ಡಂಬಳ: ಎಸ್ಐಆರ್ನಿಂದ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ತಡೆಯುವುದು, ಒಂದೇ ಸ್ಥಳದಲ್ಲಿ ಮತದಾನದ ಹಕ್ಕು ಇರುವಂತೆ ನೋಡುವುದು ಮತ್ತು ಪಾರದರ್ಶಕ ಮತದಾರರ ಪರಿಷ್ಕರಣೆಯ ಸಿದ್ಧಪಡಿಸುವುದು ವಿಶೇಷ ಸಮಗ್ರ ಪರಿಷ್ಕರಣೆಯಾಗಿದೆ. ಈ ಕುರಿತು ಪಕ್ಷದ ಕಾರ್ಯಕರ್ತರು ಜಾಗೃತೆ ವಹಿಸಬೇಕೆಂದು ಮಾಜಿ ಸಚಿವ ಕಳಕಪ್ಪ ಬಂಡಿ ತಿಳಿಸಿದರು.
ಎಸ್ಐಆರ್ ಎಂದರೆ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಕಲಿ ಮತಗಳನ್ನು ತೆಗೆದುಹಾಕಿ ಅರ್ಹರನ್ನು ಮಾತ್ರ ಪಟ್ಟಿಯಲ್ಲಿ ಉಳಿಸುವ ಉದ್ದೇಶವಾಗಿದೆ. ಮೃತಪಟ್ಟವರು, ಬೇರೆಡೆ ಸ್ಥಳಾಂತಗೊಂಡವರು ಹಾಗೂ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದರಿಂದ ಚುನಾವಣೆಯಲ್ಲಿ ಅಕ್ರಮ ತಡೆಯಲ್ಪಡುತ್ತವೆ ಎಂದರು.
ರಾಜ್ಯದಲ್ಲಿ ಅಂದಾಜು 70ರಿಂದ 80 ಲಕ್ಷ ನಕಲಿ ಮತದಾರರಿದ್ದಾರೆ. ರೋಣ ಮತಕ್ಷೇತ್ರದಲ್ಲಿ ಅಂದಾಜು 25 ಸಾವಿರ ನಕಲಿ ಮತದಾರರಿದ್ದಾರೆ. ಮುಂಬರುವ ಸ್ಥಳೀಯ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಪಕ್ಷದ ಕಾರ್ಯಕರ್ತರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು ನಕಲಿ ಮತಗಳ ಕುರಿತು ಜಾಗೃತೆ ವಹಿಸಬೇಕು ಎಂದರು.ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಹಾರೂಗೇರಿ ಮಾತನಾಡಿ, ಈಗಾಗಲೆ 8 ಮೋರ್ಚಾಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಕ್ಷದ ಆದೇಶ ಹಾಗೂ ಸಲಹೆಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಎಸ್ಐಆರ್ ಬಗ್ಗೆ ಮಹತ್ವ ನೀಡಬೇಕು. ಪಕ್ಷದ ವಿವಿಧ ಚಟುವಟಿಕೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಪಕ್ಷದ ಶಕ್ತಿ ಮತ್ತು ಸಂಪತ್ತು ಕಾರ್ಯಕರ್ತರು ಆಗಿದ್ದಾರೆ ಎಂದರು.