ಕಂಪ್ಲಿಯಲ್ಲಿ ತಿರಂಗಾ ಯಾತ್ರೆ

KannadaprabhaNewsNetwork | Published : May 27, 2025 12:46 AM
ಆಪರೇಷನ್ ಸಿಂದೂರ್ ಯಶಸ್ವಿಗೊಳಿಸಿದ ಸೈನಿಕರ ಅಭಿನಂದಿಸಲು ಪಟ್ಟಣದಲ್ಲಿ ಬಿಜೆಪಿ ಹಾಗೂ ನಾಗರಿಕರ ವೇದಿಕೆ ಕಂಪ್ಲಿ ವತಿಯಿಂದ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಘೋಷಣೆಯೊಂದಿಗೆ ಸೋಮವಾರ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.

ಭಯೋತ್ಪಾದನೆ ನಿರ್ಮೂಲನೆಗೆ ನಮ್ಮ ದೇಶದ ದಿಟ್ಟಹೆಜ್ಜೆ: ಅನಿಲ್‌ ನಾಯ್ಡು ಮೋಕಾಕನ್ನಡಪ್ರಭ ವಾರ್ತೆ ಕಂಪ್ಲಿ

ಆಪರೇಷನ್ ಸಿಂದೂರ್ ಯಶಸ್ವಿಗೊಳಿಸಿದ ಸೈನಿಕರ ಅಭಿನಂದಿಸಲು ಪಟ್ಟಣದಲ್ಲಿ ಬಿಜೆಪಿ ಹಾಗೂ ನಾಗರಿಕರ ವೇದಿಕೆ ಕಂಪ್ಲಿ ವತಿಯಿಂದ “ರಾಷ್ಟ್ರ ರಕ್ಷಣೆಗಾಗಿ ನಾಗರಿಕರು” ಎಂಬ ಘೋಷಣೆಯೊಂದಿಗೆ ಸೋಮವಾರ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕಾ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ನರಮೇಧಕ್ಕೆ ಇಡೀ ಭಾರತವೇ ದುಃಖತಪ್ತವಾಗಿತ್ತು. ಅಲ್ಲದೇ ಎಲ್ಲೆಡೆ ಪ್ರತೀಕಾರದ ಕೂಗು ಭುಗಿಲೆದ್ದಿತ್ತು. ಹಿಂದೂ ಪುರುಷರನ್ನೇ ಗುರಿಯಾಗಿಸಿ ಕೊಂದು, ಅವರ ಪತ್ನಿಯರ ಸಿಂಧೂರ ಅಳಿಸಿದ ಉಗ್ರರಿಗೆ ಆಪರೇಷನ್ ಸಿಂದೂರದ ಹೆಸರಿನಲ್ಲಿಯೇ ಪ್ರತೀಕಾರದ ದಾಳಿಯನ್ನು ಸೇನೆ ನಡೆಸಿ, 9 ಸ್ಥಳಗಳಲ್ಲಿ ಬೀಡುಬಿಟ್ಟಿದ್ದ ಉಗ್ರ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ತಕ್ಕ ಶಾಸ್ತಿ ಮಾಡಿತ್ತು. ಭಾರತೀಯ ಸೇನೆ ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನದ ಯಾವ ಒಬ್ಬ ನಾಗರಿಕನನ್ನೂ ಗುರಿಯಾಗಿಸದೇ ಬರೀ ಉಗ್ರರನ್ನು ಹಾಗೂ ಅವರ ನೆಲೆಗಳನ್ನು ಮಾತ್ರ ಪುಡಿಗಟ್ಟಿ ಭಯೋತ್ಪಾದನೆ ನಿರ್ಮೂಲನೆಗೆ ದಿಟ್ಟಹೆಜ್ಜೆ ಇರಿಸಿದೆ ಎಂದು ಹೇಳಿದರು.ಬಿಜೆಪಿ ಮತ್ತು ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ದೇಶದಾದ್ಯಂತ ತಿರಂಗಾ ಯಾತ್ರೆ ಆಯೋಜಿಸಿದ್ದು, ಆಪರೇಷನ್ ಸಿಂದೂರ್‌ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ, ನಮ್ಮ ಶೂರ ಸಶಸ್ತ್ರ ಪಡೆಗಳ ಧೈರ್ಯ, ಬಲಿದಾನ ಹಾಗೂ ಸೇವೆಯನ್ನು ಗೌರವಿಸುವುದು ಈ ಯಾತ್ರೆಯ ಉದ್ದೇಶವಾಗಿದೆ. ಭಯೋತ್ಪಾದನೆಯನ್ನು ನಾವೆಂದೂ ಸಹಿಸುವುದಿಲ್ಲ ಎಂಬ ದಿಟ್ಟ ಉತ್ತರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಜಗತ್ತಿಗೆ ನೀಡಿದ್ದಾರೆ ಎಂದರು.

ಮಳೆಯಲ್ಲಿ ಸಾಗಿದ ತಿರಂಗಾ ಯಾತ್ರೆ:

ಇಲ್ಲಿನ ಶ್ರೀ ಉದ್ಭವ ಮಹಾ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ವಿಜಯ ತಿರಂಗಾ ಯಾತ್ರೆ ಡಾ. ರಾಜಕುಮಾರ ರಸ್ತೆ ಮಾರ್ಗವಾಗಿ ಸಂಚರಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡಿತು. ಸೋಮವಾರ ಬೆಳಗ್ಗೆಯಿಂದಲೇ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಲ್ಲಿಯೇ ನಾಗರಿಕರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರೀಯ ಧ್ವಜ ಹಿಡಿದು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ದೇಶ ಹಾಗೂ ಸೈನಿಕರ ಪರ ಘೋಷಣೆ ಕೂಗುತ್ತ ದೇಶ ಭಕ್ತಿ ಮೆರೆದರು.

ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ. ಮಹದೇವ್, ಮುಖಂಡರಾದ ಅಳ್ಳಳ್ಳಿ ವೀರೇಶ್, ಪಿ. ಬ್ರಹ್ಮಯ್ಯ, ವಿ.ಎಲ್. ಬಾಬು, ಎಸ್.ಎಂ. ನಾಗರಾಜ್, ಸುದರ್ಶನ್ ರೆಡ್ಡಿ, ರಮೇಶ್ ಹೂಗಾರ್, ರಾಮಾಂಜಿನಿ, ಕೊಡಿದಲ ರಾಜು, ರವಿ, ವಿರೂಪಾಕ್ಷಿ, ವೀರೇಶ್, ಶಂಭುಲಿಂಗ, ಗುರು ಸೇರಿ ಅನೇಕರಿದ್ದರು.