ಕಡೂರುನಿಂದ ಸಾವಿರಾರು ಭಕ್ತರು ದತ್ತಪೀಠಕ್ಕೆ

KannadaprabhaNewsNetwork | Published : Dec 15, 2024 2:04 AM

ದತ್ತಪೀಠದಲ್ಲಿ ನಡೆದ ‘ದತ್ತಜಯಂತಿ’ ಕಾರ್ಯಕ್ರಮಕ್ಕೆ ತಾಲೂಕಿನಿಂದ ಸಾವಿರಾರು ದತ್ತಭಕ್ತರು ಹಾಗು ಗುರುಗಳು ಪೀಠಕ್ಕೆ ತೆರಳಿ ದರ್ಶನ ಪಡೆದರು ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ದತ್ತಪೀಠದಲ್ಲಿ ನಡೆದ ‘ದತ್ತಜಯಂತಿ’ ಕಾರ್ಯಕ್ರಮಕ್ಕೆ ತಾಲೂಕಿನಿಂದ ಸಾವಿರಾರು ದತ್ತಭಕ್ತರು ಹಾಗು ಗುರುಗಳು ಪೀಠಕ್ಕೆ ತೆರಳಿ ದರ್ಶನ ಪಡೆದರು ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

ಅವರು ಶನಿವಾರ ಪಟ್ಟಣದ ಬಿಜೆಪಿ ಕಚೇರಿಯ ಮುಂದೆ ದತ್ತ ಭಕ್ತರ ಜೊತೆ ಪೀಠಕ್ಕೆ ತೆರಳುವ ಮುನ್ನ ಮಾತನಾಡಿದರು. ತಾಲೂಕಿನಾದ್ಯಂತ ಸಾವಿರಾರು ಯುವಕರು ದೇವಾಲಯಗಳಲ್ಲಿ ದತ್ತ ಮಾಲೆ ಧರಿಸಿ ದತ್ತ ಜಯಂತಿಗೆ ತೆರಳಲು ಸಿದ್ಧತೆ ನಡೆಸಿರುವುದನ್ನು ಶ್ಲಾಘಿಸಿದ ಅವರು, ನಂಬಿದ ಭಕ್ತರನ್ನು ದೇವರು ಎಂದಿಗೂ ಕೈ ಬಿಡುವುದಿಲ್ಲ. ನಂಬಿಕೆ, ವಿಶ್ವಾಸವನ್ನು ಪ್ರತಿಯೊಬ್ಬರು ಪಾಲಿಸಿದಾಗ ದೇವರನ್ನು ಕಾಣಲು ಸಾಧ್ಯ ಎಂದರು.ಈ ಭಾರಿ ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದ ಮಾಲಾಧಾರಿಗಳು ಪೀಠಕ್ಕೆ ತೆರಳಿರುವುದು ವಿಶೇಷವಾಗಿತ್ತು. ಶ್ರೀ ಅನುಸೂಯಾ ದೇವಿ ಪೂಜೆಗೆ ಹಾಗೂ ಬೃಹತ್ ಶೋಭಾಯಾತ್ರೆಗೆ ಶನಿವಾರ ದತ್ತಜಯಂತಿ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ತೆರಳುತ್ತಿದ್ದಾರೆ. ಶ್ರೀ ಅನುಸೂಯಾ ಪೂಜೆಗೂ ಸಹ ಸಾವಿರಾರು ಮಹಿಳೆಯರು ತೆರಳಿದ್ದರು ಎಂದು ತಿಳಿಸಿದರು.ಕಡೂರು ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಹ ಗಿರಿಗೆ ತೆರಳಿ ದರ್ಶನ ಪಡೆದರು. ದತ್ತಮಾಲಾ ಅಭಿಯಾನದ ಜಿಲ್ಲಾ ಪ್ರಮುಖ್ ಕಡೂರು ಎ. ಮಣಿ ಮಾತನಾಡಿ, 27 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ದತ್ತ ಪೀಠದಲ್ಲಿ ನಡೆಯುತ್ತಿರುವ ದತ್ತಜಯಂತಿ, ದತ್ತಮಾಲೆ ಮತ್ತು ಅನುಸೂಯ ಪೂಜಾ ಕಾರ್ಯಕ್ರಮದಲ್ಲಿ ಕಡೂರು ತಾಲೂಕಿನ ಭಕ್ತರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.ಬಿಜೆಪಿ ಮುಖಂಡ ದೇವಾನಂದ್, ಟಿ.ಆರ್. ಲಕ್ಕಪ್ಪ, ಚಿನ್ನುದೇವರಾಜ್, ರಾಜನಾಯ್ಕ, ಮಲ್ಲಿಕಾರ್ಜುನ್, ಶಾಮಿಯಾನ ಚಂದ್ರು, ಯತಿರಾಜ್, ಅಗ್ನಿನಾಗ, ನಾಗರಾಜ್, ಕುರುಬಗೆರೆ ಮಹೇಶ್ ಸೇರಿದಂತೆ ಮತ್ತಿತರರು ಮಾಲೆ ಧಾರಣೆ ಮಾಡಿ ತೆರಳಿದರು.