ವಜಾಗೊಂಡವರು ಮತ್ತೆ ಕೆಲಸಕ್ಕೆ ಹಾಜರು

KannadaprabhaNewsNetwork | Published : Nov 22, 2023 1:00 AM

ಸಾರಾಂಶ

ಕಾರ್ಮಿಕರ ಬೋಗಸ್‌ ಕಾರ್ಡ್ ಮಾಡಿದ್ದ ಆರೋಪದಲ್ಲಿ ಸ್ವತಃ ಕಾರ್ಮಿಕ ಸಚಿವರೇ ಕಿತ್ತೆಸೆದಿದ್ದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 13 ಜನ ನೌಕರರು ಕೇವಲ 15 ದಿನಗಳಲ್ಲಿ ಮತ್ತದೇ ಜಾಗಕ್ಕೆ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.ಕಾರ್ಮಿಕ ಸಚಿವ ಸಂತೋಷ ಲಾಡ್ ನ.5ರಂದು ಇಲಾಖೆ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಜಿಲ್ಲೆಯಲ್ಲಿ 2.96 ಲಕ್ಷ ಕಾರ್ಮಿಕ ಕಾರ್ಡ್‌ ವಿತರಣೆಯಾಗಿರುವುದನ್ನು ಕೇಳಿ ಆಶ್ಚರ್ಯಗೊಂಡಿದ್ದರು.

ಕಾರ್ಮಿಕರ ಬೋಗಸ್‌ ಕಾರ್ಡ್‌ ಮಾಡಿದ್ದ ಆರೋಪದಲ್ಲಿ ವಜಾಗೊಂಡಿದ್ದ 13 ಹೊರಗುತ್ತಿಗೆ ಸಿಬ್ಬಂದಿ

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಕಾರ್ಮಿಕರ ಬೋಗಸ್‌ ಕಾರ್ಡ್ ಮಾಡಿದ್ದ ಆರೋಪದಲ್ಲಿ ಸ್ವತಃ ಕಾರ್ಮಿಕ ಸಚಿವರೇ ಕಿತ್ತೆಸೆದಿದ್ದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 13 ಜನ ನೌಕರರು ಕೇವಲ 15 ದಿನಗಳಲ್ಲಿ ಮತ್ತದೇ ಜಾಗಕ್ಕೆ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಾರ್ಮಿಕ ಸಚಿವ ಸಂತೋಷ ಲಾಡ್ ನ.5ರಂದು ಇಲಾಖೆ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಜಿಲ್ಲೆಯಲ್ಲಿ 2.96 ಲಕ್ಷ ಕಾರ್ಮಿಕ ಕಾರ್ಡ್‌ ವಿತರಣೆಯಾಗಿರುವುದನ್ನು ಕೇಳಿ ಆಶ್ಚರ್ಯಗೊಂಡಿದ್ದರು. ಇಲಾಖೆಯ ತಾಲೂಕು ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್‌, ಸಿಬ್ಬಂದಿಯ ಕೈಚಳಕದಿಂದಲೇ ಬೋಗಸ್‌ ಕಾರ್ಡ್‌ ಆಗಿರುವುದನ್ನು ಮೋಲ್ನೋಟಕ್ಕೆ ಅರಿತ ಸಚಿವರು, ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 13 ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಿ ಆದೇಶಿಸಿದ್ದರು. ಆದರೆ, ಕೇವಲ 15 ದಿನಗಳಲ್ಲಿ ವಜಾಗೊಂಡಿದ್ದ ಎಲ್ಲರೂ ಮಂಗಳವಾರ ಮತ್ತೆ ಅದೇ ಕೆಲಸಕ್ಕೆ ಹಾಜರಾಗಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಬೋಗಸ್ ಕಾರ್ಡ್‌ ಆರೋಪ:

