ಕನ್ನಡಪ್ರಭ ವಾರ್ತೆ ಉಳ್ಳಾಲ
ಮಂಗಳೂರು ವಿಧಾನಸಭಾ ಕ್ಷೇತ್ರ ಪ್ರಿಯದರ್ಶಿನಿ ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ‘ಪರಿವರ್ತನಾ’ ಮಹಿಳಾ ಸಮಾವೇಶ ನ.1ರಂದು ಮಧ್ಯಾಹ್ನ 12 ಗಂಟೆಗೆ ತೊಕ್ಕೊಟ್ಟು ಅಂಬಿಕಾರೋಡ್ನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ ಎಂದು ಗೇರು ಕೃಷಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಕಥೆ, ನಮ್ಮ ಶಕ್ತಿ, ನಮ್ಮ ಯಶಸ್ಸು – ಬನ್ನಿ ಮಹಿಳಾ ಸಮಾವೇಶದಲ್ಲಿ!’ ಎಂಬ ಘೋಷಣೆಯಡಿ ಆಯೋಜಿಸಲಾದ ಈ ಸಮಾವೇಶದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ಮಹಿಳಾ ನಾಯಕಿಯರು ಭಾಗವಹಿಸಿ ದಿಕ್ಕೂಚಿ ಸಂದೇಶ ನೀಡಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕಾರ್ಡ್ ವಿತರಣೆ ಹಾಗೂ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ನೋಂದಣಿ ಕಾರ್ಯವೂ ನಡೆಯಲಿದೆ ಎಂದರು.
ಸಮಾವೇಶದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ , ವೃಂದ ಪೂಜಾರಿ ಮೇರಮಜಲು ನೇತೃತ್ವ ವಹಿಸಿದ್ದಾರೆ ಎಂದರು.ಚಂದ್ರಿಕಾ ರೈ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಉಳ್ಳಾಲ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ, ನಗರಸಭೆ, ಪಟ್ಟಣಪಂಚಾಯತ್ , ಪುರಸಭೆಯ ಮಹಿಳೆಯರಿಗೆ ಲಕ್ಕಿ ಡ್ರಾ ನಡೆಸಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಂದು ಮಹಿಳೆಯರು ಈ ಲಕ್ಕಿ ಡ್ರಾ ದಲ್ಲಿ ಭಾಗವಹಿಸಬಹುದಾಗಿದ್ದು ಡ್ರಾ ನಡೆಯುವ ಸಂದರ್ಭ ಇದ್ದ ಮಹಿಳೆಯರಿಗೆ ಮಾತ್ರ ವಿಜೇತರು ಎಂದು ಪರಿಗಣಿಸಲಾಗುವುದು ಎಂದರು.