ಕನ್ನಡಪ್ರಭ ವಾರ್ತೆ ಮುಂಡಗೋಡ
ಲೋಸಾರ ಹಬ್ಬದ ಕೊನೆಯ ದಿನ ಭೂತಪ್ರೇತಗಳನ್ನು ಸಂತುಷ್ಟಗೊಳಿಸಲು ವಿವಿಧ ಬಟ್ಟೆ, ದವಸ ದಾನ್ಯಗಳನ್ನು ಸುಡುವುದು ಸಂಪ್ರದಾಯವಾಗಿದ್ದು, ಅದೇ ರೀತಿ ಇಂದು ಕಾಲನಿಯ ಟಿಬೇಟಿಯನ್ನರೆಲ್ಲ ಒಂದು ಕಡೆ ಸಾಮೂಹಿಕವಾಗಿ ಸೇರಿ ವಿವಿಧ ಹಿಟ್ಟಿನಿಂದ ತಯಾರಿಸಲಾದ ಬೃಹತ್ ಭೂತದ ಗೊಂಬೆಗಳ ಮೆರವಣಿಗೆ ನಡೆಸಿದರು. ಬಳಿಕ ಟಿಬೇಟಿಯನ್ ಕಾಲನಿ ನಂ ೧ ಗಂದೆನ್ ಬೌದ್ದ ಮಠದ ಬಳಿ ಟಿಬೇಟಿಯನ್ ಸಂಪ್ರದಾಯದಂತೆ ಮೇಲಂ ಪೂಜಾ ವಿಧಿ ವಿಧಾನಗಳೊಂದಿಗೆ ಬಟ್ಟೆ, ದವಸ, ಧಾನ್ಯಗಳನ್ನು ಹಾಕಿ ದಹನ ಮಾಡಲಾಯಿತು.
ಫೆ. ೨೩ರಿಂದ ಪ್ರಾರಂಭವಾದ ಲೋಸಾರ ಹಬ್ಬ ಸುಮಾರು ೧೦ ದಿನಗಳ ಬಳಿಕ ಕೊನೆಯ ದಿನದಂದು ಭೂತಪ್ರೇತಗಳಿಂದ ಯಾವುದೇ ತೊಂದರೆ ಬರದಿರಲು, ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಈ ರೀತಿ ದವಸ ದಾನ್ಯಗಳನ್ನು ಹಾಕಿ ಭೂತ ದಹನ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ.ಈ ಸಂದರ್ಭ ಟಿಬೇಟಿಯನ್ ಮುಖ್ಯಸ್ಥರು ಹಾಗೂ ಎಲ್ಲ ಬೌದ್ಧ ಮಠಗಳ ಬಿಕ್ಕುಗಳು ಉಪಸ್ಥಿತರಿದ್ದರು. ಈ ವೇಳೆ ಟಿಬೇಟಿಯನ್ ಕಾಲನಿ ಸಂಪೂರ್ಣ ಜನಜಂಗುಳಿಯಿಂದ ಕೂಡಿತ್ತು.