸ್ತ್ರದ, ಮಹಾಂತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ಡಾ. ಶರಣು ದೇವರ ಹವಾಲ್ದಾರ, ಸೂಚಪ್ಪ ದೇವರಮನಿ, ಆಸಿಫ್ ಡಲಾಯತ್, ಮಂಜುನಾಥ ಹುಲ್ಲೂರ ಹಾಗೂ ಹನುಮಸಾಗರದ ಕಾರ್ಯಕರ್ತರು ಇದ್ದರು.