ಮೂವರು ನೀರುಪಾಲು ಪ್ರಕರಣ: ಇಬ್ಬರ ಶವ ಪತ್ತೆ, ಇನ್ನೊಂದಕ್ಕೆ ಹುಡುಕಾಟ

KannadaprabhaNewsNetwork | Published : Mar 10, 2025 12:18 AM

ತಾಲೂಕಿನ ಮದಲಗಟ್ಟಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಶಿರಹಟ್ಟಿ ಗ್ರಾಮದ ಮೂವರು ಯುವಕರು ಮುಳುಗಿದ್ದು, ಇದರಲ್ಲಿ ಎರಡು ಶವಗಳು ಮಾತ್ರ ಪತ್ತೆಯಾಗಿದ್ದು, ಇನ್ನೊಂದು ಶವದ ಪತ್ತೆಗೆ ಹುಡುಕಾಟ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಮದಲಗಟ್ಟಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಶಿರಹಟ್ಟಿ ಗ್ರಾಮದ ಮೂವರು ಯುವಕರು ಮುಳುಗಿದ್ದು, ಇದರಲ್ಲಿ ಎರಡು ಶವಗಳು ಮಾತ್ರ ಪತ್ತೆಯಾಗಿದ್ದು, ಇನ್ನೊಂದು ಶವದ ಪತ್ತೆಗೆ ಹುಡುಕಾಟ ನಡೆಯುತ್ತಿದೆ.

ಭಾನುವಾರ ಮಧ್ಯಾಹ್ನ 12 ಗಂಟೆಗೆ ಮಹೇಶ, ಸಂಜೆ 4 ಗಂಟೆಗೆ ವೇಳೆಗೆ ಶರಣಪ್ಪ ಅವರ ಶವ ಪತ್ತೆಯಾಗಿದೆ. ಗುರುನಾಥ ಎಂಬ ವ್ಯಕ್ತಿಯ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಮೀನುಗಾರರು ಶೋಧ ನಡೆಸುತ್ತಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಯಾಂತ್ರಿಕೃತ ದೋಣಿ ಮೂಲಕ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಉಳಿದಂತೆ ಸ್ಥಳೀಯ ಮೀನುಗಾರರು ತೆಪ್ಪದಲ್ಲಿ ಮೀನಿನ ಬಲೆ ಹಾಕಿ ಪತ್ತೆ ಮಾಡಲು ಮುಂದಾಗಿದ್ದಾರೆ. ಪತ್ತೆ ಕಾರ್ಯದಲ್ಲಿ 20ಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.

ಮೃತರ ಸಂಬಂಧಿಕರು ಮದಲಗಟ್ಟಿ ಗ್ರಾಮಕ್ಕೆ ಆಗಮಿಸಿದ್ದು, ಯುವಕರ ಶವಗಳನ್ನು ಹೊರ ತೆಗೆಯುತ್ತಿದಂತೆಯೇ ಅವರ ರೋದನ ಮುಗಿಲು ಮುಟ್ಟಿತ್ತು.

ಸ್ಥಳದಲ್ಲಿ ತಹಸೀಲ್ದಾರ್‌ ಜಿ. ಸಂತೋಷಕುಮಾರ ಮತ್ತು ಪೊಲೀಸರು ಹಾಗೂ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.ಕೈಕೊಟ್ಟ ರೇಷ್ಮೆ ಬೆಳೆ: ಯುವ ರೈತ ಆತ್ಮಹತ್ಯೆ:

ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೋಳ ಗ್ರಾಮದ ಯುವರೈತ ಸಾಲಬಾಧೆ ತಾಳದೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಸಂಭವಿಸಿದೆ.ಬನ್ನಿಗೋಳ ಗ್ರಾಮದ ಆರ್. ಸಂತೋಷ್ ಕುಮಾರ (೨೭) ಮೃತ ರೈತ.ಕಳೆದ ೩ ವರ್ಷಗಳಿಂದ ರೇಷ್ಮೆ ಬೆಳೆ ಕೈಕೊಟ್ಟ ಹಿನ್ನೆಲೆ ಸಾಲ ತೀರಿಸಲಾಗದೆ ಮನನೊಂದು ತಮ್ಮ ತೋಟದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧.೫ ಎಕರೆ ಸ್ವಂತ ಜಮೀನು ಹೊಂದಿದ್ದರು. ಪಕ್ಕದ ಸಿಗೇನಹಳ್ಳಿ ಗ್ರಾಮದ ಬಳಿ ಸ್ವಲ್ಪ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಉಳುಮೆ ಮಾಡುತ್ತಿದ್ದರು. ಅವರು ಎಸ್‌ಬಿಐನಲ್ಲಿ ₹೧.೫ ಲಕ್ಷ ಬೆಳೆ ಸಾಲ ಮತ್ತು ಬಂಗಾರ ಒತ್ತೆ ಇರಿಸಿ ₹೧.೫ ಲಕ್ಷ, ನೆರೆಹೊರೆಯವರಿಂದ ₹ ೧ ಲಕ್ಷ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ತಾಲೂಕಿನ ತಂಬ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.