ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಹಳೇ ಡಿಸಿ ಕಚೇರಿ ಸಮೀಪದ ಟಿಪ್ಪುಸುಲ್ತಾನ ಉದ್ಯಾನವನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಆಶಾಕಾರ್ಯಕರ್ತೆಯರು ಘೋಷಣೆಗಳನ್ನು ಕೂಗಿದರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು. ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಕಳೆದ ಏಳು ತಿಂಗಳ ಹಿಂದೆ ಸಿಎಂ ನೀಡಿರುವ ನಿರ್ದೇಶನಗಳು ಜಾರಿಯಾಗದೇ ಹೋಗಿರುವದನ್ನು ಖಂಡಿನೀಯ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ, ಏಳೆಂಟು ತಿಂಗಳ ಹಿಂದೆ ನಡೆಸಿದ ಹೋರಾಟ, ಸಭೆಗಳೆಲ್ಲವೂ ವ್ಯತ್ಯವಾಗಿದ್ದು ಈ ನಡುವೆ ಎರಡು ಸಾವಿರ ಸುಗಮಕಾರರನ್ನು ಸೇವೆಯಿಂದ ತೆಗೆದುಹಾಕಿದ್ದಾರೆ. 60 ವರ್ಷ ವಯಸ್ಸಾದ ಆಶಾಕಾರ್ಯಕರ್ತೆಯರಿಗೆ ಧಿಡೀರ್ ತೆಗೆದು ಹಾಕಿದ್ದಾರೆ. 41 ಸಾವಿರ ಆಶಾ ಕಾರ್ಯಕರ್ತೆಯರನ್ನು ಮೌಲ್ಯ ಮಾಪನ ಮಾಡುವ ಆದೇಶ ಹೊರಡಿಸಲಾಗಿದೆ. ಆಶಾ ಸಾಫ್ಟ್ ಮೂಲಕ ಆನ್ಲೈನ್ ದಾಖಲಾತಿ ಅವೈಜ್ಞಾನಿಕವಾಗಿದ್ದು ಸೇವೆ ಕಳೆದುಕೊಳ್ಳುವ ಆತಂಕ ಶುರುವಾಗಿದೆ ಎಂದು ನೋವು ತೋಡಿಕೊಂಡರು.ಈ ಹಿನ್ನೆಲೆಯಲ್ಲಿ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.14 ವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿಮುಟ್ಟಿಸಲಾಗುತ್ತಿದೆ ಎಂದು ಹೋರಾಟಗಾರರು ತಿಳಿಸಿದರು.
ಈ ಧರಣಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಚಾಮರಸ ಮಾಲಿಪಾಟೀಲ್, ಜಾನ್ವೆಸ್ಲಿ, ಡಾ.ಶಾರದಾ ಹುಲಿನಾಯಕ,ಬಿ.ಬಸವರಾಜ,ಮಹೇಶ, ಅಣ್ಣಪ್ಪ, ಸರೋಜಾ,ಈರಮ್ಮ, ರಾಧಾ,ಗೌರಮ್ಮ,ಮಲ್ಲಮ್ಮ, ಪ್ರಭಾವತಿ,ಲಕ್ಷ್ಮೀ ಸೇರಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.