ಸರ್ಕಾರ ಕಾರ್ಮಿಕರಿಗೆ ವಿವಿಧ ಸೌಲಭ್ಯ ಕಲ್ಪಿಸುತ್ತಿರುವ ಹಿನ್ನೆಲೆ ಕಾರ್ಮಿಕ ಇಲಾಖೆಯ ಗುರುತಿನ ಚೀಟಿಗೆ ಬೇಡಿಕೆ ಹೆಚ್ಚಿತ್ತು. ಕಾರ್ಡ್ ಹೊಂದಿದವರಿಗೆ ಮಾತ್ರ ಸೌಲಭ್ಯ ಸಿಗುವ ಕಾರಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಅಸಂಘಟಿತ ವಲಯದ ಸೇರಿ ಕಾರ್ಮಿಕರು ಕಾರ್ಡ್‌ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದರು. ಜಿಲ್ಲೆಯಲ್ಲಿ 2.96 ಲಕ್ಷ ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ. ದೊಡ್ಡ ಜಿಲ್ಲೆಗಳಲ್ಲೂ ಇಲ್ಲದಷ್ಟು ಕಾರ್ಡ್‌ ಇಲ್ಲಿರುವುದು ಸಚಿವರಿಗೆ ಸಂಶಯ ಮೂಡಿಸಿತ್ತು. ಹಣ ಪಡೆದು ಬೋಗಸ್‌ ಕಾರ್ಡ್‌ ನೀಡಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಜಿಲ್ಲೆಯ 8 ತಾಲೂಕಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 13 ಸಿಬ್ಬಂದಿಯನ್ನೇ ಹೊಣೆ ಮಾಡಿ ಸೇವೆಯಿಂದ ಸಚಿವರು ತೆಗೆದುಹಾಕಿದ್ದರು.

ಬಾಗಿಲು ಹಾಕಿದ್ದ ಕಚೇರಿ:

ಜಿಲ್ಲೆಯ ಕಾರ್ಮಿಕ ಇಲಾಖೆ ನಡೆಯುತ್ತಿರುವುದೇ ಹೊರಗುತ್ತಿಗೆ ಸಿಬ್ಬಂದಿಯಿಂದ ಎಂಬಂತಾಗಿದೆ. ಜಿಲ್ಲಾ ಕಾರ್ಮಿಕ ಅಧಿಕಾರಿ ಒಬ್ಬರನ್ನು ಬಿಟ್ಟರೆ ಜಿಲ್ಲೆಯಲ್ಲಿ ಉಳಿದೆಲ್ಲ ಹುದ್ದೆ ಖಾಲಿಯಿವೆ. ಜಿಲ್ಲೆಯಲ್ಲಿ ಒಬ್ಬರೂ ಲೇಬರ್‌ ಇನ್‌ಸ್ಟೆಕ್ಟರ್‌ಗಳಿಲ್ಲ. ಕಚೇರಿ ಸಹಾಯಕರ ಹುದ್ದೆ ಸೇರಿದಂತೆ ಖಾಯಂ ಹುದ್ದೆಗಳೆಲ್ಲವೂ ಖಾಲಿಯಿರುವ ಕಾರಣಕ್ಕೆ ಹೊರಗುತ್ತಿಗೆ ಆಧಾರದ ಮೇಲೆ 13 ಸಿಬ್ಬಂದಿ ಸೇವೆ ಪಡೆಯಲಾಗಿತ್ತು. ಆದ್ದರಿಂದ ತಾಲೂಕಾ ಕಚೇರಿಗಳಲ್ಲಿ ಇವರೇ ಬಾಸ್‌ ಎಂಬಂತಿದ್ದರು.

ಕಳೆದೆರಡು ವರ್ಷಗಳಲ್ಲಿ ಕಾರ್ಮಿಕ ಕಾರ್ಡ್‌ ಸಂಖ್ಯೆ ಹೆಚ್ಚುತ್ತಲೇ ಬಂದಿತ್ತು. ಕಾರ್ಮಿಕರಲ್ಲದವರಿಗೂ ಕಾರ್ಡ್‌ ನೀಡಿರುವ ಆರೋಪದ ಮೇಲೆ ಸಚಿವ ಲಾಡ್‌ 13 ಸಿಬ್ಬಂದಿ ಕಿತ್ತೆಸೆದ ಮೇಲೆ ಕಳೆದ 15 ದಿನಗಳಿಂದ ಎಲ್ಲ ತಾಲೂಕುಗಳ ಕಾರ್ಮಿಕ ನಿರೀಕ್ಷಕರ ಕಚೇರಿಗಳು ಬಾಗಿಲು ಹಾಕಿದ್ದವು. ಈ ಅವಧಿಯಲ್ಲಿ ಕಾರ್ಮಿಕರು ಕಾರ್ಡ್‌ಗಾಗಿ ಕಚೇರಿಗೆ ಬಂದು ಪರದಾಡುವಂತಾಗಿತ್ತು. ಅನಿವಾರ್ಯವಾಗಿ ಈಗ ಮತ್ತೆ ಅವರನ್ನೇ ಸೇವೆಗೆ ಪಡೆಯಲಾಗಿದೆ. ಈಗ ಅವರೇ ಬೋಗಸ್‌ ಕಾರ್ಡ್‌ ಪತ್ತೆ ಹಚ್ಚಬೇಕಿದ್ದು, ಯಾವ ರೀತಿ ಅದು ಸಾಧ್ಯ ಎಂಬುದು ಪ್ರಶ್ನೆಯಾಗಿದೆ.

ಜಿಲ್ಲೆಯಲ್ಲಿ 2.96 ಲಕ್ಷ ಕಾರ್ಡ್‌:

ಬೆಂಗಳೂರು ನಗರ, ಕಲಬುರಗಿ ಹೊರತುಪಡಿಸಿ ಹಾವೇರಿಯಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಮಿಕರ ನೋಂದಣಿಯಾಗಿದೆ. ಬೆಂಗಳೂರಿನಲ್ಲಿ 4.56 ಲಕ್ಷ, ಕಲಬುರಗಿಯಲ್ಲಿ 3.27 ಲಕ್ಷ ಕಾರ್ಮಿಕರ ನೋಂದಣಿಯಾಗಿದ್ದರೆ, ಹಾವೇರಿ ಜಿಲ್ಲೆಯಲ್ಲಿ 2,96,039 ಕಾರ್ಮಿಕರ ನೋಂದಣಿಯಾಗಿದೆ. ಬಳ್ಳಾರಿ, ಬೀದರ್‌, ಬೆಳಗಾವಿ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಕೂಡ ಆಗದಷ್ಟು ಕಾರ್ಮಿಕರ ನೋಂದಣಿ ಜಿಲ್ಲೆಯಲ್ಲಿ ಆಗಿದೆ. ಇದರಿಂದ ಡಾಟಾ ಎಂಟ್ರಿ ಆಪರೇಟರಗಳು ಬೋಗಸ್ ಕಾಡ್೯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಅದಕ್ಕಾಗಿ ಹಾವೇರಿ ಜಿಲ್ಲಾ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೂವರು, ಹಾವೇರಿ ತಾಲೂಕಾ ಕಚೇರಿಯ ಇಬ್ಬರು, ಬ್ಯಾಡಗಿ 2, ಇನ್ನುಳಿದ 6 ತಾಲೂಕುಗಳಲ್ಲಿನ ತಲಾ ಒಬ್ಬರಂತೆ 13 ಸಿಬ್ಬಂದಿಯನ್ನು ಕಾರ್ಮಿಕ ಸಚಿವರು ಸೇವೆಯಿಂದ ಕಿತ್ತೆಸೆದಿದ್ದರು. ಇಲಾಖೆಯಲ್ಲಿ ಖಾಯಂ ಹುದ್ದೆ ಭರ್ತಿಯಾಗದಿರುವುದೇ ಇವರ ಮರು ನೇಮಕಕ್ಕೆ ಕಾರಣವಾಗಿದೆ.

ಹೊಸ ಟಾಸ್ಕ್‌:

ವಜಾಗೊಂಡಿದ್ದವರನ್ನು ಮತ್ತೆ ನೇಮಕ ಮಾಡುವ ಮುನ್ನ ಅವರಿಗೆ ಹೊಸ ಟಾಸ್ಕ್‌ ನೀಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿನ ಬೋಗಸ್‌ ಕಾರ್ಡ್‌ ಪತ್ತೆ ಹಚ್ಚುವ ಕಾರ್ಯ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ತಾವೇ ನೀಡಿದ ಕಾರ್ಡ್‌ ತಾವೇ ರದ್ದುಪಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕಾರ್ಮಿಕ ಸಚಿವ ಸಂತೋಷ ಲಾಡ್‌ ಪ್ರಗತಿ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ ಹೆಚ್ಚಿನ ಕಾರ್ಮಿಕರ ನೋಂದಣಿಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕಾಗಿ 13 ನೌಕರರ ಸೇವೆಯನ್ನು ರದ್ದುಗೊಳಿಸಿದ್ದರು. ಈಗ ಅವರನ್ನೇ ಮತ್ತೆ ಸೇವೆಗೆ ತೆಗೆದುಕೊಳ್ಳಲಾಗಿದೆ. ಈಗ ಸರ್ವೇ ಮಾಡಿ ಬೋಗಸ್‌ ಕಾರ್ಡ್‌ ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಕಳೆದ 6 ತಿಂಗಳಲ್ಲಿ 5 ಸಾವಿರ ಕಾರ್ಡ್‌ ರದ್ದುಪಡಿಸಲಾಗಿದೆ ಎನ್ನುತ್ತಾರೆ

ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕೊರಳಿ.

Share this article