ಸಿದ್ಧಾಂತದ ಸಂಘರ್ಷಗಳ ಚುನಾವಣೆ । ಮತದಾರರ ಮುಂದಿರುವುದು ಮೋದಿ ಮಾತ್ರ
ಈ ಬಾರಿ ನಡೆಯುವ ಚುನಾವಣೆ ಯಾವುದೇ ಭಾಗ್ಯಗಳ ಯೋಜನೆಗೆ ಸಂಬಂಧಿಸಿದ್ದಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ರಂಭಾಪುರಿ ಪೀಠಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ರಾಷ್ಟ್ರದ ಹಿತ ಚಿಂತನೆ ಪರ ಹಾಗೂ ವಿರುದ್ಧವಾಗಿರುವವರ ಸಿದ್ಧಾಂತದ ಸಂಘರ್ಷಗಳ ನಡುವೆ ನಡೆಯುತ್ತಿರುವ ಚುನಾವಣೆ ಎಂದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ಮಾಡಿ ಪ್ರಧಾನ ಮಂತ್ರಿಗಳು ಪುನಃ ದೇಶದ ನೇತೃತ್ವ ವಹಿಸಿಕೊಳ್ಳಬಾರದು, ದೇಶ ಹಾಳಾದರೂ ಪರವಾಗಿಲ್ಲ. ಮೋದಿ ಅವರನ್ನು ಕಟ್ಟಿಹಾಕಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಮತ್ತೊಮ್ಮೆ ಮೋದಿ ಭಾರತದ ವಿಶ್ವಗುರುವಾಗಿ ಹೊರಹೊಮ್ಮಲು ನಾವು ಈಗಾಗಲೇ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.
ವಿಪಕ್ಷ ಕಾಂಗ್ರೆಸ್ ನಾಯಕರು ಹಗುರ ಮಾತುಗಳಿಗೆ ನಾವು ತಲೆಕೆಡಿಸಿಕೊಳ್ಳದೆ ನಮ್ಮ ಕೆಲಸ ಮಾಡುತ್ತಿದ್ದೇವೆ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ಆಗಬೇಕು ಎಂಬ ಆಶಯ ಇಟ್ಟುಕೊಂಡಿದ್ದಾರೆ. ಅದರಂತೆ ನಾವು ಈಗಾಗಲೇ ಕೆಲಸ ಮಾಡಿದ್ದೇವೆ. ಅಭಿವೃದ್ಧಿ ಕೆಲಸಗಳ ಕುರಿತ ಮಾಹಿತಿ, ಲೆಕ್ಕಪತ್ರವನ್ನು ಮತದಾರರಿಗೆ ನೀಡುತ್ತೇವೆ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಶ್ವೇತಪತ್ರದ ರೀತಿಯಲ್ಲಿ ಪಟ್ಟಿ ಮಾಡಿ ಜನರ ಮನೆಗೆ ತೆರಳಿ ಈ ಬಾರಿ ಚುನಾವಣೆಯಲ್ಲಿ ಮತ ಯಾಚನೆ ಮಾಡಲಿದ್ದೇವೆ ಎಂದರು.
ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಅಕ್ಕಿ ನಮ್ಮ ಸರ್ಕಾರ ನೀಡಿದ್ದು ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರದ ಸಹಾಯಧನದಡಿ ರಾಜ್ಯದ ಜನತೆಗೆ ಅನ್ನಭಾಗ್ಯ ಅಕ್ಕಿ ಬರುತ್ತಿದೆ. ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರು.29ನಲ್ಲಿ ಗುಣಮಟ್ಟದ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಕೆಲವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅಕ್ಕಿ ವಿತರಣೆ ನಿಲ್ಲಿಸುವ ಷಡ್ಯಂತ್ರ ಮಾಡಿದ್ದಾರೆ ಇದು ಖಂಡನೀಯ ಎಂದರು.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆ, ಮತ್ತಿತರರ ಕಾರಣಗಳಿಂದ ತಪ್ಪು ನಡೆದು ಬಿಜೆಪಿಗೆ ಸೀಟುಗಳು ಕಡಿಮೆ ಬಂದಿವೆ. ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿ ಮುಂದುವರೆಯುವ ಕೆಲಸ ಆಗಿದೆ. ಈ ಬಾರಿ ಮತದಾರರ ಕಣ್ಣಮುಂದೆ ಕೇವಲ ನರೇಂದ್ರ ಮೋದಿ- ಕಮಲದ ಗುರುತು ಮಾತ್ರಇದೆ. ಆಕಸ್ಮಿಕವಾಗಿ ಅಭ್ಯರ್ಥಿ ಸರಿಯಿಲ್ಲ ವೆಂದಾದರೆ ಕಿವಿಹಿಂಡಿ ತಿದ್ದುವ ಪ್ರಯತ್ನ ಮಾಡಲಿದ್ದಾರೆ ಎಂದರು.ತುಷ್ಟೀಕರಣದ ರಾಜಕಾರಣ: ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣದಿಂದ ಹಿಂದುತ್ವ ವಿರೋಧ ಶಕ್ತಿಗಳಿಗೆ ಕುಮ್ಮಕ್ಕು ದೊರೆಯುತ್ತಿದೆ. ಇದರ ಫಲ ವಾಗಿಯೇ ಇತ್ತೀಚೆಗೆ ಬೆಂಗಳೂರಿನಲ್ಲಿ ಹನುಮಾನ್ ಚಾಲೀಸ ಹಾಕಿದವರ ಮೇಲೆ ಹಲ್ಲೆ ನಡೆದಿದೆ. ಹಿಂದೂ ವಿರೋಧಿಗಳಿಗೆ ಬೆಂಬಲ ನೀಡುತ್ತಿರುವ ಪ್ರತಿಫಲವೇ ಇಂತಹ ಘಟನೆಗಳು. ಕಾಂಗ್ರೆಸ್ನ ತುಷ್ಟೀಕರಣ ಇಷ್ಟು ದಿನ ಇರಲಿಲ್ಲ. ಇದೀಗ ಅಧಿಕಾರಕ್ಕೆ ಬರುತ್ತಿದ್ದಂತೆ ಪುನಃ ಮೇಲೆದಿದ್ದೆ. ಅಲ್ಲಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಿ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದರು.--- (ಬಾಕ್ಸ್)---
ಬಿಜೆಪಿ ನಾಯಕ ಈಶ್ವರಪ್ಪನವರು ಎಲ್ಲಾ ಚುನಾವಣೆಗಳಲ್ಲೂ ಸಹ ನಮ್ಮ ಪರ ಇದ್ದವರು. ಯಾವುದೋ ಬೇರೆ ಕಾರಣಗಳಿಂದ ಇಂದು ಕೆಲವು ತಪ್ಪು ಅಭಿಪ್ರಾಯ ಹೊರಬಂದಿದೆ. ಆದಷ್ಟು ಬೇಗ ನಮ್ಮ ನಡುವಿನ ಅಂತರ ಸರಿಯಾಗಲಿದೆ. ಈ ಬಾರಿಯೂ ನಮಗೆ ಅವರ ಆಶೀರ್ವಾದ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ರಾಘವೇಂದ್ರ ಹೇಳಿದರು.--(ಬಾಕ್ಸ್)-- ಪ್ರತಾಪ್ ನೇತೃತ್ವದಲ್ಲಿ ಮೈಸೂರು ಗೆಲ್ಲಲಿದೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯೂ ಸಂಸತ್ನಲ್ಲಿ ಇರಬೇಕು ಎಂಬುದು ನಮ್ಮ ಆಶಯ. ಈ ಹಿಂದೆ 2 ಬಾರಿ ನಾವು ಒಟ್ಟಿಗೆ ಸಹೋದರರಂತೆ ಕೆಲಸ ಮಾಡಿದ್ದೇವೆ. ಆದರೆ ಬೇರೆ ಬೇರೆ ಕಾರಣಗಳಿಂದ ಮೈಸೂರಿನ ಅಭ್ಯರ್ಥಿ ಬದಲಾವಣೆ ಆಗಿದೆ. ಇದು ರಾಜಕಾರಣದ ಅಂತ್ಯ ಎಂದು ಭಾವಿಸುವುದು ಬೇಡ. ಇದೊಂದು ಬಿಡುವು ಎಂದು ಕೊಳ್ಳ ಬಹುದು. ಈ ಬಾರಿಯೂ ಪ್ರತಾಪ್ ಅವರ ನೇತೃತ್ವದಲ್ಲಿ ಮೈಸೂರು ಕ್ಷೇತ್ರ ಗೆಲ್ಲಿಸಿಕೊಂಡು ಬರುವ ವಿಶ್ವಾಸವಿದೆ ಎಂದು ರಾಘವೇಂದ್ರ ಹೇಳಿದರು.
ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದ ರಾಘವೇಂದ್ರ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಶ್ರೀಪೀಠದ ಎಲ್ಲಾ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು, ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದ ಪಡೆದರು. ಚುನಾವಣಾ ನೀತಿ ಸಂಹಿತೆ ಕಾರಣ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ನಿರ್ಗಮಿಸಿದರು. ೨೨ಬಿಹೆಚ್ಆರ್ ೧: